ಸಂಘ ಪರಿವಾರ, ಬಿಜೆಪಿ ಪಿತೂರಿಯಿಂದ ಅಶಾಂತಿ ಸೃಷ್ಠಿ: ಅಫ್ಸರ್‌ ಟೀಕೆ

KannadaprabhaNewsNetwork | Published : Sep 25, 2024 1:01 AM

ಸಾರಾಂಶ

ಪ್ರಕ್ಷುಬ್ಧತೆಗೆ ಒಳಗಾಗಿದ್ದ ದಾವಣಗೆರೆ ನಗರದಲ್ಲಿ ಪುನಃ ಶಾಂತಿ ಸ್ಥಾಪಿಸುವಲ್ಲಿ ಪೊಲೀಸ್ ಇಲಾಖೆ ಕಾರ್ಯವೈಖರಿ ಶ್ಲಾಘನೀಯವಾಗಿದೆ. ಗಲಭೆ ಸಂಬಂಧ ಆರೋಪಿಗಳನ್ನು ಹಿಡಿಯುವ ಭರದಲ್ಲಿ ಅಮಾಯಕರನ್ನು ಬಂಧನ ಆಗಬಾರದು ಎಂದು ಸೋಷಿಯಲ್ ಡೆಮಾಕ್ರಟಿಕ್‌ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ದಾವಣಗೆರೆಯಲ್ಲಿ ಒತ್ತಾಯಿಸಿದ್ದಾರೆ.

- ಗಲಭೆ ತಡೆಯುವಲ್ಲಿ ಪೊಲೀಸರ ಕಾರ್ಯ ಶ್ಲಾಘನೀಯ

- - - ದಾವಣಗೆರೆ: ಪ್ರಕ್ಷುಬ್ಧತೆಗೆ ಒಳಗಾಗಿದ್ದ ದಾವಣಗೆರೆ ನಗರದಲ್ಲಿ ಪುನಃ ಶಾಂತಿ ಸ್ಥಾಪಿಸುವಲ್ಲಿ ಪೊಲೀಸ್ ಇಲಾಖೆ ಕಾರ್ಯವೈಖರಿ ಶ್ಲಾಘನೀಯವಾಗಿದೆ. ಗಲಭೆ ಸಂಬಂಧ ಆರೋಪಿಗಳನ್ನು ಹಿಡಿಯುವ ಭರದಲ್ಲಿ ಅಮಾಯಕರನ್ನು ಬಂಧನ ಆಗಬಾರದು ಎಂದು ಸೋಷಿಯಲ್ ಡೆಮಾಕ್ರಟಿಕ್‌ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಒತ್ತಾಯಿಸಿದರು.

ನಗರದ ಎಸ್‌ಡಿಪಿಐ ಕಚೇರಿಯಲ್ಲಿ ನಡೆದ ಜಿಲ್ಲಾ ಘಟಕ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಧಾರ್ಮಿಕ ಸಹಿಷ್ಣುತೆಯ ಗುಣವು ನಮ್ಮ ಶರಣರು, ಸೂಫಿಗಳ ಪರಂಪರೆಯಲ್ಲಿದೆ. ಹೀಗಾಗಿ, ರಾಷ್ಟ್ರದ ಪ್ರಗತಿಗೆ ಸಾಮರಸ್ಯದ ಆಚರಣೆಗಳು ಅಗತ್ಯವಾಗಿವೆ ಎಂದರು.

ದಾವಣಗೆರೆಯಲ್ಲಿ ಕೆಲ ಸಂಘ ಪರಿವಾರದವರು ಗಣೇಶೋತ್ಸವದ ಹೆಸರಿನಲ್ಲಿ ಸಾಮಾಜಿಕ ಶಾಂತಿಗೆ ಭಂಗ ತರುತ್ತಿದ್ದಾರೆ. ಅಂಥ ಕಿಡಿಗೇಡಿಗಳನ್ನು ಗಣೇಶ ಮೆರವಣಿಗೆಯಿಂದ ದೂರ ಇಟ್ಟರೇ ಅನಾಹುತ ನಡೆಯುವುದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಮೊನ್ನೆ ಈದ್ ಮಿಲಾದ್ ಮೆರವಣಿಗೆಯಲ್ಲಿ ದಾವಣಗೆರೆಯಲ್ಲಿ ಸಾವಿರಾರು ಮುಸ್ಲಿಮರು ಸೇರಿದರು. ಯಾವುದೇ ಪ್ರಚೋದನಕಾರಿ ಘೋಷಣೆ ಕೂಗದೇ, 8 ಕಿಮೀ ಉದ್ದದ ಮೆರವಣಿಗೆ ನಡೆಸಿದರು ಎಂದರು.

ಹೊನ್ನಾಳಿ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಇಲ್ಲಿಗೆ ಬಂದು ಬೇತೂರು ರಸ್ತೆಯ ಗಲಾಟೆಗೆ ಸಂಬಂಧಿಸಿದಂತೆ ಮೂವರನ್ನು ಬಿಡಿಸಿದ್ದಾರೆಂಬ ಮಾಹಿತಿ ಇದೆ. ಇದರ ಸತ್ಯಾಸತ್ಯತೆಯನ್ನು ಪೊಲೀಸ್ ಇಲಾಖೆ ಜನಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡಬೇಕು ಎಂದರು.

ಸಮಿತಿ ರಾಜ್ಯ ಸದಸ್ಯ, ಹೈಕೋರ್ಟ್ ವಕೀಲ ಮಜೀದ್ ಖಾನ್‌, ಸಂಘಟನೆ ಜಿಲ್ಲಾ ಉಪಾಧ್ಯಕ್ಷ ರಿಯಾಝ್ ಅಹ್ಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮೊಹಸೀನ್, ಫಯಾಜ್ ಅಹಮದ್, ಕಾರ್ಯದರ್ಶಿ ಮೊಹಮ್ಮದ್ ಅಜರುದ್ದೀನ್, ಕೋಶಾಧಿಕಾರಿ ಎ.ಆರ್. ತಾಹೀರ್, ಜಿಲ್ಲಾ ಸಮಿತಿ ಸದಸ್ಯರಾದ ಮನ್ಸೂರ್ ಆಲಿ, ದಾವಣಗೆರೆ ದಕ್ಷಿಣ ಅಧ್ಯಕ್ಷ ಏಜಾಜ್ ಅಹಮದ್ ಇತರರು ಇದ್ದರು.

- - - -23ಕೆಡಿವಿಜಿ1:

ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಮಾತನಾಡಿದರು.

Share this article