ಕೊಪ್ಪಳ ನಗರದಲ್ಲಿ ಸಿಐಟಿಯು ನೇತೃತ್ವದಲ್ಲಿ ಗುತ್ತಿಗೆ ಕಾರ್ಮಿಕರ ಸೇವೆಗಳನ್ನು ಕಾಯಂ ಮಾಡಬೇಕು ಎಂದು ಪ್ರತಿಭಟನೆ ನಡೆಸಲಾಯಿತು. ನಗರದ ಪ್ರಮುಖ ವೃತ್ತದಲ್ಲಿ ಸಂಘಟನಾಕಾರರು ಪ್ರತಿಭಟನೆ ನಡೆಸಿದರು.

ಕೊಪ್ಪಳ: ನಗರದಲ್ಲಿ ಸಿಐಟಿಯು ನೇತೃತ್ವದಲ್ಲಿ ಗುತ್ತಿಗೆ ಕಾರ್ಮಿಕರ ಸೇವೆಗಳನ್ನು ಕಾಯಂ ಮಾಡಬೇಕು ಎಂದು ಪ್ರತಿಭಟನೆ ನಡೆಸಲಾಯಿತು.

ನಗರದ ಪ್ರಮುಖ ವೃತ್ತದಲ್ಲಿ ಸಂಘಟನಾಕಾರರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರಂತರವಾಗಿ ರೈತ, ಕಾರ್ಮಿಕ ವಿರೋಧಿ ಹಾಗೂ ದಲಿತ, ಮಹಿಳೆ ವಿದ್ಯಾರ್ಥಿ ಯುವಜನ ವಿರೋಧಿ ಕಾನೂನು ಮತ್ತು ನೀತಿಗಳನ್ನು ಜಾರಿ ಮಾಡುತ್ತಿವೆ. ಇನ್ನೊಂದೆಡೆ ಜನತೆಯ ಪ್ರಜಾಪ್ರಭುತ್ವ ಹಕ್ಕುಗಳನ್ನು ದಮನಿಸುತ್ತಿವೆ. ರೈತರ ಭೂಮಿಯನ್ನು ಕಸಿದು ಕಾರ್ಪೊರೇಟ್ ಕಂಪನಿಗಳಿಗೆ ಧಾರೆ ಎರೆಯುತ್ತಿರುವುದು ಮುಂದುವರಿದಿದೆ. ಇಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ರೈತರ ಭೂಮಿಯನ್ನು ದೇಶೀಯ ಹಾಗೂ ವಿದೇಶಿ ಕಂಪನಿಗಳ ಬಾಯಿಗೆ ಹಾಕುತ್ತಿದ್ದಾರೆ ಎಂದು ದೂರಿದರು.

ಜಿಲ್ಲೆಯಯನ್ನು ಸಂಪೂರ್ಣ ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು, ಬರಗಾಲ ಕ್ರಮಗಳನ್ನು ಕೈಗೊಳ್ಳಬೇಕು, ಭೂಮಿಯನ್ನು ಬಲವಂತವಾಗಿ ವರ್ತುಲ ರಸ್ತೆ, ರೈತರ ಸಹಭಾಗಿತ್ವದ ವಸತಿ ಯೋಜನೆ, ಕೈಗಾರಿಕೆ, ರೈಲ್ವೆ ಯೋಜನೆಗಳ ಹೆಸರಲ್ಲಿ ಭೂಕಬಳಿಕೆ ಮತ್ತು ಅನ್ಯಾಯದ ಭೂಸ್ವಾಧೀನ ಹಾಗೂ ಕಾರ್ಪೊರೇಟ್ ಭೂ ಕಬಳಿಕೆಯನ್ನು ನಿಲ್ಲಿಸಬೇಕು. ಜಿಲ್ಲೆಯಲ್ಲಿ ಮಂಜೂರಾದ ಸಾಗುವಳಿ ಭೂಮಿ ಹಕ್ಕಿಗೆ ಯಾವುದೇ ಧಕ್ಕೆಯಾಗದಂತೆ ಅರಣ್ಯ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿಗೆ ಆಗ್ರಹಿಸಬೇಕು. ಕಾರ್ಮಿಕರನ್ನು ನವ ಗುಲಾಮಗಿರಿಗೆ ತಳ್ಳುವ ಕಾರ್ಮಿಕ ಸಂಹಿತೆಗಳ ವಾಪಸಾತಿ ಆಗಬೇಕು ಎಂದು ಆಗ್ರಹಿಸಿದರು.

ಸಿಐಟಿಯು ರಾಜ್ಯ ಉಪಾಧ್ಯಕ್ಷ ಮಂಟನಗೌಡ ನಾಡಗೌಡ, ಸಿಐಟಿಯು ರಾಜ್ಯ ಕಾರ್ಯದರ್ಶಿ ನಿರುಪಾದಿ ಬೆಣಕಲ್, ದುರುಗಮ್ಮ, ಮಲ್ಲಪ್ಪ ಮ್ಯಾಗಡೆ, ಲಕ್ಷ್ಮೀ ಸೋನಾರೆ, ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ಜಿಲ್ಲಾಧ್ಯಕ್ಷ ಬಸವರಾಜ ಎಂ., ಕಾರ್ಯದರ್ಶಿ ಸುಂಕಪ್ಪ, ಬಾಳಪ್ಪ ಹುಲಿಹೈದರ, ಹುಸೇನಪ್ಪ, ಗಂಗಾಧರಯ್ಯ, ಅಕ್ಕಮಹಾದೇವಿ, ಮೇರಿ, ಸಂಗಮ್ಮ, ರೈತ ಸಂಘದ ಮುಖಂಡರಾದ ಶ್ರೀನಿವಾಸ ಹೊಸಳ್ಳಿ, ಶಿವಣ್ಣ, ಫಕೀರಮ್ಮ ಎಸ್‌ಎಫ್‌ಐ ಜಿಲ್ಲಾ ಮುಖಂಡ ಶಿವಕುಮಾರ ಈಚನಾಳ, ಬಾಲಾಜಿ, ಶರೀಫ್, ನಾಗರಾಜ ಯು. ಇತರರಿದ್ದರು.