ಮೂಲ್ಕಿ: ಹಳೆಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಸಿಹಿತ್ತು ಲಚ್ಚಿಲ್ ಶ್ರೀ ರಾಮ ಭಜನಾ ಮಂದಿರದ ಬಳಿ ಕಡಲ್ಕೊರೆತ ತೀವ್ರಗೊಂಡಿದ್ದು, ತೀರವಾಸಿಗಳು ಆತಂಕದಲ್ಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದ ಸಸಿಹಿತ್ತು ಮುಂಡಾ ಬೀಚ್ ಬಳಿಯ ಉಡುಪಿ ಜಿಲ್ಲೆಯ ಹೆಜಮಾಡಿ ಸಮುದ್ರ ತೀರದಲ್ಲಿ ಜೆಟ್ಟಿ ಕಾಮಗಾರಿ ನಡೆಯುತ್ತಿರುವುದರಿಂದ ಸಸಿಹಿತ್ತು ಸಮುದ್ರ ತೀರವಾಸಿಗಳಲ್ಲಿ ಭೀತಿ ಎದುರಾಗಿದೆ.

ಈ ಕುರಿತು ಹಳೆಯಂಗಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಧನರಾಜ್ ಕೋಟ್ಯಾನ್ ಮಾತನಾಡಿ, ಹೆಜಮಾಡಿ ಜೆಟ್ಟಿ ಕಾಮಗಾರಿಯಿಂದ ಸಸಿಹಿತ್ತು ಸಮುದ್ರ ತೀರದಲ್ಲಿ ಕಡಲ್ಕೂರೆತ ತೀವ್ರಗೊಂಡಿದೆ.ಅಧಿಕಾರಿಗಳು ಸಸಿಹಿತ್ತು ಸಮುದ್ರ ತೀರದ ಸುಮಾರು 19 ಕಡೆ ಬ್ರೇಕ್‌ವಾಟರ್ ನಿರ್ಮಾಣ ಮಾಡುವ ಭರವಸೆ ನೀಡಿದ್ದರೂ ಇದುವರೆಗೂ ಕಾಮಗಾರಿ ಆರಂಭಿಸಿಲ್ಲ ಎಂದು ತಿಳಿಸಿದರು. ಅಲ್ಲದೆ, ಬ್ರೇಕ್‌ವಾಟರ್ ನಿರ್ಮಾಣ ಕಾಮಗಾರಿಗೆ ಸರ್ಫಿಂಗ್ ಇಲಾಖೆಯ ಅಧಿಕಾರಿಗಳು ಅಡ್ಡಗಾಲು ಇಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೀಗೆಯೇ ಕಡಲೊರೆತ ಮುಂದುವರಿದರೆ ಮುಂದೊಂದು ದಿನ ಸಸಿಹಿತ್ತು ಜನತೆಗೆ ದೊಡ್ಡ ಅಪಾಯ ಕಾದಿದೆ. ಆದ್ದರಿಂದ ಕೂಡಲೇ ನಾಗರಿಕರು ಎಚ್ಚೆತ್ತು ಬ್ರೇಕ್‌ವಾಟರ್ ನಿರ್ಮಾಣ ಕಾಮಗಾರಿಗೆ ಸಂಬಂಧ ಪಟ್ಟ ಅಧಿಕಾರಿಗಳನ್ನು ಒತ್ತಾಯಿಸಬೇಕೆಂದು ತಿಳಿಸಿದ್ದಾರೆ