ಕನ್ನಡಪ್ರಭವಾರ್ತೆ ಗುಂಡ್ಲುಪೇಟೆ
ಮಠದ ಭಕ್ತರಾದ ತಾಲೂಕಿನ ಹೂರದಹಳ್ಳಿ ಗ್ರಾಮದ ಪವಿತ್ರ ಹಾಗೂ ಶಿವಕುಮಾರ್ ಶರಣರ ಚಿಂತನೆಯಂತೆ ಅಷ್ಟಾವರಣ ಪದ್ಧತಿಯಲ್ಲಿ ವಚನ ಕಲ್ಯಾಣ ವಾಗುವ ಮೂಲಕ ಸತಿಪತಿಗಳಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಕೃಷಿಕ ಕುಟುಂಬದ ವಧು ವರರನ್ನು ಶಶೀರ್ವದಿಸಲು ಗ್ರಾಮಸ್ಥರು, ಕುಟುಂಬದ ಹಿರಿಯರು, ಸ್ನೇಹಿತರು, ಬಂಧುಗಳು ಆಗಮಿಸಿದ್ದರು. ನವ ವಧುವರರಿಗೆ ಇಮ್ಮಡಿ ಉದ್ದಾನ ಸ್ವಾಮೀಜಿ ಪ್ರತಿಜ್ಞಾವಿಧಿ ಬೋಧಿಸಿದ ಬಳಿಕ ಮಾತನಾಡಿ, ದೊಡ್ಡ, ದೊಡ್ಡ ಛತ್ರದಲ್ಲಿ ವಿವಾಹ ನಡೆಸಲು ಹೋಗಿ, ಪಿತ್ರಾರ್ಜಿತ ಜಮೀನು ಮಾರಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಮದುವೆಗಾಗಿ ಜಮೀನು ಮಾರಿದ ಹಣವನ್ನು ಪ್ರೀ ವೆಡ್ಡಿಂಗ್ ಶೂಟ್, ಜವುಳಿ, ಛತ್ರಗಳ ಬಾಡಿಗೆ, ಅಬ್ಬರದ ಆರ್ಕೆಸ್ಟ್ರಾ ಹಾಗೂ ಗಣ್ಯರಿಗೆ ಉಡುಗೊರೆ ಕೊಡಲು ವ್ಯಯ ಮಾಡಿ ಇರುವ ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುತ್ತಾರೆ. ಇದು ಮುಂದೆ ಆಗುವುದು ಬೇಡ ಎಂದು ಹೇಳಿದರು.ಅದ್ಧೂರಿ ಹಾಗೂ ಆಡಂಬರದ ಮದುವೆ ಬದಲು ಸರಳವಾಗಿ ಬಂಧು, ಮಿತ್ರರು, ಗುರು ಜಂಗಮರ ಸಮಕ್ಷಮದಲ್ಲಿ ಬಸವಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಧರ್ಮ ಧ್ವಜಾರೋಹಣ ಮಾಡಿ, ಅಷ್ಟಾವರಣದ ಆಚರಣೆಯಲ್ಲಿ ಸತಿಪತಿಗಳಾಗಿ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಶೈಲಕುಮಾರ್ ವಚನ ಕಲ್ಯಾಣದಲ್ಲಿ ವಚನ ನಿರೂಪಣೆ ಮಾಡಿದದರು. ಆರ್.ಪ್ರಸಾದ್ ಸ್ವಾಗತಿಸಿದರು. ಚಾಮರಾಜನಗರ ತಾಲೂಕಿನ ಕಟ್ನವಾಡಿ ಭಜನಾ ಸಂಘದ ಸದಸ್ಯರು ವಚನ ಗಾಯನ ನಡೆಸಿದರು.