)
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಅಂಬೇಡ್ಕರ್ ಭವನದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ತಾವು ನಡೆಸುತ್ತಿರುವ ರೈತ ಜಾಗೃತಿ ಯಾತ್ರೆಗೆ ಚಿಕ್ಕಬಳ್ಳಾಪುರದಲ್ಲಿ ರೈತಮುಖಂಡರು ನೀಡಿದ ಅಭೂತಪೂರ್ವ ಸ್ವಾಗತ ಸ್ವೀಕರಿಸಿದ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ರೈತರು ಫೆ. 15 ರಂದು ಹಳ್ಳಿ ಹಳ್ಳಿಗಳಲ್ಲಿ ಅಮೆರಿಕಾದ ಒಪ್ಪಂದ ಪತ್ರ ಸುಡುವ ಚಳವಳಿ ನಡೆಸಬೇಕು ಎಂದು ಕರೆ ನೀಡಿದರು.ಹಿಂದೆ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಡಾ. ಸ್ವಾಮಿನಾಥನ್ ಅಧ್ಯಕ್ಷತೆಯಲ್ಲಿ ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸಮಿತಿ ರಚಿಸಿತು. ಈ ಸಮಿತಿ ತನ್ನ ವರದಿಯನ್ನು 2006ರಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆದರೂ ವರದಿಯನ್ನು ಜಾರಿ ಮಾಡುವಲ್ಲಿ ಕಾಂಗ್ರೆಸ್ ಸೋತಿತು. 2014ರಲ್ಲಿ ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ತರುವ ಭರವಸೆ ನೀಡಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದರು. ಪ್ರಸ್ತುತ ೩ನೇ ಅವಧಿಗೆ ಪ್ರಧಾನಿ ಆದರೂ ಸ್ವಾಮಿನಾಥನ್ ವರದಿ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮುಚ್ಚಳಿಕೆ ಬರೆದು ಕೊಟ್ಟಿದ್ದಾರೆ. ಹೀಗಾಗಿ ಮಾತುಕೊಟ್ಟು ಸೋತ ಸರ್ಕಾರವನ್ನು ಎಚ್ಚರಿಸಲು ದೇಶಾದ್ಯಂತ ರೈತ ಜಾಗೃತಿ ಯಾತ್ರೆ ಮಾಡುತ್ತಿದ್ದೇವೆ. ಹಳ್ಳಿ ಹಳ್ಳಿಗಳಲ್ಲಿ ರೈತರಿಂದ ಸಹಿ ಸಂಗ್ರಹ ಮಾಡಿ ಅದನ್ನು ಮಾರ್ಚ್ 19 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ರೈತರ ಸಮಾವೇಶ ನಡೆಸಿ ಪ್ರಧಾನಿಗೆ ಸಲ್ಲಿಸಿ ಎಂಎಸ್ಪಿ ಕಾನೂನು ಜಾರಿ ಮಾಡಲು ಒತ್ತಾಯಿಸಲಾಗುವುದು. ಈ ಹೋರಾಟದಲ್ಲಿ ದೇಶದ ಎಲ್ಲಾ ರೈತರು ಭಾಗಿಯಾಗಬೇಕು ಎಂದು ಮನವಿ ಮಾಡಿದರು.
ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಸರ್ಕಾರಗಳು ಕೃಷಿ ವಲಯವನ್ನು ದೀರ್ಘಕಾಲದವರೆಗೆ ನಿರ್ಲಕ್ಷಿಸಿವೆ, ಇದರಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೃಷಿ ವಲಯವು ಭಾರತದ ಆರ್ಥಿಕ ಅಭಿವೃದ್ಧಿಯ ಬೆನ್ನೆಲುಬಾಗಿದೆ, ರಾಜ್ಯ, ಕೇಂದ್ರ ಸರ್ಕಾರಗಳು ಕೃಷಿ ವಲಯ ಮತ್ತು ರೈತರ ಭವಿಷ್ಯ ಸುಧಾರಿಸಲು ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದರು.ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ರೈತರು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲಾಗದೆ ಕೃಷಿಯಿಂದ ವಲಸೆ ಹೋಗುತ್ತಿದ್ದಾರೆ. ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯದೆ ಸಾಲಗಾರರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ. ಇವೆಲ್ಲಾ ಬೆಳವಣಿಗೆ ನೋಡಿದರೆ ಕೃಷಿ ಕ್ಷೇತ್ರ ಅವನತಿಯತ್ತ ಸಾಗುತ್ತಿದೆ ಎಂದು ಹೇಳಲು ನೋವಾಗುತ್ತಿದೆ ಎಂದರು.
ಈ ವೇಳೆ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು, ಬರಡನಪುರ ನಾಗರಾಜ್, ಸಂಘಟನೆಯ ಜಿಲ್ಲಾಧ್ಯಕ್ಷ ಶ್ರೀನಿವಾಸಲು, ಉಪಾಧ್ಯಕ್ಷ ಸತ್ಯನಾರಾಯಣ,ಕಾರ್ಯದರ್ಶಿ ಬೈರೆಡ್ಡಿ, ಕಾರ್ಯಾಧ್ಯಕ್ಷ ರಾಜಣ್ಣ ಮಂಡಿಬೆಲೆ, ಮಹಿಳಾ ಸಂಘದ ಅಧ್ಯಕ್ಷೆ ಶಾಂತಮ್ಮ, ಗೌರವಾಧ್ಯಕ್ಷ ಟಿ.ಆರ್.ಕೃಷ್ಣಪ್ಪ, ದಾವಣಗೆರೆ ಬಲ್ಲೂರು ರವಿಕುಮಾರ್, ಬೆಳಗಾವಿ ಸುರೇಶ್ ಪಾಟೀಲ್, ತುಮಕೂರು ಶಿವಕುಮಾರ್, ಶಿವಮೊಗ್ಗ ದೇವಕುಮಾರ್, ಅಭಿಮನ್ಯು ಕೋಹರ್, ಇಂದ್ರಜಿತ್, ಎಂ.ಪಿ.ಸಹರನ್, ಸೋನು ಪಂಜಾಬ್, ಅರುಣ್ಪಟೇಲ್,ಸಲಂದರ್ ಸಿಂಗ್. ಚಿಂತಾಮಣಿ ತಾಲೂಕು ಅಧ್ಯಕ್ಷ ವೆಂಕಟರಾಮಯ್ಯ, ಕಾರ್ಯದರ್ಶಿ ಶ್ರೀರಾಮರೆಡ್ಡಿ,ಮಹಿಳಾ ಸಂಘದ ಅಧ್ಯಕ್ಷೆ ಗುಟ್ಟಂಪಲ್ಲಿ ಶಾಂತಮ್ಮ,ಪ್ರಭಾವತಿ, ಗಡಿನಾಡು ರೈತ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್, ತಾಲೂಕು ಅಧ್ಯಕ್ಷ ರಾಮಕೃಷ್ಣ, ಗೌರವಾಧ್ಯಕ್ಷ ಮೈಲಪನಹಳ್ಳಿ ರಾಜಶೇಖರ್ ಮತ್ತಿತರರು ಇದ್ದರು.