ಸಾವಯವ ತ್ಯಾಜ್ಯ ನಿರ್ವಹಣೆ: ಒಂದು ಪ್ರಕೃತಿ ಸ್ನೇಹಿ ವಿಧಾನ ರಾಷ್ಟ್ರೀಯ ವಿಚಾರ ಸಂಕಿರಣ
ಸಾವಯವ ತ್ಯಾಜ್ಯ ನಿರ್ವಹಣೆಯಲ್ಲಿ ಕಪ್ಪು ಸೈನಿಕ ಹುಳುಗಳ (ಬಿಎಸ್ಎಫ್ಎಲ್) ಪರಿಣಾಮಕಾರಿ ಬಳಕೆ ಅಗತ್ಯ ಎಂದು ತರೀಕೆರೆ ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಹೇಳಿದ್ದಾರೆ.
ಲಕ್ಕವಳ್ಳಿ ಬಳಿಯ ಕುವೆಂಪು ವಿವಿ ಜ್ಞಾನ ಸಹ್ಯಾದ್ರಿ ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದಿಂದ ತರೀಕೆರೆ ಪುರಸಭೆ, ಅರ್ಥೋಸ್ ಸಲ್ಯುಷನ್ ಪ್ರೈ.ಲಿ. ಸೂಪರ್ ಎನ್ವಿರೋ ಫಾರ್ಮ್ಸ್ ಪ್ರೈ.ಲಿ.ಸಸೇರಾ ರೀ ಸೈಕ್ಲರ್ಸ್ ಪ್ರೈ.ಲಿ. ರೋಹಿಣಿ ಸೈಂಟಿಫಿಕ್ ಸಹೋಯೋಗದಲ್ಲಿ ಕುವೆಂಪು ವಿವಿ ಸಭಾ ಭವನದಲ್ಲಿ ನಡೆದ ಸಾವಯವ ತ್ಯಾಜ್ಯ ನಿರ್ವಹಣೆ: ಒಂದು ಪ್ರಕೃತಿ ಸ್ನೇಹಿ ವಿಧಾನ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಪೌರ ಘನ ತ್ಯಾಜ್ಯ ನಿರ್ವಹಣೆ ಅವಲೋಕನ ಕಪ್ಪು ಹುಳುಗಳು ಒಂದು ಅವಲೋಕನ ಕುರಿತು ಉಪನ್ಯಾಸ ನೀಡಿದರು.ತ್ಯಾಜ್ಯ ನಿರ್ವಹಣೆ ಅಗತ್ಯತೆ, ಸವಾಲುಗಳು ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳು, ತ್ಯಾಜ್ಯ ನಿರ್ವಹಣೆ ಬಗ್ಗೆ ಜನಸಾಮಾನ್ಯರಲ್ಲಿ ಇರಬೇಕಾದ ಅರಿವು, ತ್ಯಾಜ್ಯ ನಿರ್ವಹಣೆ ಸುಗಮಗೊಳಿಸಲು ಪಾಲಿಸಬೇಕಾದ ಕನಿಷ್ಟ ನಿಯಮ ವಿವರಿಸಿ, ತರೀಕೆರೆ ಪುರಸಭೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಸಾವಯವ ತ್ಯಾಜ್ಯ, ಕಪ್ಪು ಸೈನಿಕ ಹುಳು ಲಾರ್ವಗಳ ಬಳಕೆಯಿಂದ ಅತ್ಯಂತ ಕಡಿಮೆ ಅವಧಿಯಲ್ಲಿ ಕಾಂಪೋಸ್ಟ್ ತಯಾರಿಸುತ್ತಿರುವ ಬಗ್ಗೆ ಮಾಹಿತಿ ನೀಡಿ, ನಗರ ಸ್ಥಳೀಯ ಸಂಸ್ಥೆಗಳ ಹಂತದಲ್ಲಿ ಇಡೀ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಕಪ್ಪು ಸೈನಿಕ ಹುಳು ಲಾರ್ವಗಳ ಮೊಟ್ಟೆ ಉತ್ಪಾದನಾ ಘಟಕ ತರೀಕೆರೆ ಪುರಸಭೆಯಿಂದ ಸ್ಥಾಪಿಸಲಾಗಿದೆ ಎಂದರು.
ತರೀಕೆರೆ ಪುರಸಭೆ ಪರಿಸರ ಅಭಿಯಂತರ ತಾಹೆರಾ ತಸ್ನೀಮ್ ಹಸಿ ತ್ಯಾಜ್ಯ ನಿರ್ವಹಣೆಯಲ್ಲಿ ಪುರಸಭೆಗಳು ಎದುರಿಸುತ್ತಿರುವ ಸವಾಲು ಮತ್ತು ಕಪ್ಪುಸೈನಿಕ ಹುಳುಗಳು ಒಂದು ಭರವಸೆ ಕಿರಣ ಕುರಿತು ಉಪನ್ಯಾಸ ನೀಡಿ ಪ್ರಸ್ತುತ ಪುರಸಭೆಯ ತ್ಯಾಜ್ಯ ವಸ್ತುಗಳ ವಿಲೇವಾರಿ ಸ್ವರೂಪ, ಸಾಧಕ, ಬಾಧಕಗಳು, ಕಪ್ಪು ಸೈನಿಕ ಹುಳುಗಳ ಪ್ರಾಮುಖ್ಯತೆ ಮತ್ತು ಅವುಗಳ ಸಂತತಿ ನಿರ್ವಹಣೆ ಬಗ್ಗೆ ಸಮಗ್ರ ತಿಳಿಸಿದರು.
ವಿಷಯ ತಜ್ಞ ವಿಜ್ಞಾನಿ ಡಾ.ಕಾಳಾಚಾರ್ ಕಪ್ಪು ಸೈನಿಕ ಹುಳುಗಳು ಪ್ರಸ್ತುತ ಮತ್ತು ಭವಿಷ್ಯದ ಹಲವು ಸಮಸ್ಯೆಗಳಿಗೆ ಪರಿಹಾರ ಕುರಿತು ಉಪನ್ಯಾಸ ನೀಡಿದರು.ನಂತರ ವಿವಿಧ ವಿಷಯಗಳನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ, ಚರ್ಚಾ ಗೋಷ್ಠಿಗಳನ್ನು ನಡೆಯಿತು.
ತರೀಕೆರೆಯ ಲಕ್ಕವಳ್ಳಿ ಬಳಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದ ಸಾವಯವ ತ್ಯಾಜ್ಯ ನಿರ್ವಹಣೆ-ಒಂದು ಪ್ರಕೃತಿ ಸ್ನೇಹಿ ವಿಧಾನ ರಾಷ್ಟ್ರೀಯ ವಿಚಾರ ಸಂಕಿರಣವನ್ನು ತರೀಕೆರೆ ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಉದ್ಘಾಟಿಸಿದರು. ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಡೀನ್. ಪ್ರೊ. ಎಸ್.ವಿ.ಕೃಷ್ಣಮೂರ್ತಿ, ಹಿರಿಯ ಪ್ರಾಧ್ಯಾಪಕ ಡಾ.ವೈ.ಅರ್ತೋಬ ನಾಯಕ, ಸಹಾಯಕ ಪ್ರಾಧ್ಯಾಪಕ ಡಾ.ತಳವಾರ ವೆಂಕಟೇಶ್. ಪುರಸಭೆ ಅಭಿಯಂತರ ತಾಹೇರಾ ತಸ್ನೀಮ್ ಮತ್ತಿತರರು ಇದ್ದರು.