ನರಗುಂದ: ಹಾಲು ಉತ್ಪಾದಕರ ಸಂಘಗಳು ಗ್ರಾಮೀಣ ಪ್ರದೇಶದಲ್ಲಿಯೂ ಈಗ ಆಧುನಿಕ ತಂತ್ರಜ್ಞಾನವನ್ನು ಎಲ್ಲ ಹಂತಗಳಲ್ಲಿ ಅಳವಡಿಸಿಕೊಳ್ಳುತ್ತಿದೆ ಎಂದು ಧಾರವಾಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಟಿ. ಕಳಸದ ಹೇಳಿದರು.
ಹೈನುಗಾರಿಕೆ ಆಧಾರಿತ 100 ಕೋಟಿಗೂ ಅಧಿಕ ಕೃಷಿಕ ಕುಟುಂಬಗಳ ಸಾಮಾಜಿಕ-ಆರ್ಥಿಕ ಸುಧಾರಣೆಯೊಂದಿಗೆ ಜಾಗತಿಕ ಆಹಾರ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡಿರುವ ಕೆ.ಎಂ.ಎಫ್. ವಿಶ್ವ ಆಹಾರ ಸಂಸ್ಥೆ ಅಂತಾರಾಷ್ಟ್ರೀಯ ಹೈನೋದ್ಯಮ ಮಹಾಮಂಡಳ ಹಾಗೂ ಸದಸ್ಯ ರಾಷ್ಟ್ರಗಳ ಸಹಯೋಗದಲ್ಲಿ ಹಲವಾರು ಯೋಜನೆಗಳನ್ನು ರೂಪಿಸುತ್ತದೆ. ಇಂತಹ ಮಹತ್ತರ ಯೊಜನೆಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಪ್ರತಿ ವರ್ಷವೂ ಒಂದೂಂದು ವಿಶಿಷ್ಟ ಮತ್ತು ವಿಭಿನ್ನ ಥೀಮ್ನೊಂದಿಗೆ ವಿಶ್ವ ಹಾಲು ದಿನಾಚರಣೆ ಆಯೋಜಿಸುತ್ತಾ ಬರುತ್ತಿದೆ ಎಂದರು.
ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ವೈ.ಎಫ್. ಪಾಟೀಲ ಮಾತನಾಡಿ, ವಿಶ್ವವನ್ನು ಸುಲಲಿತ ಮತ್ತು ಸುಲಭ ಕಾರ್ಯನಿರ್ವಹಣೆಯತ್ತ ಕರೆದೊಯ್ಯುತ್ತಿರುವ ಡಿಜಿಟಲ್ ತಂತ್ರಜ್ಞಾನವು ಇತರ ಕ್ಷೇತ್ರಗಳಂತೆಯೇ ಹೈನೋದ್ಯಮ ಕ್ಷೇತ್ರಕ್ಕೂ ವರವಾಗಿ ಪರಿಣಮಿಸಿದೆ ಎಂದರು.ಸಹಕಾರ ಸಂಘಗಳ ಉಪನಿಬಂಧಕಿ ಎಸ್.ಎಸ್. ಕಬಾಡೆ, ಪುಷ್ಪಾ ಕೆ. ಕಡಿವಾಳ, ಪ್ರಕಾಶ ನವಲಗುಂದ, ಪ್ರಸನ್ನ ಪಟ್ಟೇದ, ದಿಲೀಪ್ ಐ. ನದಾಫ ಉಪಸ್ಥಿತರಿದ್ದರು.
ತರಬೇತಿ ಕಾರ್ಯಾಗಾರದಲ್ಲಿ ಮಾರುಕಟ್ಟೆಯ ಮೇಲೆ ಹಾಲಿನ ಗುಣಮಟ್ಟ ಪ್ರಭಾವ ಕುರಿತು ಡಾ. ವೀರೇಶ ತರಲಿ, ಶುದ್ಧ ಹಾಗೂ ಅಧಿಕ ಹಾಲು ಉತ್ಪಾದನೆ ಮತ್ತು ಅಗೋಚರ ಕೆಚ್ಚಲುಬಾವು ಕುರಿತು ಡಾ. ಎಂ.ಬಿ. ಮಡಿವಾಳರ, ಸಹಕಾರ ಸಂಘಗಳಲ್ಲಿ ಲೆಕ್ಕಪತ್ರಗಳ ನಿರ್ವಹಣೆ ಕುರಿತು ಎಂ.ಬಿ. ಪಾಟೀಲ ಉಪನ್ಯಾಸ ನೀಡಿದರು. ಎಸ್.ಎಸ್. ಹುಚ್ಚನಗೌಡ್ರ ಪ್ರಾರ್ಥಿಸಿದರು. ಚಂದ್ರಶೇಖರ ಎಸ್. ಕರಿಯಪ್ಪನವರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ದಿಲೀಪ್ ಐ. ನದಾಫ ವಂದಿಸಿದರು.