ಗದಗ: ಶಿವಶರಣರು ನುಡಿದಂತೆ ನಡೆದು ಆದರ್ಶ ಬದುಕು ಸಾಗಿಸಿದವರು. ಅವರ ಆತ್ಮಾನುಭವ ವಾಣಿಗಳೇ ವಚನಗಳು, ಶರಣರು ತಮ್ಮ ಬದುಕಿನಲ್ಲಿ ಕಂಡುಕೊಂಡ ಸಾಮಾಜಿಕ, ನೈತಿಕ, ಆಧ್ಯಾತ್ಮಿಕ, ಜಾತ್ಯಾತೀತ ಮೌಲ್ಯಗಳ ಆಚರಣೆಗಳನ್ನು ತಮ್ಮ ವಚನಗಳ ಮೂಲಕ ಸಮಾಜಕ್ಕೆ ಪರಿಚಯಿಸಿದವರು. ಶರಣರು ತಿಳಿಸಿರುವ ವಚನಗಳನ್ನು ಮಕ್ಕಳಿಗೆ ತಿಳಿಸಿ ಹೇಳಿದರೆ ಅವರು ಮಾನವೀಯ ಮೌಲ್ಯಗಳ ಉತ್ತಮ ಗುಣಾಂಶ ರೂಢಿಸಿಕೊಂಡು ಸುಸಂಸ್ಕೃತರಾಗಿ ಬೆಳೆಯವರು ಎಂದು ಗದಗ ತಾಲೂಕು ಕದಳಿ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ರತ್ನಕ್ಕ ಪಾಟೀಲ ಹೇಳಿದರು.
ಇಂದು ಮಕ್ಕಳು ಮೊಬೈಲ್ನಲ್ಲಿ ಗೇಮ್, ಡ್ಯಾನ್ಸ್ ಇನ್ನಿತರೆ ವಿಷಯ ನೋಡುವ ಬದಲಾಗಿ ಶರಣರ ವಚನಗಳನ್ನು ಓದಿ ಕೇಳಿ,ಹಾಡಿ ಮನನ ಮಾಡಿಕೊಂಡು ಶರಣ ಜೀವನ ರೂಪಿಸಿಕೊಳ್ಳಬೇಕು. ಮಕ್ಕಳು ಸುಸಂಸ್ಕೃತರಾಗಿ ಬೆಳೆಯಲು ವಚನಗಳು ಸಹಕಾರಿಯಾಗಿವೆ ಎಂದರು.
ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಲೋಚನಾ ಐಹೊಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಬೇಕು. ಭೋಜನ ಮಾಡುವ ಮುನ್ನ ವಚನ ಹೇಳುವುದನ್ನು ರೂಢಿಸಿಕೊಳ್ಳಬೇಕೆಂದು ತಿಳಿಸಿದರು.ಈ ವೇಳೆ ಹಿರಿಯ ಶಿಕ್ಷಕಿ ಎಸ್.ಆರ್. ಹನುಮಗೌಡ್ರ ಮಾತನಾಡಿದರು. ವಚನ ಕಂಠಪಾಠ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಿಗಳೆಲ್ಲರಿಗೂ ವಚನ ಪುಸ್ತಕ ಮತ್ತು ವಿಜೇತರಾದವರಿಗೆ ಸೂಕ್ತ ಬಹುಮಾನ ವಿತರಿಸಲಾಯಿತು. ಎಸ್.ಎ. ಮುಗದ ಹಾಗೂ ಗೌರಕ್ಕ ಬಡಿಗಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆರತಿ ನಾಯ್ಕರ, ಅನುಪಮಾ ಮುಗಳಿ ಪ್ರಾರ್ಥಿಸಿದರು. ಕದಳಿ ಮಹಿಳಾ ವೇದಿಕೆ ಉಪಾಧ್ಯಕ್ಷೆ ರೇಣುಕಾ ಕರೆಗೌಡ್ರ ಸ್ವಾಗತಿಸಿದರು. ಮಂಜುಳಾ ಅಕ್ಕಿ ನಿರೂಪಿಸಿದರು. ಮಂಗಳಾ ಕಾಮಣ್ಣವರ ವಂದಿಸಿದರು.