ಮುಳಗುಂದ: ಜೀವ ಸಂಕುಲಕ್ಕೆ ನೀರು ಅತ್ಯಾವಶ್ಯಕವಾಗಿದ್ದು, ನೀರಿಗೆ ಪರ್ಯಾಯವಾದ ವಸ್ತು ಮತ್ತೊಂದಿಲ್ಲ, ಹೀಗಾಗಿ ನೀರನ್ನ ವ್ಯರ್ಥ ಮಾಡದೆ ಹಿತಮಿತವಾಗಿ ಬಳಸಿ, ಶುದ್ಧ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಯೋಗೀಶ ಎ. ಹೇಳಿದರು.
ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಮಹಿಳೆಯರಿಗೆ ಆರ್ಥಿಕ ನೆರವು, ಸಾಲ ಸೌಲಭ್ಯ ನೀಡಿ, ಸ್ವಾವಲಂಬಿ ಬದುಕು ಕಲ್ಪಿಸಿದೆ. ಜೊತೆಗೆ ಸಮಾಜ ಮುಖಿಯಾಗಿ, ಸಮಾಜದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅನೇಕ ಕಾರ್ಯಕ್ರಮಗಳು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮೂಲಕ ನಡೆಯುತ್ತಿವೆ. ನೀರು ಶುದ್ಧೀಕರಿಸುವ ಘಟಕ ಆರಂಭಿಸುವ ಯೋಜನೆಯನ್ನ ಡಾ. ವೀರೇಂದ್ರ ಹೆಗ್ಗಡೆ ಅವರು 2009ರಲ್ಲಿ ಆರಂಭಿಸಿದರು. ಗದಗ ಜಿಲ್ಲೆಯಲ್ಲಿ ನೀರು ಶುದ್ಧೀಕರಿಸುವ 22 ಘಟಕಗಳು ಸೇರಿದಂತೆ ಈವರೆಗೂ ರಾಜ್ಯದ ವಿವಿಧ ಕಡೆಗಳಲ್ಲಿ 494 ಸ್ಥಳಗಳಲ್ಲಿ ಘಟಕಗಳನ್ನು ಸ್ಥಾಪಿಸಲಾಗಿದೆ. ಅಶುದ್ಧ ನೀರು ಸೇವನೆಯಿಂದ ಹಲವು ಕಾಯಿಲೆಗಳು ಬರುತ್ತವೆ, ಆರೋಗ್ಯವಂತರಾಗಿರಲು ಶುದ್ಧ ನೀರು ಬಳಸಬೇಕು, ಸ್ಥಳೀಯ ಪಟ್ಟಣ ಪಂಚಾಯ್ತಿ ಹಾಗೂ ಗ್ರಾಮಾಭಿವೃದ್ಧಿಯ ಸಹಯೋಗದ 10 ಲಕ್ಷ ವೆಚ್ಚದಲ್ಲಿ ಶುದ್ಧ ನೀರಿನ ಘಟಕವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಂ.ಡಿ. ಬಟ್ಟೂರ, ಮುಳಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸವರಾಜ ಸುಂಕಾಪೂರ, ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ನೀಲಗುಂದ, ಸದಸ್ಯರಾದ ಮಹಾದೇವಪ್ಪ ಗಡಾದ, ಎಸ್.ಸಿ. ಬಡ್ನಿ, ಪಾರವ್ವ ಅಳ್ಳಣ್ಣವರ, ಯಲ್ಲವ್ವ ಕವಲೂರ, ವೈದ್ಯ ಡಾ.ಎಸ್.ಸಿ. ಚವಡಿ, ಜನ ಜಾಗೃತಿ ಸಮಿತಿ ಸದಸ್ಯ ಪ್ರಕಾಶ ಮದ್ದಿನ, ಬಿ.ಸಿ. ಟ್ರಸ್ಟ್ ಯೋಜನಾಧಿಕಾರಿ ಓಂ ಮರಾಠೆ, ಶುದ್ಧ ಗಂಗಾ ಘಟಕದ ಮೇಲ್ವಿಚಾರಕ ಧರ್ಮರಾಜ್ ಬಿ., ವಲಯದ ಮೇಲ್ವಿಚಾರಕಿ ಜಯಶ್ರೀ ಲಕ್ಕುಂಡಿ ಹಾಗೂ ಸ್ವ-ಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು, ಸೇವಾನಿರತರು ಇದ್ದರು.