ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಖಾದಿ ಬಳಕೆಯಿಂದ ಸ್ವದೇಶಿ ತತ್ವ ಪಾಲನೆ ಮಾಡಲು ಸಾಧ್ಯವಾಗುತ್ತದೆ ಎಂದು ಖಾದಿ ಗ್ರಾಮೋದ್ಯೋಗ ಆಯೋಗದ ನಿರ್ದೇಶಕರಾದ ಶಿವರಾಜ್ ಹೇಳಿದರು.ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ಎಸ್ಆರ್ಎಸ್ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಸೋಮವಾರ ಆಯೋಜಿಸಿದ್ದ ಮನೆಮನೆಯಲ್ಲೂ ಸ್ವದೇಶಿ ಮತ್ತು ವಾಲ್ಮೀಕಿ ಜಯಂತಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಖಾದಿ ಗ್ರಾಮೋದ್ಯೋಗ ಆಯೋಗವು ಹಲವಾರು ಗ್ರಾಮೀಣ ಹುದ್ದೆಗಳನ್ನು ಪ್ರೋತ್ಸಾಹಿಸುತ್ತಿದೆ. ಗ್ರಾಮಗಳಲ್ಲಿ ತಯಾರಾದ ಖಾದಿಯನ್ನು ಹೆಚ್ಚು ಬಳಕೆ ಮಾಡಿ, ಮನೆಮನೆಯಲ್ಲೂ ಸ್ವದೇಶಿ ಎಂಬ ತತ್ವವನ್ನು ಅಳವಡಿಸಿಕೊಂಡರೆ ಭಾರತದಲ್ಲಿರುವ ಬಡತನ, ನಿರುದ್ಯೋಗ, ಶೋಷಣೆ ನಿವಾರಿಸಲು ಅನುಕೂಲವಾಗುತ್ತದೆ ಎಂದರು.
ಜೇನು ಸಾಕಾಣಿಕೆ, ಕಾಗದ , ಸಾಬೂನು ತಯಾರಿಕೆ, ಟೈಲರಿಂಗ್, ಖಾದಿ ವಸ್ತು ತಯಾರಿಕೆ, ಅಂಜಿ ತಯಾರಿಕೆ, ಚರಕ ಬಳಸಿ ದಾರ ಮತ್ತು ಬಟ್ಟೆ ತಯಾರಿಕೆ ಯಂತಹ ಗಾಂಧೀಜಿಯವರ ಗ್ರಾಮೀಣ ಚಿಂತನೆಗಳನ್ನ ಜನರಿಗೆತಲುಪಿಸಲು ಖಾದಿ ಮಂಡಳಿ ಹಲವಾರು ವರ್ಷಗಳಿಂದ ಪ್ರಯತ್ನಿಸುತ್ತಿದೆ. ಗ್ರಾಮೀಣ ಜನರು, ಯುವಕರು ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದರು.ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷ ಡಾ ಎಚ್ ಕೆ ಎಸ್ ಸ್ವಾಮಿ ಅವರು ಮಾತನಾಡಿ, ಶಿಕ್ಷಣದಲ್ಲಿ ಗಾಂಧೀಜಿಯವರ ತತ್ವಗಳನ್ನು ಅಳವಡಿಸಲು ಪ್ರಯತ್ನಿಸಬೇಕು. ಸಣ್ಣ ಮಕ್ಕಳಿದ್ದಾಗಲೇ ಗಾಂಧೀಜಿ ವಿಚಾರಗಳನ್ನು ತಿಳಿಸಿಕೊಟ್ಟರೆ ಮುಂದೆ ಅವರು ಜೀವನದಲ್ಲಿ ಪಾಲನೆ ಮಾಡಲು ಸಾಧ್ಯವಾಗುತ್ತದೆ. ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು, ಜನರಿಗೆ ಗ್ರಾಮೀಣ ಉದ್ಯೋಗಗಳನ್ನು ರಚಿಸಿ ಕೊಡಬೇಕು ಎಂದರು.
ವಿದ್ಯಾರ್ಥಿಗಳಿಗೆ ಪಾಠದ ಬೋಧನೆಯ ಜೊತೆಗೆ ಕೈಕಾಲುಗಳ ಬಳಕೆ, ದೈಹಿಕ ಶ್ರಮ, ಮೇಲು-ಕೀಳು ನಿವಾರಣೆ, ಪರಿಸರ ಮಾಲಿನ್ಯ ತಡೆಯುವುದೂ ಸೇರಿದಂತೆ ಹಲವಾರು ವಿಷಯಗಳ ತಿಳಿಸಿಕೊಡಬೇಕಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗಣವಾಗಿ ಗ್ರಾಮೀಣ ಉದ್ಯೋಗಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.ಎಸ್ ಆರ್ ಎಸ್ ಕಾಲೇಜಿನ ಆಡಳಿತ ಅಧಿಕಾರಿಗಳ ರವಿ ಟಿ.ಎಸ್ ಮಾತನಾಡಿ,ವಿದ್ಯಾರ್ಥಿಗಳಿಗೆ ವಾಲ್ಮೀಕಿ ರಚಿಸಿದಂತಹ ರಾಮಾಯಣದ ಪರಿಚಯ ಮಾಡಿಕೊಡಬೇಕು. ರಾಮನ ತ್ಯಾಗ, ಬಲಿದಾನ, ರಾವಣನ ಭಕ್ತಿ ತಿಳಿಸಬೇಕು. ಕುವೆಂಪುರವರ ರಾಮಾಯಣ ದರ್ಶನದಲ್ಲಿರುವ ಅಂಶಗಳ ಅರಿತುಕೊಂಡು ಸಾಗಬೇಕೆಂದರು.
ಕೇಂದ್ರ ಖಾದಿ ಮತ್ತು ಹತ್ತಿ ಹಿಂಜುವ ಕೈಗಾರಿಕೆಯ ಮ್ಯಾನೇಜರ್ ರಮೇಶ್ ಇಟಗಿ ವಿದ್ಯಾರ್ಥಿಗಳಿಗೆ ಮನೆಮನೆಯಲ್ಲೂ ಸ್ವದೇಶಿ ಮತ್ತು ಖಾದಿ ಬಳಕೆಯ ಬಗ್ಗೆ ಪ್ರಮಾಣವಚನ ಬೋಧಿಸಿದರು.ಪದವಿ ಪೂರ್ವ ಕಾಲೇಜಿನ ವಿಜ್ಞಾನ, ಅರ್ಥಶಾಸ್ತ್ರ, ಮತ್ತು ವಾಣಿಜ್ಯಶಾಸ್ತ್ರದ ವಿದ್ಯಾರ್ಥಿಗಳು ಮತ್ತು ಎಸ್ ಆರ್ ಎಸ್ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು. ವಿದ್ಯಾರ್ಥಿಗಳಿಗೆ ಖಾದಿಯಿಂದ ತಯಾರಾದ ತ್ರಿವರ್ಣ ಧ್ವಜ, ಬ್ಯಾನರ್ ಗಳು, ಚರಕ, ಹತ್ತಿ, ಗಾಂಧೀಜಿಯವರ ಚಿತ್ರ ಮುಂತಾದವುಗಳನ್ನ ಪ್ರದರ್ಶಿಸಲಾಯಿತು.