ಹಾವೇರಿ: ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಫೆ. ೮ ಮತ್ತು ೯ರಂದು ಮಹರ್ಷಿ ವಾಲ್ಮೀಕಿ ಜಾಗೃತಿ ಜಾತ್ರೆ ಆಯೋಜಿಸಲಾಗಿದೆ. ನಕಲಿ ಜಾತಿ ಪ್ರಮಾಣ ಪತ್ರ ಸೇರಿದಂತೆ ಸಮಾಜವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸುವ ಮೂಲಕ ಈ ಜಾತ್ರೆಯಲ್ಲಿ ಸಮಾಜ ಬಾಂಧವರಲ್ಲಿ ಅರಿವು ಮೂಡಿಸಲಾಗುವುದು ಎಂದು ಮಹರ್ಷಿ ವಾಲ್ಮೀಕಿ ಗುರುಪೀಠದ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಮಹರ್ಷಿ ವಾಲ್ಮೀಕಿ ಜಾತ್ರೆ-೨೦೨೪ರ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಶ್ರೀಮಠದ ೨೬ನೇ ವಾರ್ಷಿಕೋತ್ಸವ, ಲಿಂ. ಜಗದ್ಗುರು ಪುಣ್ಯಾನಂದಪುರಿ ಶ್ರೀಗಳ ೧೭ನೇ ಪುಣ್ಯಾರಾಧನೆ ಹಾಗೂ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರ ಪಟ್ಟಾಧಿಕಾರ ಮಹೋತ್ಸವ ಸಮಾರಂಭದ ನಡೆಯಲಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ವಾಲ್ಮೀಕಿ ನಾಯಕ ಮಹಾಸಭಾದ ಜಿಲ್ಲಾ ಅಧ್ಯಕ್ಷ ರಮೇಶ ಆನವಟ್ಟಿ ಮಾತನಾಡಿ, ಹಾವೇರಿಯಲ್ಲಿ ನಿರ್ಮಾಣ ಹಂತದಲ್ಲಿರುವ ವಾಲ್ಮೀಕಿ ಭವನದ ಕಾಮಗಾರಿ ಪೂರ್ಣಗೊಳಿಸಲು ಈಗಾಗಲೇ ಜನಪ್ರತಿನಿಧಿಗಳ ಹಾಗೂ ಜಿಲ್ಲಾಧಿಕಾರಿ ಗಮನ ತರಲಾಗಿದೆ. ಭವನದ ಕಾಮಗಾರಿ ಪೂರ್ಣಗೊಳಿಸಿ ಸಮಾಜಕ್ಕೆ ಶೀಘ್ರದಲ್ಲಿ ಅರ್ಪಿಸುವ ಭರವಸೆ ನೀಡಿದ್ದಾರೆ. ಮಹರ್ಷಿ ವಾಲ್ಮೀಕಿ ಸರ್ಕಲ್ನಲ್ಲಿ ವಾಲ್ಮೀಕಿ ಪುತ್ಥಳಿಯನ್ನು ಶೀಘ್ರದಲ್ಲಿಯೇ ಸ್ಥಾಪಿಸಲಾಗುವುದು. ರಾಜನಹಳ್ಳಿಯಲ್ಲಿ ನಡೆಯುವ ಮಹರ್ಷಿ ವಾಲ್ಮೀಕಿ ಜಾಗೃತಿ ಜಾತ್ರೆ-೨೦೨೪ಗೆ ಎಲ್ಲ ರೀತಿಯ ಸಹಾಯ, ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಸಮಾಜದ ಮುಖಂಡರಾದ ಸೋಮನಗೌಡ ಪಾಟೀಲ, ಅಶೋಕ ತಳವಾರ, ಅಶೋಕ ಹರನಗಿರಿ, ಲವೇಶ ಸೋಮನಕಟ್ಟಿ, ಉಮೇಶ ಮಾಗಳ, ಮಾಲತೇಶ ಅಂಗೂರ ಇತರರು ಮಾತನಾಡಿದರು. ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಖರ ಕಳ್ಳಿಮನಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ನಾಗರಾಜ ಬಡಮ್ಮನವರ, ತಾಲೂಕು ಯುವ ಘಟಕದ ಅಧ್ಯಕ್ಷ ಮಾಲತೇಶ ರಿತ್ತಿ, ಪ್ರಧಾನ ಕಾರ್ಯದರ್ಶಿ ಸಂಗಪ್ಪ ಮಲ್ಲಿಗಾರ, ಬಸವರಾಜ ಭೀಮಕ್ಕನವರ ಇತರರು ಇದ್ದರು.ಪದಾಧಿಕಾರಿಗಳ ಆಯ್ಕೆ: ಮಹರ್ಷಿ ವಾಲ್ಮೀಕಿ ಜಾಗೃತಿ ಜಾತ್ರೆ-೨೦೨೪ರ ಹಾವೇರಿ ತಾಲೂಕು ಮುಖ್ಯಸ್ಥರನ್ನಾಗಿ ರಮೇಶ ಆನವಟ್ಟಿ, ಉಮೇಶ ಮಾಗಳ, ನಾಗರಾಜ ಬಡಮ್ಮನವರ, ಮಲ್ಲಿಕಾರ್ಜುನ ಬೂದಗಟ್ಟಿ, ಸಂಗಪ್ಪ ಮಲ್ಲಿಗಾರ, ಉಮೇಶ ನಾಗಮ್ಮನವರ ಅವರನ್ನು ಪ್ರಸನ್ನಾನಂದ ಸ್ವಾಮೀಜಿ ಆಯ್ಕೆ ಮಾಡಿ ಘೋಷಿಸಿದರು.