ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ದೇವಾಲಯದ ಭೂಮಿಯನ್ನು ಯಾರೆಲ್ಲಾ ಸ್ವಾಧೀನ ಹೊಂದಿದ್ದಾರೆಯೋ ಅವರೆಲ್ಲಾ ದೇವಾಲಯದ ಅಭಿವೃದ್ಧಿಗೆ ಪೂರಕವಾಗಿ ದೇವಾಲಯದ ಭೂಮಿ ದೇವಾಲಯಕ್ಕೆ ಹಿಂತಿರುಗಿಸಬೇಕೆಂದು ವಿನಂತಿಸಿದ್ದರು. ಈ ಪ್ರಕಾರ ಉಪ್ಪಿನಂಗಡಿಯ ಹೃದಯ ಭಾಗದಲ್ಲಿ ಸುಮಾರು ೨೯ ಸೆಂಟ್ಸ್ ಭೂಮಿಯನ್ನು ಸ್ಥಳ ಬಾಡಿಗೆಯ ನೆಲೆಯಲ್ಲಿ ಅನುಭೋಗದಾರರಾಗಿದ್ದ ವೈದ್ಯ ಕೆ ಶೀನಪ್ಪ ಶೆಟ್ಟಿ ಆಶಯದಂತೆ ಅವರ ಮಕ್ಕಳು ಭೂಮಿಯನ್ನು ದೇವಾಲಯಕ್ಕೆ ಹಿಂತಿರುಗಿಸಿದ್ದು, ಶಾಸಕ ಅಶೋಕ್ ಕುಮಾರ್ ರೈ ಸಮ್ಮುಖದಲ್ಲಿ ಶ್ರೀ ದೇವರ ಮುಂದೆ ಪ್ರಸಾದ ನೀಡುವ ಮೂಲಕ ಭೂಮಿ ಹಸ್ತಾಂತರ ಪ್ರಕ್ರಿಯೆ ನೆರವೇರಿತು.
ಈ ಸಂದರ್ಭ ಶಾಸಕ ಅಶೋಕ್ಕ್ ರೈ ಮಾತನಾಡಿ, ಪೇಟೆಯ ಹೃದಯಭಾಗದಲ್ಲಿರುವ ಬೆಲೆಬಾಳುವ ಭೂಮಿಯನ್ನು ಯಾವುದೇ ಬೇಡಿಕೆ ಮುಂದಿರಿಸದೆ ಸ್ವ ಇಚ್ಛೆಯಿಂದ ದೇವಾಲಯಕ್ಕೆ ಹಿಂತಿರುಗಿಸುವ ಮೂಲಕ ಮಾದರಿಯಾಗಿದ್ದಾರೆ. ಇನ್ನು ಬಾಕಿ ಉಳಿದಿರುವ ೪ ಸೆಂಟ್ಸ್ ಭೂಮಿಯ ಅನುಭೋಗದಾರರಲ್ಲಿಯೂ ವಿನಂತಿಸಲಾಗಿದೆ. ಅವರು ಸಹಕಾರ ನೀಡಿದರೂ ನೀಡದಿದ್ದರೂ ಭೂಮಿಯನ್ನು ಸ್ವಾಧೀನಪಡಿಸುವ ಕಾರ್ಯ ಮುಂದಕ್ಕೆ ನಡೆಯಲಿದೆ ಎಂದರು. ಪುತ್ತೂರಿನ ಮಹಾಲಿಂಗೇಶ್ವರ ದೇವರ ೧೫ ಎಕ್ರೆ ಭೂಮಿಯನ್ನು ಅದರಲ್ಲಿ ಅನುಭೋಗದಾರರಲ್ಲಿ ದೇವಾಲಯಕ್ಕೆ ಹಿಂತಿರುಗಿಸಲು ಮನವಿ ಮಾಡಲಾಗಿದೆ. ಸೂಕ್ತ ಸಮಯಾವಕಾಶ ನೀಡಿದ ಬಳಿಕ ಆ ಎಲ್ಲಾ ಭೂಮಿಯ ಸ್ವಾಧೀನ ಪ್ರಕ್ರಿಯೆ ನಡೆಯಲಿದೆ ಎಂದರು.ಭೂಮಿ ಹಿಂತಿರುಗಿಸಿದ ವೈದ್ಯ ಕೆ ಎಸ್ ಶೆಟ್ಟಿ ಅವರ ಮಕ್ಕಳಾದ ಡಾ ಯತೀಶ್ ಕುಮಾರ್ ಶೆಟ್ಟಿ ಹಾಗೂ ಕೆ ಜಗದೀಶ್ ಶೆಟ್ಟಿ ಮಾತನಾಡಿ, ಸುಮಾರು ೫೫ ವರ್ಷಗಳಿಂದ ನಮ್ಮ ಸ್ವಾಧೀನದಲ್ಲಿದ್ದ ಭೂಮಿಯನ್ನು ದೇವಾಲಯದ ಅಭಿವೃದ್ಧಿಯ ಉದ್ದೇಶಕ್ಕಾಗಿ ತುಂಬಾ ಸಂತೋಷದಿಂದ ದೇವಾಲಯಕ್ಕೆ ಹಿಂತಿರುಗಿಸುತ್ತಿದ್ದೇವೆ . ದೇವಾಲಯದ ಆಡಳಿತದ ವಿನಂತಿಯ ಮೊದಲೇ ನಾವು ಭೂಮಿಯನ್ನು ಹಿಂತಿರುಗಿಸಲು ತೀರ್ಮಾನಿಸಿದ್ದೆವು ಎಂದು ತಿಳಿಸಿದ್ದಾರೆ.
ಇದೇ ಸಂಧರ್ಭದಲ್ಲಿ ದೇವಾಲಯದ ನಾಲ್ಕು ಸೆಂಟ್ಸ್ ಭೂಮಿಯಲ್ಲಿ ವಾಸ್ತವ್ಯದ ಮನೆ ಹೊಂದಿರುವ ಸುಂದರ ಗೌಡ ಅವರೊಂದಿಗೆ ಶಾಸಕರು ಮಾತುಕತೆ ನಡೆಸಿದ್ದು, ನೀಡಲಾದ ಕಾಲಾವಕಾಶದೊಳಗೆ ಮನೆ ತೆರವುಗೊಳಿಸಲು ಸೂಚಿಸಿದರು.
ವೈದ್ಯ ಕೆ ಎಸ್ ಶೆಟ್ಟಿ ಮಕ್ಕಳು ಹಿಂತಿರುಗಿಸಿದ ಭೂಮಿಯ ಹಸ್ತಾಂತರ ಪ್ರಕ್ರಿಯೆ ಮುಗಿದಾಕ್ಷಣ ಮೊದಲೇ ತಂದಿರಿಸಲಾಗಿದ್ದ ಜೆಸಿಬಿ ಯಂತ್ರದಿಂದ ಭೂಮಿ ಸಮತಟ್ಟುಗೊಳೀಸುವ ಕಾರ್ಯಾಚರಣೆ ನಡೆಸಲಾಯಿತು. ಈ ಸಂಧರ್ಭ ಬೆಲೆಬಾಳುವ ಮರಗಳನ್ನು ಮತ್ತು ತೆಂಗಿನ ಮರಗಳನ್ನು ಉಳಿಸುವಂತೆ ಶಾಸಕರು ನಿರ್ದೇಶನ ನೀಡಿದರು.