ಮರಿಯಮ್ಮನಹಳ್ಳಿ: ನೀರು ಅಮೂಲ್ಯವಾದದ್ದು, ವ್ಯರ್ಥ ಮಾಡದೇ ಪ್ರತಿಯೊಬ್ಬರು ಮಿತವಾಗಿ ನೀರು ಬಳಕೆ ಮಾಡಬೇಕು ಎಂದು ಎಸ್.ಎಲ್.ಆರ್ ಮೆಟಾಲಿಕ್ಸ್ ಕಂಪನಿಯ ವೈದ್ಯ ಡಾ. ಜಿ.ಎಂ. ಸೋಮೇಶ್ವರ ಹೇಳಿದರು.
ಭೂಮಿ ಮೇಲೆ ವಾಸಿಸುವ ಪ್ರತಿಯೊಂದು ಪ್ರಾಣಿ, ಪಕ್ಷಿಗಳಿಗೆ ನೀರು ಅವಶ್ಯವಾಗಿದೆ. ನೀರು ಎಲ್ಲರಿಗೂ ಜೀವ ಜಲ. ಅಂತರ್ಜಲದ ಮಟ್ಟ ದಿನದಿಂದ ದಿನಕ್ಕೆ ಇತ್ತೀಚೆಗೆ ಕುಸಿಯುತ್ತಿದೆ. ಇದಕ್ಕೆಲ್ಲ ಕಾರಣ ನಮ್ಮ ಆಧುನಿಕ ಜೀವನ ಶೈಲಿಯ ಪ್ರಭಾವ, ಕಾಡನ್ನು ಹೆಚ್ಚಾಗಿ ಕಡಿದು ಹಾಳು ಮಾಡಲಾಗುತ್ತದೆ. ಪರಿಣಾಮ ನಾವು ಬಿಸಿಲಿನ ತಾಪಮಾನ ಅನುಭವಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಸ್ಥಳೀಯ ಪಪಂ ಮುಖ್ಯಾಧಿಕಾರಿ ಖಾಜಾ ಮೈನುದ್ದೀನ್ ಮಾತನಾಡಿ, ಪ್ರತಿಯೊಬ್ಬರಿಗೂ ನೀರು ಬೇಕಾಗಿರುವುದರಿಂದ ಮಿತವಾಗಿ ಬಳಸುವ ಮೂಲಕ ಮುಂದಿನ ಪೀಳಿಗೆಗೆ ಉಳಿಸಿಕೊಡುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದು ಅವರು ಹೇಳಿದರು.ಎಸ್.ಎಲ್.ಆರ್. ಕಂಪನಿಯ ಸೇಫ್ಟಿ ಮ್ಯಾನೇಜರ್ ಹರಿಶಂತ್ ನಿಡುಗುಂದಿ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಬಿಸಿಲಿನ ತಾಪಮಾನ ಹೆಚ್ಚಿದ್ದಾಗ ಮತ್ತು ನೀರಿನ ಕೊರತೆ ಇದ್ದಾಗ ನೀರಿನ ಸಮಸ್ಯೆ ಗೊತ್ತಾಗಲಿದೆ. ನೀರಿನ ಸಮಸ್ಯೆ ಉಂಟಾಗುವ ಮೊದಲೇ ನೀರನ್ನು ಮಿತವಾಗಿ ಬಳಸುವುದನ್ನು ಪ್ರತಿಯೊಬ್ಬರು ರೂಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.