ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ವಾಲ್ಮೀಕಿ ಮಹರ್ಷಿಗಳು ಯಾವುದೇ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ಸಮಸ್ತ ಭಾರತೀಯ ಸಂಸ್ಕೃತಿ ಪ್ರತಿನಿಧಿಯಾಗಿದ್ದಾರೆ ಎಂದು ಶಾಸಕ ಎಚ್.ಟಿ.ಮಂಜು ಬಣ್ಣಿಸಿದರು.ಪಟ್ಟಣದ ಕೆ.ಪಿ.ಎಸ್ ಶಾಲೆಯ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯ್ತಿ, ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಶ್ರೀಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿ, ವಾಲ್ಮೀಕಿ ರಚಿಸಿದ ರಾಮಾಯಣ ನಮ್ಮ ಬದುಕಿನ ಆದರ್ಶವಾಗಬೇಕು ಎಂದರು.
ಪಟ್ಟಣದ ಟಿ.ಬಿ.ಬಡಾವಣೆಯ ವಾಲ್ಮೀಕಿ ಭವನ ನಿರ್ಮಾಣ ಕಾಮಗಾರಿ, ತಾಲೂಕಿನ ಅಕ್ಕಿಹೆಬ್ಬಾಳು ಮತ್ತು ಕುಪ್ಪಹಳ್ಳಿ ಗ್ರಾಮಗಳ ವಾಲ್ಮೀಕಿ ಭವನ ನಿರ್ಮಾಣ ಕಾಮಗಾರಿ ಅನುದಾನದ ಕೊರತೆಯಿಂದ ಅಪೂರ್ಣವಾಗಿವೆ. ಇವುಗಳನ್ನು ಪೂರ್ಣಗೊಳಿಸಲು ಅಗತ್ಯ ಅನುದಾನ ತರಲು ಶ್ರಮಿಸುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಿ ದುಡಿಯೋಣ. ವಾಲ್ಮೀಕಿ ಮಹರ್ಷಿಗಳ ರಾಮರಾಜ್ಯ ನಿರ್ಮಾಣದ ದಾರಿಯಲ್ಲಿ ಎಲ್ಲರೂ ಸಾಗಬೇಕು ಎಂದರು.ಮಂಡ್ಯ ವಿವಿ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಜಿ.ಎಸ್.ಪ್ರೇಮಕುಮಾರ್ ಮಾತನಾಡಿ, ವಾಲ್ಮೀಕಿ ಸಮುದಾಯ ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಬೇಕು. ರತ್ನಾಕರ ವಾಲ್ಮೀಕಿಯಾಗಿ ತಾನು ಪಡೆದ ಜ್ಞಾನವನ್ನು ರಾಮಾಯಣದ ಮೂಲಕ ಜಗತ್ತಿಗೆ ನೀಡಿದ್ದಾನೆ ಎಂದರು.
ರಾಮಾಯಣ ಮಾನವೀಯ ಮೌಲ್ಯಗಳ ಪ್ರತಿನಿಧಿ. ಇಂದು ಪ್ರಜೆಗಳ ನಿಯಂತ್ರಣದಲ್ಲಿರಬೇಕಾದ ನಮ್ಮ ಸರ್ಕಾರಗಳು ಬಂಡವಾಳ ಶಾಹಿಗಳ ಹಿಡಿತಕ್ಕೆ ಒಳಗಾಗಿವೆ. ಶ್ರೀರಾಮನಂತೆ ಪ್ರಜಾಶಕ್ತಿಗೆ ಅಂಜಿ ನಡೆಯುವ ರಾಜಕೀಯ ಸಂಸ್ಕೃತಿ ಪುನರುತ್ತಾನಕ್ಕೆ ಜನತೆ ಮುಂದಾದಾಗ ಮಾತ್ರ ವಾಲ್ಮೀಕಿ ಕನಸಿನ ರಾಮರಾಜ್ಯ ನಿರ್ಮಾಣ ಸಾಧ್ಯ ಎಂದರು.ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ, ಪುರಸಭೆ ಮಾಜಿ ಅಧ್ಯಕ್ಷರಾದ ಮಹದೇವಿ ನಂಜುಂಡ, ನಟರಾಜ್, ದಿಶಾ ಸಮಿತಿಯ ಸದಸ್ಯ ನರಸನಾಯಕ, ಎ.ಬಿ.ಹಳ್ಳಿ ಜಗದೀಶ್, ಜೆಡಿಎಸ್ ಮುಖಂಡ ಅಕ್ಕಿಹೆಬ್ಬಳು ರಘು ವಾಲ್ಮೀಕಿ ಮಹರ್ಷಿಗಳನ್ನು ಕುರಿತು ಮಾತನಾಡಿದರು.
ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷೆ ಪಂಕಜ ಪ್ರಕಾಶ್, ಜಿಪಂ ಮಾಜಿ ಅಧ್ಯಕ್ಷೆ ಗಾಯಿತ್ರಿ ರೇವಣ್ಣ, ಮಾಜಿ ಸದಸ್ಯ ರಾಮದಾಸ್, ತಾಪಂ ಮಾಜಿ ಅಧ್ಯಕ್ಷ ಸಾರಂಗಿ ಜಯರಂಗ, ಪುರಸಭಾ ಸದಸ್ಯ ಡಿ.ಪ್ರೇಮಕುಮಾರ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪೂರ್ಣಚಂದ್ರ, ಟಿಎಪಿಸಿಎಂಎಸ್ ನಿರ್ದೇಶಕ ಬೊಮ್ಮೇನಹಳ್ಳಿ ಮಂಜುನಾಥ್, ತಾಪಂ ಇಒ ಕೆ.ಸುಷ್ಮಾ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ದಿವಾಕರ್, ಪೊಲೀಸ್ ನಿರೀಕ್ಷಕಿ ಸುಮಾರಾಣಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಪ್ರವಾಸಿಮಂದಿರ ಆವರಣದಿಂದ ಮಹರ್ಷಿ ವಾಲ್ಮೀಕಿ ಭಾವಚಿತ್ರವನ್ನು ಅಲಂಕೃತ ವಾಹನದ ಮೂಲಕ ಮುಖ್ಯ ವೇದಿಕೆಗೆ ಮೆರವಣಿಗೆಯಲ್ಲಿ ತರಲಾಯಿತು.