ಅಬ್ಬೇನಹಳ್ಳಿ ಗ್ರಾಪಂನಲ್ಲಿ ಸಂಕಲ್ಪ ಯಾತ್ರೆ ಉದ್ಘಾಟಿಸಿದ ಸಂಸದ ಮುನಿಸ್ವಾಮಿ ಅಭಿಪ್ರಾಯ । ಕೇಂದ್ರ ಸರ್ಕಾರ ಯೋಜನೆಗಳನ್ನು ಜನರಿಗೆ ತಲುಪಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ
ಪ್ರಧಾನಿ ಮೋದಿಯವರ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಗೆ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದು ಸಂಸದ ಎಸ್. ಮುನಿಸ್ವಾಮಿ ಹೇಳಿದರು.
ತಾಲೂಕಿನ ಕಸಬಾ ಹೋಬಳಿಯ ಅಬ್ಬೇನಹಳ್ಳಿ ಗ್ರಾಪಂನಲ್ಲಿ ಹಮ್ಮಿಕೊಂಡಿದ್ದ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ರೈತರು, ಮಹಿಳೆಯರು, ಕಾರ್ಮಿಕರು, ಮಕ್ಕಳು, ಹಿರಿಯರ ಸಮಸ್ಯೆಗಳನ್ನು ಅರಿತ ಪ್ರಧಾನಮಂತ್ರಿಗಳು ಜನತೆಯ ಅಭಿವೃದ್ಧಿಗೆ ಯಾವ ರೀತಿಯ ಯೋಜನೆಗಳು ಹಾಗೂ ಸವಲತ್ತುಗಳನ್ನು ಒದಗಿಸಬೇಕು ಎಂದು ಚಿಂತಿಸಿ ಎಲ್ಲಾ ವರ್ಗದ ಜನತೆಯ ಅಭಿವೃದ್ಧಿಗಾಗಿ ಹಲವು ರೀತಿಯ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ ಎಂದರು.ಮೋದಿಯವರು ಅನುಷ್ಠಾನಗೊಳಿಸಿರುವ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಗ್ರಾಪಂ ಅಧ್ಯಕ್ಷರು, ಸದಸ್ಯರು ಯಾವ ರೀತಿ ಕೆಲಸ ಮಾಡಬೇಕು ಎಂದು ಯೋಚಿಸಿ, ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದರು. ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ಯು ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಡಿಸೆಂಬರ್ ೨೪ರಂದು ಪ್ರಾರಂಭವಾಗಿ ಈಗಾಗಲೇ ೧೨೧ ಗ್ರಾಪಂ ಗಳಿಗೆ ತೆರಳಿ ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಸವಲತ್ತುಗಳ ಬಗ್ಗೆ ಜಾಗೃತಿ ಮೂಡಿ ಅವರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಪ್ರತಿಯೊಬ್ಬ ಮಹಿಳೆಯೂ ಸ್ವಾವಲಂಬಿ ಜೀವನ ನಡೆಸಲು ಮಹಿಳಾ ಸಮ್ಮಾನ್ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಜಾರಿಗೊಳಿಸಿದ್ದಾರೆ, ವಿಶ್ವಕರ್ಮ ಯೋಜನೆಯಡಿ ಸಂಪ್ರದಾಯಿಕ ಕರಕುಶಲಕರ್ಮಿಗಳ ಸ್ವ ಉದ್ಯೋಗಕ್ಕಾಗಿ ೧೩೦೦೦ ಕೋಟಿ ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಆಯ್ಕೆಯಾದ ಫಲಾನುಭವಿಗಳಿಗೆ ತರಬೇತಿ ನೀಡಿ, ೧೫೦೦೦ ರು. ಕಿಟ್ ನೀಡಿ ತರಬೇತಿ ಅವಧಿಯಲ್ಲಿ ಟೈಪ್ ಸಹ ನೀಡಲಾಗುವುದು. ತರಬೇತಿಯ ನಂತರ ಒಂದು ಲಕ್ಷ ಮಹಿಳೆಯರ ಖಾತೆಗೆ ಜಮಾ ಮಾಡಲಾಗುವುದು. ೧೮ ಕಂತಿನಲ್ಲಿ ಮರುಪಾವತಿ ಮಾಡಿದರೆ ಮತ್ತೊಮ್ಮೆ ೨ ಲಕ್ಷ ಯಾವುದೇ ಶುರತಿ ದಾಖಲೆ ಇಲ್ಲದೆ ಸಾಲದ ಯೋಜನೆ, ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸಿದ್ದಾರೆ ಎಂದರು. ಚುನಾಯಿತ ಪ್ರತಿನಿಧಿಗಳು ಮುಖಂಡರು ಅಂಗನವಾಡಿ ಆಶಾ ಕಾರ್ಯಕರ್ತೆಯರು ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಸವಲತ್ತುಗಳ ಬಗ್ಗೆ ಜಾಗೃತಿ ಮೂಡಿಸಿ ಸರ್ಕಾರದ ಕಾರ್ಯಕ್ರಮಗಳು ಯಶಸ್ವಿಗೆ ಶ್ರಮಿಸಬೇಕು ಎಂದರು.
