ದಾವಣಗೆರೆ: ದಶಕಗಳ ಸಮಸ್ಯೆಯಾಗಿದ್ದ ಅಶೋಕ ಚಿತ್ರಮಂದಿರ ಎದುರಿನ ರೇಲ್ವೆ ಗೇಟ್ ಸಮಸ್ಯೆ ಪರಿಹರಿಸುವ ಹೆಸರಿನಲ್ಲಿ ಅತ್ಯಂತ ಅವೈಜ್ಞಾನಿಕ ರೇಲ್ವೆ ಕೆಳ ಸೇತುವೆ ನಿರ್ಮಿಸಲಾಗಿದೆ ಎಂದು ಆರೋಪಿಸಿ ಸೇತುವೆಯಿಂದ ಬರುವ ವಾಹನ ಚಾಲಕರು, ಸವಾರರಿಗೆ ಜಿಲೇಬಿ ವಿತರಿಸುವ ಮೂಲಕ ಮಹಿಳಾ ಕಾಂಗ್ರೆಸ್ನಿಂದ ವಿನೂತನವಾಗಿ ಪ್ರತಿಭಟಿಸಿದ್ದಾರೆ.
ನಗರದ ಅಶೋಕ ಚಿತ್ರಮಂದಿರ ಎದುರಿನ ರೈಲ್ವೇ ಕೆಳ ಸೇತುವೆಯನ್ನು ವಕ್ರವಕ್ರವಾಗಿ, ಅವೈಜ್ಞಾನಿಕವಾಗಿ ನಿರ್ಮಿಸಿರುವುದನ್ನು ಖಂಡಿಸಿ ಸಂಸದ ಜಿ.ಎಂ.ಸಿದ್ದೇಶ್ವರ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾ ನಿರತರು, ಕಾರ್ಯಕರ್ತರು ಕೆಳ ಸೇತುವೆಯಲ್ಲಿ ಬಂದವರಿಗೆ ಸ್ಥಳದಲ್ಲಿ ಜಿಲೇಬಿಗಳನ್ನು ಬಿಸಿ ಬಿಸಿಯಾಗಿ ಮಾಡಿ ಹಂಚಿ, ಗಮನಸೆಳೆದರು.ಇದೇ ವೇಳೆ ಮಾತನಾಡಿದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ, ಮಾಜಿ ಮೇಯರ್ ಅನಿತಾಬಾಯಿ ಮಾಲತೇಶ, ಅಶೋಕ ಚಿತ್ರಮಂದಿರ ಎದುರು ಅತ್ಯಂತ ಅವೈಜ್ಞಾನಿಕ ರೇಲ್ವೆ ಕೆಳ ಸೇತುವೆ ನಿರ್ಮಿಸಿದ್ದು, ಜಿಲೇಬಿಯಂತೆ ಸೊಳ್ಳಂಬಳ್ಳವಾಗಿ ಸೇತುವೆ ನಿರ್ಮಿಸಲಾಗಿದೆ. ಇದರಿಂದಾಗಿ ನಿತ್ಯ ಸಾವಿರಾರು ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಅವೈಜ್ಞಾನಿಕ ಕೆಳ ಸೇತುವೆಯಿಂದಾಗಿ ನಿತ್ಯ ಹಲವಾರು ವಾಹನಗಳ ಸಣ್ಣಪುಟ್ಟ ಅಪಘಾತಕ್ಕೀಡಾಗುತ್ತಿರುವುದು ಸಾಮಾನ್ಯವಾಗಿದೆ. ಸಂಸದ ಸಿದ್ದೇಶ್ವರ ಅಧಿಕಾರಾವಧಿಯಲ್ಲಿ ದಾವಣಗೆರೆಯ ಹಲವಾರು ಕಡೆ ಅತ್ಯಂತ ಅವೈಜ್ಞಾನಿಕವಾಗಿ ಕಾಮಗಾರಿ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಡಿಸಿಎಂ ಟೌನ್ ಶಿಪ್ ಎದುರಿನ ರೇಲ್ವೆ ಕೆಳ ಸೇತುವೆ, ಶಿರಮಗೊಂಡನಹಳ್ಳಿ ಕೆಳ ಸೇತುವೆ ಬಳಿ ಪ್ರತಿಭಟಿಸಲಿದ್ದೇವೆ ಎಂದು ಅವರು ತಿಳಿಸಿದರು.