ಜಾನುವಾರುಗಳಿಗೆ ಲಸಿಕೆ ಹಾಕಿಸಿದರೆ ಹಾಲು ಕಡಿಮೆಯಾಗಲ್ಲ

KannadaprabhaNewsNetwork | Published : Apr 25, 2025 11:50 PM

ಸಾರಾಂಶ

ಹೈನುಗಾರಿಕೆ ಅವಲಂಬಿಸಿಕೊಂಡಿರುವ ರೈತರು ತಮ್ಮ ಜಾನುವಾರುಗಳ ಆರೋಗ್ಯ ಸುರಕ್ಷತೆ ಕಾಪಾಡಿಕೊಳ್ಳುವುದು ಬಹುಮುಖ್ಯ.

ಕನ್ನಡಪ್ರಭ ವಾರ್ತೆ ನಾಗಮಂಗಲಜಾನುವಾರುಗಳಿಗೆ ಕಾಲುಬಾಯಿ ಜ್ವರ ತಡೆಯುವ ಲಸಿಕೆ ಹಾಕಿಸಿದರೆ ಹಾಲಿನ ಇಳುವರಿ ಪ್ರಮಾಣ ಕಡಿಮೆಯಾಗುತ್ತದೆಂಬ ಮೂಢನಂಬಿಕೆಯಿಂದ ರೈತರು ಹೊರಬಂದಾಗ ಮಾತ್ರ ರೋಗವನ್ನು ತಡೆಗಟ್ಟಲು ಸಾಧ್ಯ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ತಾಲೂಕಿನ ಬ್ರಹ್ಮದೇವರಹಳ್ಳಿ ಗ್ರಾಪಂ ಆವರಣದಲ್ಲಿ ಜಿಲ್ಲಾ ಪಂಚಾಯತ್ ಮತ್ತು ಪಶುಪಾಲನ, ಪಶುವೈದ್ಯಕೀಯ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 7ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ಹೈನುಗಾರಿಕೆ ಅವಲಂಬಿಸಿಕೊಂಡಿರುವ ರೈತರು ತಮ್ಮ ಜಾನುವಾರುಗಳ ಆರೋಗ್ಯ ಸುರಕ್ಷತೆ ಕಾಪಾಡಿಕೊಳ್ಳುವುದು ಬಹುಮುಖ್ಯ. ಪ್ರತಿ ಆರು ತಿಂಗಳಿಗೊಮ್ಮೆ ಜಾನುವಾರುಗಳಿಗೆ ಉಚಿತವಾಗಿ ಕಾಲುಬಾಯಿ ಜ್ವರದ ಲಸಿಕೆ ನೀಡುವಂತೆ ಸರ್ಕಾರ ಸೂಚನೆ ನೀಡಿದೆ. ಆದರೆ, ಗ್ರಾಮೀಣ ಪ್ರದೇಶದ ಕೆಲ ರೈತರು ಲಸಿಕೆ ಹಾಕಿಸಿದರೆ ಹಾಲು ಕರೆಯುವ ಹಸುಗಳಿಗೆ ಜ್ವರ ಕಾಣಿಸಿಕೊಂಡು ಹಾಲಿನ ಇಳುವರಿ ಪ್ರಮಾಣ ಕಡಿಮೆಯಾಗುತ್ತದೆಂಬ ಮೂಢನಂಬಿಕೆಯಿಂದ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸದೆ ರೋಗ ಕಾಣಿಸಿಕೊಂಡ ನಂತರ ಔಷಧೋಪಚಾರ ಮಾಡಿಸಲು ಮುಂದಾಗುತ್ತಾರೆ ಎಂದರು.ಜಾನುವಾರುಗಳಿಗೆ ಕಾಲು ಬಾಯಿ ರೋಗ ಬರುವ ಮುನ್ನ ಲಸಿಕೆ ಹಾಕಿಸಿದರೆ ಯಾವುದೇ ರೀತಿಯ ಸೋಂಕು ಹರಡುವುದಿಲ್ಲ. ಲಸಿಕೆ ಹಾಕಿಸದೆ ನಿರ್ಲಕ್ಷ್ಯವಹಿಸಿದರೆ ಕಾಲುಬಾಯಿ ಜ್ವರಕ್ಕೀಡಾಗುವ ಜಾನುವಾರುಗಳು ಚೇತರಿಸಿಕೊಂಡು ಬದುಕಿದ್ದರೂ ಕೂಡ ನಂತರದಲ್ಲಿ ಗರ್ಭಧರಿಸುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ಎಚ್ಚರಿಸಿದರು.

