ನವೀಕರಿಸಬಹುದಾದ ಇಂಧನಗಳ ಸಂರಕ್ಷಣೆ ಸಪ್ತಾಹದ ಅಂಗವಾಗಿ ಜನಜಾಗೃತಿ ಜಾಥಾ
ಇಂಧನ ಉಳಿತಾಯ ಮತ್ತು ನವೀಕರಿಸಬಹುದಾದ ಇಂಧನ ಬಳಕೆ ಇಂದಿನ ಅಗತ್ಯವಾಗಿದೆ. ನವೀಕರಿಸಬಹುದಾದ ಇಂಧನಗಳ ಬಳಕೆಯಿಂದ ಪರಿಸರ ಮಾಲಿನ್ಯ ಕಡಿಮೆಯಾಗುವಲ್ಲಿ ಸಹಕಾರಿಯಾಗಿದೆ ಎಂದು ಶೃಂಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಭಾರತೀ ಹೇಳಿದರು.
ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಆಯೋಜಿಸಲಾಗಿದ್ದ ನವೀಕರಿಸಬಹುದಾದ ಇಂಧನಗಳ ಸಂರಕ್ಷಣೆ ಸಪ್ತಾಹದ ಅಂಗವಾಗಿ ಜನಜಾಗೃತಿ ಜಾಥಾದಲ್ಲಿ ಮಾತನಾಡಿದರು. ವಿದ್ಯುತ್ ಕ್ಷೇತ್ರದಿಂದ ಪ್ರಕೃತಿ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಗಟ್ಟಲು ವಿದ್ಯುತ್ ಕೊರತೆ ನೀಗಿಸಲು, ಪರಿಸರ ಸ್ನೇಹಿ ಅಸಂಪ್ರದಾಯಿಕ ಶಕ್ತಿ ಮೂಲಗಳಿಂದ ಉತ್ಪಾದಿಸುವ ವಿದ್ಯುತ್ ಬಳಕೆ ಮಾಡಬೇಕು ಎಂದರು.ಬಹುಬೇಡಿಕೆ ಇರುವ ಇಂಧನ ಶಕ್ತಿ ಕೊರತೆ ನೀಗಿಸುವಲ್ಲಿ ಸೌರಶಕ್ತಿ ಇಂದಿನ ಬಹುಮುಖ್ಯ ಸಾಧನವಾಗಿದೆ. ಜಲಶಕ್ತಿ, ಪವನ ಶಕ್ತಿ, ಜೈವಿಕ ಶಕ್ತಿ ಇತ್ಯಾದಿ ಶಕ್ತಿಗಳಿಂದ ವಿದ್ಯುತ್ ಉತ್ಪಾದಿಸಿ ಬಳಸುವುದರಿಂದ ಪರಿಸರಕ್ಕೆ ಯಾವುದೇ ರೀತಿಯ ಹಾನಿಯುಂಟಾಗುವುದಿಲ್ಲ. ಮುಂದಿನ ದಿನಗಳಲ್ಲಿ ನವೀಕರಿಸಬಹುದಾದ ಇಂಧನಗಳೇ ಬಹುಮುಖ್ಯವಾಗಲಿದೆ ಎಂದು ತಿಳಿಸಿದರು.
ಕಾಲೇಜಿನ ಆವರಣದಿಂದ ಶಿಡ್ಲೆವರೆಗೆ ಶಿಡ್ಲೆಯಿಂದ ಮೆಣಸೆ ವೃತ್ತದವರೆಗೆ ಜಾಥಾ ನಡೆಯಿತು. ಮನೆ ಮನೆಗಳಿಗೆ ಕರಪತ್ರ ಹಂಚಿ ಜಾಗೃತಿ ಮೂಡಿಸಲಾಯಿತು. ಸಪ್ತಾಹದ ಅಂಗವಾಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ ,ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್, ಎನ್ಎಸ್ಎಸ್ ವಿಭಾಗದ ಮಂಜುನಾಥ್, ರಾಘವೇಂದ್ರ ರೆಡ್ಡಿ, ಐಕ್ಯೂಎಸಿಯ ಡಾ.ಆಶಾ ಬಿ.ಜಿ, ಶಿವಕುಮಾರ್, ಚರಣ್ ರಾಜ್, ಆಶಾ ಬಾರ್ಕೂರು, ಆಶಾಲತಾ ಮತ್ತಿತರರು ಇದ್ದರು.
1 ಶ್ರೀ ಚಿತ್ರ 1-ಶೃಂಗೇರಿ ಮೆಣಸೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ನವೀಕರಿಸಬಹುದಾದ ಇಂಧನಗಳ ಸಂರಕ್ಷಣೆ ಸಪ್ತಾಹದ ಅಂಗವಾಗಿ ಜನಜಾಗೃತಿ ಜಾಥಾ ನಡೆಯಿತು.