ಗುಂಡ್ಲುಪೇಟೆ: ನೇಹಾ ಹಿರೇಮಠ್ ಹತ್ಯೆಗೈದಿರುವುದು ಅಕ್ಷಮ್ಯ ಅಪರಾಧ ಈ ಘಟನೆಯನ್ನು ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಘಟಕ ತೀವ್ರವಾಗಿ ಖಂಡಿಸುತ್ತದೆ. ರಾಜ್ಯ ಸರ್ಕಾರ ಕೂಡ ಸಿಐಡಿ ತನಿಖೆಗೆ ಆದೇಶ ನೀಡಿದ್ದರೂ ನೇಹಾ ಘಟನೆಯನ್ನು ಚುನಾವಣಾ ವಸ್ತುವಾಗಿ ಬಳಸಿಕೊಳ್ಳುವುದು ಸರಿಯಲ್ಲ ಎಂದು ತಾಲೂಕು ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ ಹೇಳಿದರು.
ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ನೇಹಾ ಹತ್ಯೆಗೈದ ಆರೋಪಿಯನ್ನು ಗುಂಡಿಟ್ಟು ಕೊಳ್ಳಲಿ ಎಂದು ಹತ್ಯೆಗೈದ ಯುವಕನ ತಂದೆಯೇ ಹೇಳಿದ್ದಾರೆ. ಅಲ್ಲದೇ ನೇಹಾ ತಂದೆ ಕೂಡ ಸಿಐಡಿ ತನಿಖೆ ಸ್ವಾಗತಿಸಿದ್ದಾರೆ. ಆರೋಪಿ ಬಂಧಿಸಲಾಗಿದೆ. ನ್ಯಾಯಾಲಯ ಆದೇಶಕ್ಕೆ ಕಾಯಬೇಕು ಎಂದರು.ಕಾಂಗ್ರೆಸ್ ಬೆಂಬಲಿಸಲಿ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸಮ ಸಮಾಜದ ಕನಸು ಕಂಡು ಬಸವಣ್ಣನಿಗೆ ಸಾಂಸ್ಕೃತಿಕ ನಾಯಕ ಎಂದು ಸರ್ಕಾರದ ಮೂಲಕವೇ ಘೋಷಿಸಿದ್ದಾರೆ, ಅಲ್ಲದೆ ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ ಕಡ್ಡಾಯವಾಗಿ ಹಾಕಬೇಕು ಎಂದು ಆದೇಶ ಹೊರಡಿಸಿದ್ದಾರೆ ಇದು ವೀರಶೈವ-ಲಿಂಗಾಯಿತರಿಗೆ ಹೆಮ್ಮೆಯ ವಿಷಯ ಹಾಗಾಗಿ ವೀರಶೈವರು ಸೇರಿದಂತೆ ಎಲ್ಲಾ ಜಾತೀಯವರು ಕಾಂಗ್ರೆಸ್ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷದಲ್ಲೂ ವೀರಶೈವ ಸಮಾಜದಲ್ಲಿ ಶ್ಯಾಮನೂರು, ಈಶ್ವರ್ ಖಂಡ್ರೆ, ಎಂ.ಬಿ.ಪಾಟೀಲ್ ರಂತ ಘಟಾನುಘಟಿ ನಾಯಕರು ಇದ್ದಾರೆ. ವೀರಶೈವರು ಬಿಜೆಪಿ ಜೊತೆ ಇದ್ದಾರೆ ಎನ್ನುವುದು ಸುಳ್ಳು. ಕಾಂಗ್ರೆಸ್ಗೆ ಹೆಚ್ಚು ಮತ ನೀಡಬೇಕು ಎಂದರು.20 ಎಂಪಿ ಗೆಲ್ತೇವೆ:
ರಾಜ್ಯದಲ್ಲಿ 5 ಗ್ಯಾರಂಟಿಗಳು ಬಹುತೇಕ ಕೆಲಸ ಮಾಡುತ್ತವೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗ್ಯಾರಂಟಿ ಘೋಷಣೆಗೆ ರಾಜ್ಯದಲ್ಲಿ ಅತೀ ಹೆಚ್ಚು ಸ್ಥಾನ ಕಾಂಗ್ರೆಸ್ಗೆ ಬಂದಿದೆ.ಈಗ ಐದು ಗ್ಯಾರಂಟಿಗಳು ಜಾರಿಯಾಗಿವೆ ಇದು ಕಾಂಗ್ರೆಸ್ ವರದಾನ ಹಾಗಾಗಿ ರಾಜ್ಯದಲ್ಲಿ ೨೦ ಸಂಸದರು ಆಯ್ಕೆಯಾಗಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಗಂಗಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಕುಮಾರಸ್ವಾಮಿ, ಮುಖಂಡರಾದ ವೀರನಪುರ ಚಂದ್ರಶೇಖರ್, ಚಿದಾನಂದ ಇದ್ದರು.