ಇನ್ನೂ ವಿವಿಧ ಹಂತದಲ್ಲಿ ವಿನೂತನ ಹೋರಾಟ ನಡೆಸಲಿದ್ದೇವೆ. ಅವೈಜ್ಞಾನಿಕ ಕೆಳ ಸೇತುವೆಗಳ ನಿರ್ಮಾಣದಿಂದಾಗಿ ಜನ ಸಾಮಾನ್ಯರು, ತಳ್ಳುಗಾಡಿಯವರು, ವಿವಿಧ ವಾಹನ ಚಾಲಕರ ಪರದಾಡ ತಪ್ಪಿಲ್ಲ. ನಮ್ಮ ಹೋರಾಟವಂತೂ ಇಲ್ಲಿಗೆ ನಿಲ್ಲುವುದೂ ಇಲ್ಲ ಎಂದು ಎಚ್ಚರಿಸಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ ಮಾತನಾಡಿ, ಅಶೋಕ ಗೇಟ್ ಸಮಸ್ಯೆ ಪರಿಹರಿಸುವ ಬದಲು ಮತ್ತಷ್ಟು ಸಮಸ್ಯೆಯನ್ನು ಉಂಟು ಮಾಡಲಾಗಿದೆ. ಎಲ್ಲಿಯೂ ಇಲ್ಲದಂತಹ ಅವೈಜ್ಞಾನಿಕ, ಬೇಜವಾಬ್ದಾರಿಯಿಂದ ಇಲ್ಲಿ ರೇಲ್ವೆ ಕೆಳ ಸೇತುವೆ ನಿರ್ಮಿಸಲಾಗಿದೆ. ಇಂತಹ ಸೇತುವೆಗಳಲ್ಲಿ ದ್ವಿಚಕ್ರ ವಾಹನಗಳಿಂದ ಲಘು ವಾಹನಗಳ ಸಂಚಾರಕ್ಕೂ ತೀವ್ರ ಸಮಸ್ಯೆಯಾಗುತ್ತಿದ್ದರೂ, ಸಂಸದರಿಗೆ ಅದರ ಪರಿವೆಯೇ ಇಲ್ಲ ಎಂದು ಟೀಕಿಸಿದರು.ಅಶೋಕ ಟಾಕೀಸ್ ಎದುರಿನ ರೇಲ್ವೆ ಕೆಳಸೇತುವೆಯಲ್ಲಿ ಸಂಚರಿಸುವುದೇ ಹರಸಾಹಸದ ಕೆಲಸವಾಗಿದೆ. ಹಾಗಾಗಿ ಮಹಿಳಾ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಕೆಳ ಸೇತುವೆಯಿಂದ ಸುರಕ್ಷಿತವಾಗಿ ಹೊರ ಬಂದ ಜನರಿಗೆ, ವಾಹನ ಚಾಲಕರು, ಸವಾರರಿಗೆ ಜಿಲೇಬಿ ನೀಡುತ್ತಿದ್ದಾರೆ. ಸಂಸದ ಸಿದ್ದೇಶ್ವರ ಅಣತಿಯಂತೆ ಇಂತಹ ಕಾಮಗಾರಿ ನಡೆದಿದ್ದು, ಇದೇ ಸಿದ್ದೇಶ್ವರರ ಸಾಧನೆ ಎಂದು ವ್ಯಂಗ್ಯವಾಡಿದರು.
ಪಕ್ಷದ ಮುಖಂಡರಾದ ಮಾಜಿ ಮೇಯರ್ ಅಶ್ವಿನಿ ಪ್ರಶಾಂತ, ಜಿಪಂ ಮಾಜಿ ಅಧ್ಯಕ್ಷೆ ನಾಗರತ್ನಮ್ಮ, ಕವಿತಾ ಚಂದ್ರಶೇಖರ, ರಾಜೇಶ್ವರಿ, ಸಲೀನಾ, ಉಮಾ, ಮಂಗಳಮ್ಮ, ಕಾವ್ಯ, ಸಲ್ಮಾಭಾನು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ, ಪಾಲಿಕೆ ಸದಸ್ಯರಾದ ಕೆ.ಚಮನ್ ಸಾಬ್, ಎ.ನಾಗರಾಜ, ಅಯೂಬ್ ಪೈಲ್ವಾನ್, ಕೆ.ಜಿ.ಶಿವಕುಮಾರ, ಯುವರಾಜ, ರಂಗನಾಥ, ದಾಕ್ಷಾಯಣಮ್ಮ, ಸರ್ವಮಂಗಳ, ಮಂಜುಳಮ್ಮ ಹನುಮಂತಪ್ಪ ಇತರರು ಇದ್ದರು.