- ಪಂಡಿತ ದೀನದಯಾಳ್ ಉಪಾಧ್ಯಾಯರ ಜನ್ಮದಿನದ ಅಂಗವಾಗಿ ಕಡೂರು ಮಂಡಲ ಬಿಜೆಪಿಯಿಂದ ಕಾರ್ಯ ಕ್ರಮ
ಪಂಡಿತ ದೀನ್ ದಯಾಳ್ ಉಪಾಧ್ಯಾಯ ಒಬ್ಬ ಮಾನವತಾವಾದಿ, ದೇಶದ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತುವ ಮೂಲಕ ಅವರ ಅಂತ್ಯೋದಯದ ವಿಚಾರಗಳನ್ನು ಕಾರ್ಯರೂಪಕ್ಕೆ ತಂದಿರುವ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಪಂಡಿತ ದೀನದಯಾಳ್ ಉಪಾಧ್ಯಾಯರ ಜನ್ಮದಿನದ ಅಂಗವಾಗಿ ಕಡೂರು ಮಂಡಲ ಬಿಜೆಪಿಯಿಂದ ಏರ್ಪಡಿಸಿದ್ದ ಕಾರ್ಯ ಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಪಂಡಿತ ದೀನ್ ದಯಾಳ್ ಉಪಾಧ್ಯಾಯರು ಬಿಜೆಪಿಗೆ ಒಂದು ಸಿದ್ಧಾಂತವನ್ನು ವೈಚಾರಿಕತೆಯನ್ನು ಕೊಟ್ಟಿರುವ ಮಹಾನ್ ವ್ಯಕ್ತಿ. ಪ್ರತಿಯೊಬ್ಬ ವ್ಯಕ್ತಿಯ ವಿಕಾಸದ ಜೊತೆಗೆ ಸಮಾಜ ಮತ್ತು ದೇಶದ ವಿಕಾಸ ಆಗಬೇಕು. ಸರ್ವೋದಯ ಸಾಧಿಸಲು ಅಂತ್ಯೋದಯ ಅನ್ನುವಂತಹ ಕಲ್ಪನೆ ಕೊಟ್ಟರು. ಸಮಾಜದ ಅಭಿವೃದ್ಧಿ ಅತ್ಯಂತ ಕೆಳಹಂತ, ತುಳಿತಕ್ಕೊಳಗಾದ ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮೇಲೆತ್ತುವ ಮೂಲಕ ಇಡೀ ದೇಶದ ಸಮುದಾಯ, ಸಮಾಜವನ್ನು ಉದ್ಧಾರ ಮಾಡಿ ದೇಶಕ್ಕೆ ಭದ್ರ ಬುನಾದಿ ಹಾಕಬೇಕು ಎಂದು ದೀನದಯಾಳ್ ಉಪಾಧ್ಯಾಯರು 1950 ರ ದಶಕದಲ್ಲಿ ಬಹಳ ಪ್ರಬಲವಾಗಿ ಪ್ರತಿಪಾದನೆ ಮಾಡಿದ್ದರು ಎಂದು ಹೇಳಿದರು.ಕಾಂಗ್ರೆಸ್ ಗೆ ಪ್ರತಿರೋಧ ಸಿದ್ದಾಂತ: ಕಾಂಗ್ರೆಸ್ ಗೆ ಪ್ರತಿರೋಧವಾದ ಸಿದ್ಧಾತವನ್ನು ಸರ್ವರ ಒಳಿತಿಗಾಗಿ ದೀನದಯಾಳ ಉಪಾಧ್ಯಾಯ ಅವರು ಕೊಟ್ಟಿದ್ದಾರೆ. ಅವರ ಆಕಸ್ಮಿಕ ನಿಧನ ಇಂದಿಗೂ ಅಗೋಚರವಾಗಿದೆ. ಹಾಗಿದ್ದೂ ಅವರು ತಮ್ಮ ವಿಚಾರ ಹಾಗೂ ಸಿದ್ಧಾಂತದಲ್ಲಿ ಇಂದಿಗೂ ನಮ್ಮ ಮಧ್ಯ ಇದ್ದಾರೆ. ಬಿಜೆಪಿ ಕೇಂದ್ರದಲ್ಲಿ 3ನೇ ಬಾರಿ ಆಯ್ಕೆಯಾಗಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸರ್ವ ಜನಾಂಗದ ಅಭಿವೃದ್ದಿಗೆ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತುವ ಮೂಲಕ ದೀನದಯಾಳ್ ಉಪಾಧ್ಯಾಯ ಅವರ ಅಂತ್ಯೋದಯದ ವಿಚಾರಗಳನ್ನು ಕಾರ್ಯರೂಪಕ್ಕೆ ತಂದಿರುವ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದರು.ನಂಬರ್ ಒನ್ ಭಾರತ:ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ವಿಕಸಿತಗೊಳಿಸಿ ಭಾರತದ ನಾಯಕತ್ವ ವನ್ನು ವಿಶ್ವದಲ್ಲಿ ಸಾಬೀತು ಮಾಡಿದ್ದಾರೆ. ನಿಮ್ಮೆಲ್ಲರ ಕರ್ತವ್ಯ ಪಕ್ಷದ ಸಂಘಟನೆ ಮಾಡಿ, ನಾವು ಯಾವ ವಿಚಾರ ನಂಬಿದ್ದೇವೆ ಆ ವಿಚಾರಗಳನ್ನು ಜನರಿಗೆ ತಲುಪಿಸಬೇಕು. ದೇಶ ಸೇವೆಯಲ್ಲಿ ತೊಡಗಿಸಿಕೊಂಡು ದೇಶ ಕಟ್ಟುವಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕೈಜೋಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ದೇವಾನಂದ್, ಮುಖಂಡರಾದ ಲಕ್ಕಪ್ಪ ಮಾಸ್ಟರ್, ಮಂಜುಳಾ ಚಂದ್ರಶೇಖರ್, ಅಡಿಕೆ ಚಂದ್ರು, ಸತೀಶ್ ಇದ್ದರು.
25 ಕೆಸಿಕೆಎಂ 3ಕಡೂರು ಮಂಡಲ ಬಿಜೆಪಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪಂಡಿತ ದೀನದಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.