ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೇಗೇರಿಸುವ ಮನವಿಯನ್ನು ಆದ್ಯತೆ ಮೇರೆ ಪರಿಗಣಿಸಲಾಗುವುದೆಂದು ಆರೋಗ್ಯ ಸಚಿವ ದಿನೇಶ್ ಗೂಂಡುರಾವ್ ಭರವಸೆ ನೀಡಿದ್ದಾರೆ.ಸೋಮವಾರ ಸಂಜೆ ಸುಂಟಿಕೊಪ್ಪ ಆರೋಗ್ಯ ಕೇಂದ್ರಕ್ಕೆ ಮಡಿಕೇರಿ ಕ್ಷೇತ್ರದ ಶಾಸಕರು ಹಾಗೂ ಜನಪ್ರತಿನಿಧಿಗಳು ಪಕ್ಷದ ಮುಖಂಡರು ಮತ್ತು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕುಂದುಕೊರತೆ ಆಲಿಸಿ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ಮುಖ್ಯ ಬೇಡಿಕೆಗಳಾದ ರಾತ್ರಿ ಪಾಳಿಯ ವೈದ್ಯರ ನೇಮಕ, ಮರಣೋತ್ತರ ಪರೀಕ್ಷೆಗೆ ವ್ಯವಸ್ಥೆ ಮತ್ತು ಒಟ್ಟಾರೆಯಾಗಿ ಆಸ್ಪತ್ರೆಯನ್ನು ಮೇಲ್ದೆದರ್ಜೆಗೇರಿಸಬೇಕೆಂಬುದನ್ನು ಆದ್ಯತೆ ಮೇರೆಗೆ ಪರಿಗಣಿಸಲಾಗುವುದು. ಸ್ಥಳೀಯವಾಗಿ ವೈದ್ಯರು ಲಭ್ಯರಿದ್ದಲ್ಲಿ ಅವರನ್ನು ತಕ್ಷಣ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದರು.ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಈಗಾಗಲೇ ಕುಶಾಲನಗರದಲ್ಲಿ ಡಯಾಲಿಸಿಸ್ ಕೇಂದ್ರ ಆರಂಭಿಸಲಾಗಿದೆ. ಸೋಮವಾರಪೇಟೆಯಲ್ಲಿ 3 ಮಂದಿ ತಜ್ಞವೈದ್ಯರನ್ನು ನೇಮಿಸಿಕೊಳ್ಳಲು ಅನುಮತಿ ಪಡೆಯಲಾಗಿದೆ. ಅದಷ್ಟು ಶೀಘ್ರವಾಗಿ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದದರ್ಜೆಗೇರಿಸಲು ಸಚಿವರ ಮೂಲಕ ಸರ್ಕಾರದೊಂದಿಗೆ ವ್ಯವಹಾರಿಸಲಾಗುವುದೆಂದು ಭರವಸೆ ನೀಡಿದರು.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಸುಂಟಿಕೊಪ್ಪ ಪ್ರಾಥಮಿಕ ಜನಸಂಖ್ಯೆಗೆ ಅನುಗುಣವಾಗಿ ಮೇಲ್ದರ್ಜೆಗೇರಬೇಕಾಗಿದೆ ಈ ಆಸ್ಪತ್ರೆಯು ಸುತ್ತಮುತ್ತಲಿನ 7 ಗ್ರಾಮ ಪಂಚಾಯಿತಿಗಳ ಜನತೆಯ ಆರೋಗ್ಯಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಆಧಾರವಾಗಿದೆ. ಇಲ್ಲಿ ವೈದ್ಯರ ಕೊರತೆ, ಹೆಚ್ಚಿನ ಚಿಕಿತ್ಸೆ ಅಲಭ್ಯತೆ, ಜೌಷಧಿಗಳ ಅಲಭ್ಯತೆ, ಮರಣೋತ್ತರ ಪರೀಕ್ಷೆ ನಡೆಯದಿರುವುದು ಇಲ್ಲಿನ ಸಮಸ್ಯೆಗಳಾಗಿವೆ. ಇದನ್ನು ಆಧ್ಯತೆ ಮೇರೆಗೆ ಪರಿಗಣಿಸಬೇಕಾಗಿದೆ. ಸಾಕಷ್ಟು ಬಾರಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಬೇಕೆಂಬ ಮನವಿ ಸಲ್ಲಿಸಲಾಗಿದೆ ಎಂದು ಉಲ್ಲೇಖೀಸಿದರು.ಸುಂಟಿಕೊಪ್ಪ ಗ್ರೇಡ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ಕುಮಾರ್ ಮತ್ತು ಸದಸ್ಯರು ಸಚಿವರಿಗೆ ಮನವಿ ಅರ್ಪಿಸಿ, ಈ ಆರೋಗ್ಯ ಕೇಂದ್ರವು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಬೇಕಾದ ಅವಶ್ಯಕತೆಯನ್ನು ಮನದಟ್ಟು ಮಾಡಿಕೊಟ್ಟರು.
