ಕನ್ನಡಪ್ರಭ ವಾರ್ತೆ ಹನೂರು ಸಾಕುಪ್ರಾಣಿಗಳ ಭಕ್ಷಕ ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ತಂಡ ರಚನೆ ಮಾಡಿ ಡ್ರೋನ್ ಕ್ಯಾಮೆರಾ ಬಳಸಿ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ.
ಚಿರತೆ ಕಾರ್ಯ ಪಡೆಯಿಂದ ಗ್ರಾಮಸ್ಥರಿಗೆ ಅರಿವು:
ಗಂಗನ ದೊಡ್ಡಿ ಹಾಗೂ ಬಸಪ್ಪನ ದೊಡ್ಡಿ ಮತ್ತು ಉಡುತೊರೆ ಜಲಾಶಯ ಸುತ್ತಮುತ್ತಲಿನ ಹಳ್ಳದ ಸಮೀಪದಲ್ಲಿಯೇ ರೈತರ ಕಬ್ಬಿನ ತೋಟಗಳ ಬಳಿಯೇ ಚಿರತೆ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದು, ರೈತರ ಜಮೀನುಗಳಲ್ಲಿ ಸಾಕುಪ್ರಾಣಿಗಳಾದ ನಾಯಿ, ಮೇಕೆ, ಕುರಿ ಗುರಿಯಾಗಿಸಿಕೊಂಡು ಚಿರತೆ ಕೊಂದು ತಿನ್ನುತ್ತಿರುವುದು ರೈತರ ನಿದ್ದೆಗೆಡಿಸಿದೆ. ಹೀಗಾಗಿ ಚಿರತೆ ಸೆರೆಗೆ ಕಾರ್ಯಪಡೆಯಿಂದ ಗ್ರಾಮಸ್ಥರಿಗೆ ರಾತ್ರಿ ವೇಳೆ ಸಾಕು ಪ್ರಾಣಿಗಳನ್ನು ಸುರಕ್ಷಿತ ಸ್ಥಳದಲ್ಲಿ ಕಟ್ಟಿ ಹಾಕಬೇಕು. ಜೊತೆಗೆ ಒಬ್ಬೊಬ್ಬರೇ ಓಡಾಡುವುದನ್ನು ಬಿಟ್ಟು ಸಣ್ಣ ಮಕ್ಕಳು, ಹಿರಿಯ ನಾಗರಿಕರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರಿಗೆ ಮನವಿ ಮಾಡಿದ್ದಾರೆ.ಚಿರತೆ ಹಿಡಿಯಲು ಅರಣ್ಯಾಕಾರಿಗಳ ಹರಸಾಹಸ:
ಈಗಾಗಲೇ ಗಂಗನ ದೊಡ್ಡಿ ಗ್ರಾಮದಲ್ಲಿ ಬೋನ್ ಇಡಲಾಗಿದೆ. ಚಿರತೆ ಬೋನಿಗೆ ಬೀಳುತ್ತಿಲ್ಲ. ಚಿರತೆ ಪತ್ತೆಗೆ ಫೈಬರ್ ಗೇಜ್ ಹಾಗೂ ತುಮಕೂರು ಗೇಜ್ ಪಂಜರವನ್ನು ಅಳವಡಿಸಲು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ. ಇಲಾಖೆ ಸಿಬ್ಬಂದಿ ರಾತ್ರಿ ಹಗಲು ತಂಡ ರಚನೆ ಮಾಡಿಕೊಂಡು ಗ್ರಾಮಗಳಲ್ಲಿ ಕಾವಲು ಕಾಯುತ್ತಿದ್ದಾರೆ.