ಕನ್ನಡಪ್ರಭ ವಾರ್ತೆ ಮೈಸೂರು
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿ.ಸಿ. ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಬಿ.ಎಸ್. ಬಸವರಾಜು ಮಾತನಾಡಿ, ಕೃಷಿಸಖಿಯರು ರೈತರ ತಾಕುಗಳಿಗೆ ಭೇಟಿ ನೀಡಬೇಕಾದಲ್ಲಿ ಮೊದಲು ಕೃಷಿ ತಾಂತ್ರಿಕತೆಗಳನ್ನು ಕಲಿತಿರಬೇಕು. ಈ ತಾಂತ್ರಿಕತೆಗಳು ಇಂತಹ ತರಬೇತಿ ಕಾರ್ಯಕ್ರಮಗಳಿಂದ ಸಿಗುತ್ತದೆ ಎಂದರು.
ರೈತ ಮಹಿಳೆಯರು ರಾಸಾಯನಿಕ ಮುಕ್ತ ಕೃಷಿ ಆರಂಭಿಸಿ, ಆರೋಗ್ಯಕರ ಪರಿಸರ ಹಾಗೂ ಆರೋಗ್ಯ ಉತ್ಪನ್ನಗಳನ್ನು ಉತ್ಪಾದಿಸಿ, ಆರೋಗ್ಯ ಮಟ್ಟವನ್ನು ಸುಧಾರಿಸಬೇಕು. ಈ ಕಾರ್ಯಕ್ರಮದ ಪ್ರಮುಖ ಹಂತವಾಗಿ ಕೃಷಿಸಖಿಯರಿಗಾಗಿ ಪರಿಸರ ಕೃಷಿ ವಿಧಾನಗಳ ಬಗ್ಗೆ 6 ದಿನಗಳು ಆಯೋಜಿಸಿರುವ ಮೂರನೇ ಮಾಡ್ಯುಲ್ ತರಬೇತಿ ಬಹಳ ಉಪಯುಕ್ತವಾಗಿದೆ ಎಂದು ಅವರು ಹೇಳಿದರು.ತರಬೇತಿಯನ್ನು ಪಡೆದು ಕೃಷಿಸಖಿಯರು ಪ್ರಮುಖ ಇಲಾಖೆಗಳು ಹಾಗೂ ರೈತರಿಗೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸಿ, ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ಶ್ರಮಿಸಬೇಕು ಎಂದರು.
ನಿವೃತ್ತ ವಿಜ್ಞಾನಿ ಡಾ.ಜೆ.ಜಿ. ರಾಜಣ್ಣ ಅವರು, ಮಣ್ಣು ಪರೀಕ್ಷೆಯ ವಿಧಾನಗಳು ಮತ್ತು ಮಣ್ಣು ಆರೋಗ್ಯ ಚೀಟಿಯ ಬಗ್ಗೆ ಕೃಷಿಸಖಿಯರಿಗೆ ಮಾಹಿತಿ ನೀಡಿದರು.
ವಲಯ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ. ವೆಂಕಟಪ್ಪ, ಡಾ.ಸಿ.ಎಂ. ಸುನಿಲ್ ಇದ್ದರು. ಸಹಾಯಕ ಪ್ರಾಧ್ಯಾಪಕ ಡಾ. ಶಿವಕುಮಾರ್ ಸ್ವಾಗತಿಸಿದರು.