ವಿ.ಶ್ರೀನಿವಾಸಪ್ರಸಾದ್ ರಾಜಕೀಯ ಕ್ಷೇತ್ರದ ದೊಡ್ಡ ಆಲದ ಮರ: ಎಚ್‌.ವಿಶ್ವನಾಥ್‌

KannadaprabhaNewsNetwork | Published : Jun 12, 2024 12:35 AM

ಸಾರಾಂಶ

ದೇಶದ ದಲಿತ ನಾಯಕರ ಸಾಲಿನಲ್ಲಿ ಅಗ್ರಪಂಕ್ತಿ ನಾಯಕರ ಸಾಲಿಗೆ ನಿಲ್ಲುವ ವಿ.ಶ್ರೀನಿವಾಸಪ್ರಸಾದ್‌ ಅವರ ಜೀವನ ಮತ್ತು ಸಾಧನೆ ಇತರೆ ರಾಜಕೀಯ ನಾಯಕರಿಗೆ ಅನುಕರಣೀಯ ಮತ್ತು ಮಾದರಿಯಾಗಿದ್ದು, ಅಂತಹಾ ಅಸಮಾನ್ಯ ವ್ಯಕ್ತಿ ನಮ್ಮ ನಾಡಿನಲ್ಲಿ ಜನಿಸಿದ್ದು, ಎಲ್ಲರ ಪುಣ್ಯ ವಿಶೇಷ.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಕೇಂದ್ರದ ಮಾಜಿ ಸಚಿವ ಮತ್ತು ಹಿರಿಯ ದಲಿತ ಮುಖಂಡ ವಿ. ಶ್ರೀನಿವಾಸಪ್ರಸಾದ್ ಅವರು ರಾಜಕೀಯ ಕ್ಷೇತ್ರದ ದೊಡ್ಡ ಆಲದ ಮರವಾಗಿದ್ದು, ಅವರ ಆಶ್ರಯದಲ್ಲಿ ಸಾವಿರಾರು ಮಂದಿ ಬದುಕಿ ಸಮಾಜಕ್ಕೆ ಆಸ್ತಿ ಮತ್ತು ಮಾದರಿಯಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.

ಪಟ್ಟಣದ ಎಚ್.ಡಿ. ದೇವೇಗೌಡ ಸಮುದಾಯ ಭವನದಲ್ಲಿ ಕೆ.ಆರ್. ನಗರ ಮತ್ತು ಸಾಲಿಗ್ರಾಮ ತಾಲೂಕು ಜೆಡಿಎಸ್ ಮತ್ತು ವಿ. ಶ್ರೀನಿವಾಸಪ್ರಸಾದ್ ಅಭಿಮಾನಿಗಳ ಬಳಗ ಆಯೋಜಿಸಿದ್ದ ವಿ. ಶ್ರೀನಿವಾಸಪ್ರಸಾದ್ ಒಂದು ನೆನಪು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದ ದಲಿತ ನಾಯಕರ ಸಾಲಿನಲ್ಲಿ ಅಗ್ರಪಂಕ್ತಿ ನಾಯಕರ ಸಾಲಿಗೆ ನಿಲ್ಲುವ ಅವರ ಜೀವನ ಮತ್ತು ಸಾಧನೆ ಇತರ ರಾಜಕೀಯ ನಾಯಕರಿಗೆ ಅನುಕರಣೀಯ ಮತ್ತು ಮಾದರಿಯಾಗಿದ್ದು ಅಂತಹಾ ಅಸಮಾನ್ಯ ವ್ಯಕ್ತಿ ನಮ್ಮ ನಾಡಿನಲ್ಲಿ ಜನಿಸಿದ್ದು, ಎಲ್ಲರ ಪುಣ್ಯ ವಿಶೇಷ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ತಮ್ಮ ಅಧಿಕಾರದ ಅವಧಿಯಲ್ಲಿ ಉತ್ತಮರನ್ನು ಗುರುತಿಸಿ ಮಾರ್ಗದರ್ಶನ ಮಾಡುತ್ತಿದ್ದ ಅವರ ಗುಣ ಸರ್ವತ್ರ ಪ್ರಸ್ತುತವಾಗಿದ್ದು ಜಾತ್ಯತೀತ ಸಮಾಜ ನಿರ್ಮಾಣವಾಗಬೇಕಾದರೆ ಭವಿಷ್ಯದಲ್ಲಿ ನಾವೆಲ್ಲರೂ ವಿ. ಶ್ರೀನಿವಾಸಪ್ರಸಾದ್‌ ಅವರ ಆದರ್ಶಗಳನ್ನು ತಪ್ಪದೇ ಪಾಲಿಸಬೇಕು ಎಂದು ಸಲಹೆ ನೀಡಿದರು.

ದಲಿತ ಮುಖಂಡ ನಾಗರಾಜು, ವಕೀಲ ತಿಮ್ಮಪ್ಪ, ತಾಪಂ ಮಾಜಿ ಸದಸ್ಯ ಶ್ರೀನಿವಾಸಪ್ರಸಾದ್ ಮಾತನಾಡಿದರು. ವಿ. ಶ್ರೀನಿವಾಸ ಪ್ರಸಾದ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಲಾಯಿತು.

ತಾಪಂ ಮಾಜಿ ಅಧ್ಯಕ್ಷೆ ಭಾಗ್ಯಶಂಕರ್, ಮಾಜಿ ಸದಸ್ಯರಾದ ಇ. ರಾಮಪ್ಪ, ಎಂ. ತಮ್ಮಣ್ಣ, ಜೆಡಿಎಸ್ ದಲಿತ ಮೋರ್ಚಾ ತಾಲೂಕು ಅಧ್ಯಕ್ಷ ಸುರೇಶ್, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ಮುಖಂಡರಾದ ವೆಂಕಟೇಶ್, ಅಶೋಕ್, ಮಹದೇವಯ್ಯ, ಬಿ.ಡಿ. ರೇವಣ್ಣ, ಗೋವಿಂದರಾಜು, ಮೋಹನ್ ಇದ್ದರು.

Share this article