ನರಗುಂದ: ಹಾಲು ಉತ್ಪಾದಕರ ಸಂಘಗಳು ಗ್ರಾಮೀಣ ಪ್ರದೇಶದಲ್ಲಿಯೂ ಈಗ ಆಧುನಿಕ ತಂತ್ರಜ್ಞಾನವನ್ನು ಎಲ್ಲ ಹಂತಗಳಲ್ಲಿ ಅಳವಡಿಸಿಕೊಳ್ಳುತ್ತಿದೆ ಎಂದು ಧಾರವಾಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಟಿ. ಕಳಸದ ಹೇಳಿದರು.
ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಗದಗ ಸಹಕಾರ ಇಲಾಖೆ, ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಧಾರವಾಡದ ಕೆಎಂಎಫ್ ಸಂಯುಕ್ತಾಶ್ರಯದಲ್ಲಿ ನರಗುಂದ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕರು ಹಾಗೂ ಹಾಲು ಪರೀಕ್ಷಕರುಗಳಿಗೆ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಳಿ ಅಭಿವೃದ್ಧಿ, ಹಸಿರು ಮೇವು ಮತ್ತು ಸಮತೋಲಿನ ಪಶು ಆಹಾರ ಉತ್ಪಾದನೆ, ಪಶು ವೈದ್ಯಕೀಯ ಸೇವೆ, ಹಾಲು ಶೇಖರಣೆ ಹೀಗೆ ಎಲ್ಲ ಹಂತಗಳಲ್ಲಿ ಆಧುನಿಕ ತಂತ್ರಜ್ಞಾನದ ಉಪಯೋಗ ವಿಸ್ತರಿಸಿಕೊಳ್ಳಲಾಗಿದೆ ಎಂದು ಹೇಳಿದರು.ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ನಿರ್ದೇಶಕ ಎಚ್.ಜಿ. ಹಿರೇಗೌಡ್ರ ಮಾತನಾಡಿ, ಜಾಗತಿಕ ಆಹಾರವಾಗಿರುವ ಹಾಲು ಮಹತ್ತರ ಉತ್ಪಾದನೆ, ಶೇಖರಣೆ, ಸಂಸ್ಕರಣೆ, ಮಾರಾಟ ವ್ಯವಸ್ಥೆಗಳನ್ನು ವೈಜ್ಞಾನಿಕವಾಗಿ ನಿರ್ವಹಿಸುತ್ತಿರುವ ಹೈನೋದ್ಯಮದ ಕಾರ್ಯಚಟುವಟಿಕೆಯೊಂದಿಗೆ ಅದರ ಸಾಧನೆಗಳನ್ನು ವಿಶ್ವಕ್ಕೆ ತೋರಿಸುವ ಕನ್ನಡಿಯಂತೆ ಕೆಎಂಎಫ್ ಕಾರ್ಯನಿರ್ವಹಿಸುತ್ತಿದೆ. ಸಹಕಾರ ಸಂಘಗಳಿಗೆ, ಕಟ್ಟಡಕ್ಕಾಗಿ ಬಡ್ಡಿರಹಿತ ಸಾಲ, ಆಕಳು ಸಾಲ 46,000 ವರೆಗೆ ಹೆಚ್ಚಿಸಲಾಗಿದ್ದು, ಪ್ರಶಂಸಾರ್ಹವಾಗಿದೆ ಎಂದರು.ಹೈನುಗಾರಿಕೆ ಆಧಾರಿತ 100 ಕೋಟಿಗೂ ಅಧಿಕ ಕೃಷಿಕ ಕುಟುಂಬಗಳ ಸಾಮಾಜಿಕ-ಆರ್ಥಿಕ ಸುಧಾರಣೆಯೊಂದಿಗೆ ಜಾಗತಿಕ ಆಹಾರ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡಿರುವ ಕೆ.ಎಂ.ಎಫ್. ವಿಶ್ವ ಆಹಾರ ಸಂಸ್ಥೆ ಅಂತಾರಾಷ್ಟ್ರೀಯ ಹೈನೋದ್ಯಮ ಮಹಾಮಂಡಳ ಹಾಗೂ ಸದಸ್ಯ ರಾಷ್ಟ್ರಗಳ ಸಹಯೋಗದಲ್ಲಿ ಹಲವಾರು ಯೋಜನೆಗಳನ್ನು ರೂಪಿಸುತ್ತದೆ. ಇಂತಹ ಮಹತ್ತರ ಯೊಜನೆಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಪ್ರತಿ ವರ್ಷವೂ ಒಂದೂಂದು ವಿಶಿಷ್ಟ ಮತ್ತು ವಿಭಿನ್ನ ಥೀಮ್ನೊಂದಿಗೆ ವಿಶ್ವ ಹಾಲು ದಿನಾಚರಣೆ ಆಯೋಜಿಸುತ್ತಾ ಬರುತ್ತಿದೆ ಎಂದರು.
ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ವೈ.ಎಫ್. ಪಾಟೀಲ ಮಾತನಾಡಿ, ವಿಶ್ವವನ್ನು ಸುಲಲಿತ ಮತ್ತು ಸುಲಭ ಕಾರ್ಯನಿರ್ವಹಣೆಯತ್ತ ಕರೆದೊಯ್ಯುತ್ತಿರುವ ಡಿಜಿಟಲ್ ತಂತ್ರಜ್ಞಾನವು ಇತರ ಕ್ಷೇತ್ರಗಳಂತೆಯೇ ಹೈನೋದ್ಯಮ ಕ್ಷೇತ್ರಕ್ಕೂ ವರವಾಗಿ ಪರಿಣಮಿಸಿದೆ ಎಂದರು.ಸಹಕಾರ ಸಂಘಗಳ ಉಪನಿಬಂಧಕಿ ಎಸ್.ಎಸ್. ಕಬಾಡೆ, ಪುಷ್ಪಾ ಕೆ. ಕಡಿವಾಳ, ಪ್ರಕಾಶ ನವಲಗುಂದ, ಪ್ರಸನ್ನ ಪಟ್ಟೇದ, ದಿಲೀಪ್ ಐ. ನದಾಫ ಉಪಸ್ಥಿತರಿದ್ದರು.
ತರಬೇತಿ ಕಾರ್ಯಾಗಾರದಲ್ಲಿ ಮಾರುಕಟ್ಟೆಯ ಮೇಲೆ ಹಾಲಿನ ಗುಣಮಟ್ಟ ಪ್ರಭಾವ ಕುರಿತು ಡಾ. ವೀರೇಶ ತರಲಿ, ಶುದ್ಧ ಹಾಗೂ ಅಧಿಕ ಹಾಲು ಉತ್ಪಾದನೆ ಮತ್ತು ಅಗೋಚರ ಕೆಚ್ಚಲುಬಾವು ಕುರಿತು ಡಾ. ಎಂ.ಬಿ. ಮಡಿವಾಳರ, ಸಹಕಾರ ಸಂಘಗಳಲ್ಲಿ ಲೆಕ್ಕಪತ್ರಗಳ ನಿರ್ವಹಣೆ ಕುರಿತು ಎಂ.ಬಿ. ಪಾಟೀಲ ಉಪನ್ಯಾಸ ನೀಡಿದರು. ಎಸ್.ಎಸ್. ಹುಚ್ಚನಗೌಡ್ರ ಪ್ರಾರ್ಥಿಸಿದರು. ಚಂದ್ರಶೇಖರ ಎಸ್. ಕರಿಯಪ್ಪನವರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ದಿಲೀಪ್ ಐ. ನದಾಫ ವಂದಿಸಿದರು.