ತುರ್ತು ಸಂದರ್ಭಗಳಲ್ಲಿ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಚ್ಚಿನ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ವ್ಯವಸ್ಥೆ ಇಲ್ಲದಿರುವುದರಿಂದ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ಪರಿಸ್ಥಿತಿಯ ವಾಸ್ತವ ಚಿತ್ರಣವನ್ನು ಸಚಿವರಿಗೆ ಮನದಟ್ಟು ಮಾಡಿ ಪಂಚಾಯಿತಿ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.ಜಿ.ಪಂ. ಮಾಜಿ ಸದಸ್ಯ ಪಿ.ಎಂ.ಲತೀಫ್ ಮಾತನಾಡಿ, ಕೂಲಿ ಕಾರ್ಮಿಕರು ಹೆಚ್ಚಾಗಿರುವ ಈ ವ್ಯಾಪ್ತಿಯಲ್ಲಿ ಜನರು ಈ ಆರೋಗ್ಯ ಕೇಂದ್ರವನ್ನೇ ಅವಲಂಬಿತರಾಗಿದ್ದಾರೆ. ಆದರೆ ಸಂಜೆ 4 ಗಂಟೆಯ ಬಳಿಕ ಇಲ್ಲಿ ವೈದ್ಯರು ಇಲ್ಲದಿದ ಕಾರಣ, ತುರ್ತು ಸಂದರ್ಭಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಅಲ್ಲದಂತಾಗುತ್ತಿರುವು ವಿಷಾದನೀಯ. ಇವೆಲ್ಲವುಗಳಿಗೆ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವುದೇ ಪರಿಹಾರ ಎಂದರು.
ಕಾಂಗ್ರೆಸ್ ಮುಖಂಡ ಎಂ.ಎ.ಉಸ್ಮಾನ್ ಹಾಗೂ ರಫೀಕ್ ಖಾನ್ ಮಾತನಾಡಿ, ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಕುರಿತ ಲಿಖಿತ ಮಾಹಿತಿ ನೀಡಿದರು.ಡಿಎಚ್ಒ ಡಾ.ಸತೀಶ್ಕುಮಾರ್, ಟಿಎಚ್ಒ ಡಾ.ಇಂದೂದಾರ, ತಾಲೂಕು ದಂಡಾಧಿಕಾರಿ ಕಿರಣ್ ಗೌರಯ್ಯ, ಆಡಳಿತಾಧಿಕಾರಿ ಡಾ.ಚೇತನ್ಕುಮಾರ್, ಪ್ರಾಥಮಿಕ ವೈದ್ಯಾಧಿಕಾರಿ ಸಮ್ನಾ, ಪಂಚಾಯಿತಿ ಸದಸ್ಯರಾದ ಶಬ್ಬೀರ್, ಸಬಾಸ್ಟೀನ್, ರೇಷ್ಮಾ, ಮಾಜಿ ಅಧ್ಯಕ್ಷರಾದ ಕೆ.ಇ.ಕರೀಂ,ರೋಸ್ಮೇರಿ ರಾಡ್ರಿಗಸ್, ಮರಿಯ, ಯುವ ಕಾಂಗ್ರೆಸ್ ಅಧ್ಯಕ್ಷ ಅನೂಪ್, ಜಿ.ಪಂ. ಮಾಜಿ ಸದಸ್ಯ ಭಾನುಮತಿ, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ರಜಾಕ್, ಪಕ್ಷದ ಹಿರಿಯ ಮುಖಂಡ ಎಂ.ಎ.ವಸಂತ ಮತ್ತಿತರರು ಇದ್ದರು.