ಹುಬ್ಬಳ್ಳಿ-ಧಾರವಾಡ ಪಾಲಿಕೆ ಪ್ರತ್ಯೇಕಿಸದಂತೆ ಸರ್ಕಾರಕ್ಕೆ ಹಕ್ಕೊತ್ತಾಯ

KannadaprabhaNewsNetwork |  
Published : Aug 11, 2026, 02:00 AM IST
ಸಾರ್ವಜನಿಕ ಸಂವಾದದಲ್ಲಿ ಸಂತೋಷ ನರಗುಂದ ಮಾತನಾಡಿದರು. | Kannada Prabha

ಸಾರಾಂಶ

ಹುಬ್ಬಳ್ಳಿ-ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಯ ಅಗತ್ಯವಿಲ್ಲ. ಅಭಿವೃದ್ಧಿಯ ದೂರ ದೃಷ್ಟಿಕೋನ ಹೊಂದಿರುವ ಸಂಘಟಿತ ಮಹಾನಗರ ಪಾಲಿಕೆಯ ಅಗತ್ಯವಿದೆ.

ಹುಬ್ಬಳ್ಳಿ:

ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡಬಾರದು. ತಜ್ಞರ ತಂಡವನ್ನೊಳಗೊಂಡ ಸಮಿತಿ ರಚಿಸಿ, ಸಮಗ್ರ ಅಭಿವೃದ್ಧಿ ಕುರಿತು ಅಧ್ಯಯನ ಮಾಡಬೇಕು. ಈ ಕುರಿತು ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಲು ಹುಬ್ಬಳ್ಳಿ-ಧಾರವಾಡ ಮೆಟ್ರೋಪಾಲಿಟಿನ್ ಪರಿಕಲ್ಪನೆ ಕುರಿತ ಸಾರ್ವಜನಿಕ ಸಂವಾದದಲ್ಲಿ ಒಕ್ಕೊರಲ ನಿರ್ಣಯ ಕೈಗೊಳ್ಳಲಾಯಿತು.

ಹುಬ್ಬಳ್ಳಿ-ಧಾರವಾಡ ಮೆಟ್ರೋಪಾಲಿಟಿನ್ ಸಿಟಿ ವೇದಿಕೆ ವತಿಯಿಂದ ಇಲ್ಲಿಯ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಾರ್ವಜನಿಕ ಸಂವಾದದಲ್ಲಿ, ಹುಬ್ಬಳ್ಳಿ-ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಯ ಅಗತ್ಯವಿಲ್ಲ. ಅಭಿವೃದ್ಧಿಯ ದೂರ ದೃಷ್ಟಿಕೋನ ಹೊಂದಿರುವ ಸಂಘಟಿತ ಮಹಾನಗರ ಪಾಲಿಕೆಯ ಅಗತ್ಯವಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾದವು.

ಪ್ರತ್ಯೇಕತೆಯಲ್ಲಿ ರಾಜಕೀಯ ಉದ್ದೇಶವಿದೆಯೇ ಹೊರತು, ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಸ್ಮಾರ್ಟ್‌ಸಿಟಿ ಅನುದಾನ ಹಂಚಿಕೆ ತಾರತಮ್ಯ, ಕೈಗಾರಿಕಾ ವಲಯ ಧಾರವಾಡಕ್ಕೆ ಸಿಕ್ಕಿಲ್ಲ ಎಂಬ ಕೋಪದ ಮಾತುಗಳೇ ಇಲ್ಲಿ ಮೇಳೈಸಿವೆ. ಬೆಂಗಳೂರು ನಂತರದ ಸಿಟಿಯಾಗಿ ಹುಬ್ಬಳ್ಳಿ-ಧಾರವಾಡ ಬೆಳೆಯಬೇಕು ಎಂದರೆ ಪ್ರತ್ಯೇಕ ಮಾತುಗಳು ಮೌನವಾಗಬೇಕು ಎಂಬ ಮುಂದಾಲೋಚನೆಯ ನುಡಿಗಳು ಸಂವಾದದಲ್ಲಿ ಹೊರ ಬಂದವು.

ವೇದಿಕೆ ಸಹ ಸಂಯೋಜಕ ಸಂತೋಷ ನರಗುಂದ ಮಾತನಾಡಿ, ದೇಶದಲ್ಲಿ 46 ಮಹಾನಗರಗಳಿವೆ. ಮೆಟ್ರೋಪಾಲಿಟಿನ್ ಸಿಟಿಯಾಗಬೇಕೆಂದರೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಹಂತ-ಹಂತವಾಗಿ ಮೂಲ ಸೌಕರ್ಯ ಹೊಂದಬೇಕು. ಜನಸಂಖ್ಯೆ ಆಧಾರಿತವಾಗಿ ಈ ಸ್ಥಾನಮಾನ ಹೊಂದುವ ಸಾಮರ್ಥ್ಯವಿದೆ. ಸಾಮಾಜಿಕ- ಆರ್ಥಿಕ ಕಾರಿಡಾರ್ ಸ್ಥಾಪನೆಗೂ ಆದ್ಯತೆ ಸಿಗಬೇಕು ಎಂದು ಅಭಿಪ್ರಾಯ ಮಂಡಿಸಿದರು.

ವಿಕಾಸ ಸೊಪ್ಪಿನ ಮಾತನಾಡಿ, ನಗರಾಭಿವೃದ್ಧಿ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಈ ವಿಷಯವನ್ನು ಮನವರಿಕೆ ಮಾಡಿಕೊಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ಗಮನ ಸೆಳೆಯುವ ಕೆಲಸ ಮಾಡಬೇಕೆಂದು ಹೇಳಿದರು.

ಮಾಜಿ ಮೇಯರ್ ಹನುಮಂತ ಡಂಬಳ, ಉದ್ಯಮಿಗಳಾದ ಎಂ.ವಿ. ಕರಮರಿ, ಜಗದೀಶ ಹಿರೇಮಠ, ಪ್ರಕಾಶ ಪಾಟೀಲ ಸೇರಿ ಇತರರು ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ವೇಳೆ ಸಂಯೋಜಕ ಅರುಣ ಚರಂತಿಮಠ, ಸಹ ಸಂಯೋಜಕರಾದ ಕಿರಣ ಸಾಂಬ್ರಾಣಿ, ಲಿಂಗರಾಜ ಧಾರವಾಡಶೆಟ್ಟರ್, ಪೌರಕಾರ್ಮಿಕರ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘ ಹೋರಾಟಕ್ಕೆ ಇಲ್ಲ ನ್ಯಾಯ: ಮಂತ್ರಿ, ಶಾಸಕರನ್ನು ನಿಲ್ಲಿಸಿ ಕೇಳೋಣ
ಗುತ್ತಿಗೆ ಕಾರ್ಮಿಕರ ಸೇವೆ ಕಾಯಂ ಮಾಡಿ: ಸಿಐಟಿಯು ಪ್ರತಿಭಟನೆ