ಎರಡು ದಿನದ ಹಾಲಿಗೋಸ್ಕರ ಹಸುಗಳನ್ನೇ ಬಲಿಕೊಟ್ಟು. ನಂತರ ಇಲಾಖೆಯನ್ನು ಹೊಣೆ ಮಾಡಬಾರದು. ಇಲಾಖೆಯ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡಲ್ಲಿ ತಮ್ಮ ಸಾಕುಪ್ರಾಣಿಗಳಿಗೆ ಬರುವ ರೋಗ ರುಜಿನಗಳನ್ನು ತಪ್ಪಿಸಬಹುದು ಎಂದು ಹೇಳಿದರು.ತಾಲೂಕಿನಲ್ಲಿ ಒಟ್ಟು 73 ಸಾವಿರ ಹಸು, ಎಮ್ಮೆಗಳಿವೆ. ರೈತರಿಗೆ ಸಮರ್ಪಕ ಸೇವೆ ನೀಡುವ ಸಲುವಾಗಿ ಪಶು ಇಲಾಖೆ ಹಾಗೂ ಮನ್ಮುಲ್‌ನ ವೈದ್ಯರು ಮತ್ತು ಸಿಬ್ಬಂದಿಗಳ ತಂಡ ತಾಲೂಕಿನ ಎಲ್ಲಾ ಗ್ರಾಮಗಳಿಗೆ ಭೇಟಿಕೊಟ್ಟು ಏ.26ರಿಂದ ಜೂ.9ರವರೆಗೆ 45 ದಿನಗಳ ಕಾಲ ಜಾನುವಾರು ಲಸಿಕೆ ಹಾಕುವ ಕುರಿತು ಜಾಗೃತಿ ಮೂಡಿಸಲಿದ್ದಾರೆ. ಜಾನುವಾರು ಹೊಂದಿರುವ ರೈತರು ಸರ್ಕಾರದ ಯೋಜನೆ ಸಾರ್ಥಕಗೊಳಿಸಬೇಕು ಎಂದು ಮನವಿ ಮಾಡಿದರು.ಈ ವೇಳೆ ಮನ್ಮುಲ್ ನಿರ್ದೇಶಕರಾದ ಎನ್.ಅಪ್ಪಾಜಿಗೌಡ, ಲಕ್ಷ್ಮೀನಾರಾಯಣ, ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಶರತ್‌ರಾಜ್, ಮನ್ಮುಲ್ ವ್ಯವಸ್ಥಾಪಕ ನಿರ್ದೇಶಕ ಮಂಜೇಶ್, ಉಪ ವ್ಯವಸ್ಥಾಪಕ ಪ್ರಫುಲ್, ಪಶು ವೈದ್ಯರಾದ ಡಾ.ಹರ್ಷ, ಡಾ.ಸಾರಾ, ಮುಖಂಡ ಕೊಣನೂರು ಹನುಮಂತಯ್ಯ ಸೇರಿದಂತೆ ಪಶುವೈದ್ಯಕೀಯ ಇಲಾಖೆ ಸಿಬ್ಬಂದಿಗಳು ಇದ್ದರು.------- 25ಕೆಎಂಎನ್ ಡಿ16

ನಾಗಮಂಗಲ ತಾಲೂಕಿನ ಬ್ರಹ್ಮದೇವರಹಳ್ಳಿ ಗ್ರಾಪಂ ಆವರಣದಲ್ಲಿ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಿದರು.

Share this article