ಡಿಸಿಎಂ ಟೌನ್‌ಶಿಪ್‌, ಶಿರಮಗೊಂಡನಹಳ್ಳಿ ಬಳಿ ಅವೈಜ್ಞಾನಿಕ ಕೆಳಸೇತುವೆ ಕಾಂಗ್ರೆಸ್‌ ಬಳುವಳಿ

KannadaprabhaNewsNetwork |  
Published : Apr 12, 2024, 01:07 AM IST
10ಕೆಡಿವಿಜಿ11, 12-ದಾವಣಗೆರೆ ಮಾಜಿ ಮೇಯರ್ ಡಿ.ಎಸ್.ಉಮಾ ಪ್ರಕಾಶ. | Kannada Prabha

ಸಾರಾಂಶ

ಯುಪಿಎ ಸರ್ಕಾರದಲ್ಲಿ ಕೆ.ಎಸ್. ಮುನಿಯಪ್ಪ ಅವರು ಕೇಂದ್ರ ರೈಲ್ವೆ ರಾಜ್ಯ ಸಚಿವರಿದ್ದಾಗ ನಗರದ ಡಿಸಿಎಂ ಟೌನ್ ಶಿಪ್‌ ರೈಲ್ವೆ ಕೆಳಸೇತುವೆ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಆದರೂ ಈ ಕೆಳಸೇತುವೆ ಬಗ್ಗೆ ಕಾಂಗ್ರೆಸ್ಸಿನ ಮುಖಂಡರೇ ಆರೋಪಿಸುತ್ತಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಮಹಿಳಾ ಮೋರ್ಚಾ ಮುಖಂಡರು, ಮಾಜಿ ಮೇಯರ್ ಡಿ.ಎಸ್. ಉಮಾ ಪ್ರಕಾಶ ದಾವಣಗೆರೆಯಲ್ಲಿ ವ್ಯಂಗ್ಯವಾಡಿದ್ದಾರೆ.

- ರೈಲ್ವೆ ಗೇಟ್ ಸಮಸ್ಯೆ ಪರಿಹರಿಸಲಿಲ್ಲ: ಉಮಾ ಪ್ರಕಾಶ್‌ ಟೀಕೆ - - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ಯುಪಿಎ ಸರ್ಕಾರದಲ್ಲಿ ಕೆ.ಎಸ್. ಮುನಿಯಪ್ಪ ಅವರು ಕೇಂದ್ರ ರೈಲ್ವೆ ರಾಜ್ಯ ಸಚಿವರಿದ್ದಾಗ ನಗರದ ಡಿಸಿಎಂ ಟೌನ್ ಶಿಪ್‌ ರೈಲ್ವೆ ಕೆಳಸೇತುವೆ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಆದರೂ ಈ ಕೆಳಸೇತುವೆ ಬಗ್ಗೆ ಕಾಂಗ್ರೆಸ್ಸಿನ ಮುಖಂಡರೇ ಆರೋಪಿಸುತ್ತಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಮಹಿಳಾ ಮೋರ್ಚಾ ಮುಖಂಡರು, ಮಾಜಿ ಮೇಯರ್ ಡಿ.ಎಸ್. ಉಮಾ ಪ್ರಕಾಶ ವ್ಯಂಗ್ಯವಾಡಿದ್ದಾರೆ.

ಯಾವುದೇ ಕಾಮಗಾರಿ ಕೈಗೊಂಡಾಗ ಅದರ ತಾಂತ್ರಿಕ ವಿನ್ಯಾಸವನ್ನು ಮೇಲ್ವಿಚಾರಣೆ ಮಾಡುವುದು ಸಂಬಂಧಿಸಿದ ಎಂಜಿನಿಯರ್‌ಗಳು. ಯಾವುದೇ ಪಕ್ಷದ ಜನಪ್ರತಿನಿಧಿಗಳು ತಮ್ಮ ಕ್ಷೇತ್ರಕ್ಕೆ ಏನಾಗಬೇಕು ಎಂಬುದನ್ನು ಪಟ್ಟಿ ಮಾಡಿ, ಸಂಬಂಧಿಸಿದ ಇಲಾಖೆಗಳಿಂದ ಮಂಜೂರು ಮಾಡಿಸಿ, ಹಣ ಬಿಡುಗಡೆಗೆ ಪ್ರಯತ್ನಿಸುತ್ತಾರೆ. ಆದರೆ, ತಾಂತ್ರಿಕ ನ್ಯೂನತೆಗೆ ಜನಪ್ರತಿನಿಧಿಗಳು ಕಾರಣರಲ್ಲ. ಡಿಸಿಎಂ ಬಳಿ ರೈಲ್ವೆ ಕೆಳಸೇತುವೆಯನ್ನು 2004ರಿಂದ 2014ರವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರವೇ ಅವೈಜ್ಞಾನಿಕವಾಗಿ ನಿರ್ಮಿಸಿದೆ ಎಂದು ದೂರಿದರು.