ರಾಮ ಮಂದಿರ ನಿರ್ಮಾಣ ವಾರಣಾಸಿ ಕಾಶಿ ಅಭಿವೃದ್ಧಿ ಜಮ್ಮು ಕಾಶ್ಮೀರ ೩೭೦ ವಿಧೇಯಕ ರದ್ದುಪಡಿಸಿ ಒಂದೇ ಸಂವಿಧಾನ ಕಾನೂನು ಕಾರ್ಯರೂಪಕ್ಕೆ ತಂದಿದ್ದು ದೇಶಾದ್ಯಂತ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಪ್ರತಿ ಗ್ರಾಪಂನಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರುಕಾರ್ಯಕ್ರಮದಲ್ಲಿ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಮುನಾ ಬಾಯಿ, ಸದಸ್ಯರಾದ ಮುನಿ ವೆಂಕಟಮ್ಮ, ಮಂಜುನಾಥ್, ಶ್ರೀಧರ್ ರೆಡ್ಡಿ, ರಾಮಾಂಜಿ, ಶಾಂತಮ್ಮ, ಶ್ರೀನಿವಾಸ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ರವೀಂದ್ರ, ಶಿಶು ಅಭಿವೃದ್ಧಿ ಕಚೇರಿಯ ಮೇಲ್ವಿಚಾರಕಿ ಸರಿತಾ ಪಾವಲೆ, ಅಂಚೆ ಇಲಾಖೆಯ ಸತೀಶ್, ದುರ್ಗಾಪರಮೇಶ್ವರಿ ಗ್ಯಾಸ್ ಏಜೆನ್ಸಿ ಮಾಲೀಕರಾದ ಮಮತಾ, ಪಿಡಿಒ ರಾಘವೇಂದ್ರ ರಾವ್, ಮುಖಂಡರಾದ ಟಿ.ಬಿ.ಕೃಷ್ಣಪ್ಪ, ಅಗ್ರಿ ನಾರಾಯಣಪ್ಪ, ಸೋಮಣ್ಣ ಚಂದ್ರಶೇಖರ್, ವೆಂಕಟೇಶ್, ವೇಣು, ರಮೇಶ್ ಗೌಡ, ತಪಲಾರಾಜು, ಸೂರ್ಯನಾರಾಯಣರಾವ್ ಹಾಜರಿದ್ದರು.
---ಮಾಲೂರು ತಾಲೂಕಿನ ಕಸಬಾ ಹೋಬಳಿಯ ಅಬ್ಬೇನಹಳ್ಳಿ ಗ್ರಾಪಂನಲ್ಲಿ ಹಮ್ಮಿಕೊಂಡಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಸಂಸದ ಎಸ್.ಮುನಿಸ್ವಾಮಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಅನಿಲ ಸಂಪರ್ಕವನ್ನು ವಿತರಿಸಿದರು.