ಕನ್ನಡಪ್ರಭ ವಾರ್ತೆ, ತುಮಕೂರುಇತ್ತೀಚಿನ ದಿನಮಾನಗಳಲ್ಲಿ ನಮ್ಮ ಯುವ ಜನರಲ್ಲಿ ಪರಭಾಷಾ ವ್ಯಾಮೋಹ ಹೆಚ್ಚಾಗುತ್ತಿದ್ದು, ಕನ್ನಡ ಪದಗಳನ್ನೇ ಮರೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಯುವಕ ಯುವತಿಯರು ಕನ್ನಡ ಪದಗಳ ಜೊತೆ ಇಂಗ್ಲಿಷ್ ಸೇರಿಸಿ ಮಾತನಾಡಿದರೆ ತಾವು ನಾಗರಿಕರು ಎಂದು ತೋರಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಯುವಕರು ಕಂಗ್ಲಿಷ್ ಬಿಟ್ಟು ಅಚ್ಚ ಕನ್ನಡ ಪದಗಳನ್ನು ಬಳಸುವುದರ ಮೂಲಕ ಕನ್ನಡ ಭಾಷೆಯನ್ನು ಬೆಳೆಸುವ ಶಪಥ ಮಾಡಬೇಕು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್ಸಿದ್ಧಲಿಂಗಪ್ಪ ನುಡಿದರು. ಜಿಲ್ಲಾ ಕಸಾಪ ನಗರದ ಗುಂಚಿ ವೃತ್ತದ ಬಳಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಪದ್ಮಶ್ರೀ ಬಿ.ಶಿವಮೂರ್ತಿ ಶಾಸ್ತ್ರಿಗಳ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು.ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡಕ್ಕೆ ವಿಶೇಷ ಸ್ಥಾನವಿದೆ. ಅತ್ಯಂತ ಸುಂದರ ಲಿಪಿಯನ್ನು ಹೊಂದಿರುವ ಕನ್ನಡವನ್ನು ಲಿಪಿಗಳ ರಾಣಿ ಎಂದು ಕರೆಯಲಾಗುತ್ತದೆ. ಕನ್ನಡ ಭಾಷಿಕರಾಗಿ ತಮ್ಮ ಭಾಷೆಯ ಬಗ್ಗೆ ಹೆಮ್ಮೆ ಇದ್ದರೂ ಅದನ್ನು ಬಳಸುವುದರಲ್ಲಿ ಅಸಡ್ಡೆ ತೋರುತ್ತಿದ್ದೇವೆ ಎಂದರು.ಇತಿಹಾಸ ಸಂಶೋಧಕ ಡಾ. ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ, ಕನ್ನಡ ಭಾಷೆಯ ಅಭಿವೃದ್ಧಿಗೆ ಪ್ರತಿ ಹಂತದಲ್ಲೂ ಹೋರಾಟ ಮಾಡಬೇಕಾಗಿದೆ. ಹಲವಾರು ವರ್ಷಗಳ ಹೋರಾಟದ ಫಲವಾಗಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕಿದರೂ ಅದರ ಅನುದಾನದ ಬಳಕೆಯನ್ನು ಕರ್ನಾಟಕದ ಎಲ್ಲ ವಿಶ್ವವಿದ್ಯಾನಿಲಯಗಳು ಸಮರ್ಥವಾಗಿ ಮಾಡಿಕೊಳ್ಳಲು ವಿಫಲವಾಗಿವೆ. ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯಲ್ಲಿ ನಡೆಯುತ್ತಿರುವ ಸಂಶೋಧನೆಗಳ ಗುಣಮಟ್ಟ ಕುಸಿಯಲು ಯುಜಿಸಿ ಬಡ್ತಿಗಾಗಿ ಇರುವ ನಿಯಮಾವಳಿಗಳನ್ನು ಬದಲಾತಯಿಸಬೇಕು ಎಂದರು.ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಸಂಶೋಧನೆಗಾಗಿ ಜೀವಂತ ಕನ್ನಡ ಭಾಷೆಗೆ ಒಂದೇ ಒಂದು ವಿಶ್ವವಿದ್ಯಾನಿಲಯವಿದ್ದರೆ ಮಾತನಾಡಲು ಬಳಸದ ಸಂಸ್ಕೃತಕ್ಕೆ ಕರ್ನಾಟಕದಲ್ಲಿ ಒಂದು ಸರ್ಕಾರಿ ವಿಶ್ವವಿದ್ಯಾನಿಲಯ ಹಾಗೂ ಎರಡು ಡೀಮ್ಡ್ ವಿಶ್ವವಿದ್ಯಾನಿಲಯಗಳಿವೆ ಎಂದ ಅವರು ಕನ್ನಡ ವಿ.ವಿ. ಇತ್ತೀಚಿನ ದಿನಗಳಲ್ಲಿ ಬೋಧನೆಯ ಜೊತೆಗೆ ಸಂಶೋಧನೆಗಳನ್ನು ಕೂಡಾ ಮಾಡಲಾಗುತ್ತಿದ್ದು ಅನೇಕ ಸಂಶೋಧನೆಗಳು ವಿಶ್ವವಿದ್ಯಾನಿಲಯಗಳ ಕಪಾಟುಗಳಿಗೆ ಮಾತ್ರ ಸೀಮಿತವಾಗಿದ್ದು, ಪ್ರಕಟಣಾ ಸೌಭಾಗ್ಯವನ್ನೇ ಕಾಣದಿರುವುದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ ಎಂದರು.ಸಮಾರಂಭದಲ್ಲಿ ತಾಲೂಕು ಕಸಾಪ ಅಧ್ಯಕ್ಷರಾದ ಚಿಕ್ಕಬೆಳ್ಳಾವಿ ಶಿವಕುಮಾರ್, ರಾಜಶೇಖರ್, ಬೆಸ್ಟೆಕ್ಸ್ ರಾಮರಾಜು ಇತರರು ಹಾಜರಿದ್ದರು.