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಸೇತುವೆ ಸರಿಪಡಿಸಲು ಸಂಸದ ಜಿ.ಎಂ.ಸಿದ್ದೇಶ್ವರ ಕ್ರಮ ಕೈಗೊಂಡರು. ಅಶೋಕ ಚಿತ್ರ ಮಂದಿರ ರೈಲ್ವೆ ಗೇಟ್ ಸಮಸ್ಯೆ ಪರಿಹರಿಸಲು ನೀವ್ಯಾಕೆ ದಶಕಗಳ ಕಾಲ ಆಡಳಿತ ನಡೆಸಿದರೂ ಪ್ರಯತ್ನಿಸಲಿಲ್ಲ. ದಿವಂಗತ ಜಿ.ಮಲ್ಲಿಕಾರ್ಜುನಪ್ಪ ಹಾಗೂ ಜಿ.ಎಂ.ಸಿದ್ದೇಶ್ವರ್‌ ಸಂಸದರಾಗಿರುವುದು 26 ವರ್ಷದಿಂದ. ರೈಲ್ವೆ ಇಲಾಖೆ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುತ್ತದೆ. ದೇಶದಲ್ಲಿ 57 ವರ್ಷ ಕೇಂದ್ರದ ಚುಕ್ಕಾಣಿ ಹಿಡಿದ ನಿಮ್ಮಿಂದ ಯಾಕೆ ಅಶೋಕ ಟಾಕೀಸ್‌ ರೈಲ್ವೆ ಗೇಟ್ ಸಮಸ್ಯೆ ಪರಿಹರಿಸಲು ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದರು.

ಸಂಸದ ಜಿ.ಎಂ.ಸಿದ್ದೇಶ್ವರ ಅವಧಿಯಲ್ಲಿ ಗೀತಾಂಜಲಿ ಚಿತ್ರಮಂದಿರ ಎದುರು ಚಿಕ್ಕ ಅಂಡರ್ ಬ್ರಿಡ್ಜ್‌ ನಿರ್ಮಾಣದಿಂದ ವ್ಯಾಪಾರಸ್ಥರಿಗೆ, ಜನರಿಗೆ, ಲಘು ವಾಹನಗಳಿಗೆ ತುಂಬಾ ಅನುಕೂಲವಾಗಿದೆ. ಬಾಡಾ ಕ್ರಾಸ್‌ನಿಂದ ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ಆರಂಭ‍ವಾಗಿದ್ದು 2003ರಲ್ಲಿ. 2004ರಿಂದ 14ರವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಅವಧಿಯಲ್ಲೇ ಶಿರಮಗೊಂಡನಹಳ್ಳಿ ಬಳಿ ಅವೈಜ್ಞಾನಿಕ ಕೆಳಸೇತುವೆ ನಿರ್ಮಿಸಿದ್ದಾರೆ. ಇದು ಕಾಂಗ್ರೆಸ್ಸಿಗರು ಮರೆತಂತಿದೆ ಎಂದು ಲೇವಡಿ ಮಾಡಿದರು.

- - -

ಬಾಕ್ಸ್‌ ವಾಜಪೇಯಿ, ಮೋದಿ ನೇತೃತ್ವದಲ್ಲಿ ಅಭಿವೃದ್ಧಿ ಪ್ರಧಾನಿ ಮೋದಿ ಅಧಿಕಾರದ ಅವಧಿಯಲ್ಲಿ ದಾವಣಗೆರೆಗೆ ಸ್ಮಾರ್ಟ್ ಸಿಟಿ ಯೋಜನೆ ಮಂಜೂರಾಗಿದೆ. ಸುವರ್ಣ ಚತುಷ್ಪಥ ರಸ್ತೆ ಆರಂಭಿಸಲು ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ. ಗ್ರಾಮ ಸಡಕ್ ಯೋಜನೆಯಡಿ ಹಳ್ಳಿಹಳಿಗೆ ಉತ್ತಮ ಸಂಪರ್ಕ ರಸ್ತೆಯ ನಿರ್ಮಾಣ ಆರಂಭವಾಯಿತು. ದೇಶವನ್ನು, ರಾಜ್ಯವನ್ನು ದಶಕಗಳ ಕಾಲ ಆಳಿದ ಕಾಂಗ್ರೆಸ್‌ಗೆ ಕೇಂದ್ರದ ಚುಕ್ಕಾಣಿ ಹಿಡಿದಾಗ ಯಾಕೆ ಇಂತಹ ಕೆಲಸಗಳನ್ನು ಮಾಡಲಿಲ್ಲ ಎಂದು ಎಂದು ಮಾಜಿ ಮೇಯರ್ ಉಮಾ ಪ್ರಕಾಶ ಟಾಂಗ್ ನೀಡಿದರು.

- - - -10ಕೆಡಿವಿಜಿ11, 12: ಡಿ.ಎಸ್.ಉಮಾ ಪ್ರಕಾಶ, ಮಾಜಿ ಮೇಯರ್‌, ಮಹಾನಗರ ಪಾಲಿಕೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