ಸಾಧನೆಗೆ ಮೌಲ್ಯ ಬರುವುದು ವ್ಯಕ್ತತ್ವದಿಂದ: ಡೀಸಿ

KannadaprabhaNewsNetwork | Published : Jun 27, 2024 1:06 AM

ಸಾರಾಂಶ

ಛಲದಿಂದ ಓದಿದರೆ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಪ್ರತಿ ಕ್ಷಣವು ಅವಕಾಶಗಳನ್ನು ಹುಡುಕುತ್ತಿರಬೇಕು ಅದು ಸಿಗುವವರೆಗೂ ನಮ್ಮ ಪ್ರಯತ್ನ ಬಿಡಬಾರದು. ದೇವರಾಜ ಅರಸು ಕಂಡ ಕನಸು ಹಾಸ್ಟೆಲ್‌ಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಓದಲು ಕಾರಣವಾಯಿತು

ಕನ್ನಡಪ್ರಭ ವಾರ್ತೆ ಕೋಲಾರವಿದ್ಯಾರ್ಥಿಗಳು ಮಾಡುವ ಸಾಧನೆಗೆ ಮೌಲ್ಯ ಬರುವುದು ಅವರ ವ್ಯಕ್ತಿತ್ವದಿಂದ, ಸೋಲಿಗೆ ನೆಪಗಳನ್ನು ಹುಡಕದೆ ಕಾರಣಗಳನ್ನು ಹುಡುಕುವುದರಿಂದ ಯಶಸ್ಸು ಸಿಗುತ್ತದೆ. ಸೌಲಭ್ಯಗಳ ಕೊರತೆ ಯಾವಾಗ ಇರುತ್ತದೋ ಆಗ ಕೊರತೆ ನಿವಾರಣೆ ಮಾಡಲು ಛಲ ಬರುತ್ತದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಹೇಳಿದರು. ಬುಧವಾರ ಜಿಲ್ಲಾಧಿಕಾರಿ ಕಚೇರಿಯ ಅಡಿಟೋರಿಯಂನಲ್ಲಿ ಜಿಲ್ಲಾಡಳಿತ, ಜಿಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ವಿಶೇಷ ಪೂರ್ವ ಸಿದ್ದತಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಛಲದಿಂದ ಓದಿದರೆ ಸಾಧನೆ ಸಾಧ್ಯ

ನಿಮ್ಮ ವ್ಯಕ್ತಿತ್ವ, ಶ್ರಮ ಧನಾತ್ಮಕ ಕಡೆ ಹೋದರೆ ನೀವು ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ. ಮನಸ್ಸು ಮಾಡಿ ಛಲದಿಂದ ಓದಿದರೆ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಪ್ರತಿ ಕ್ಷಣವು ಅವಕಾಶಗಳನ್ನು ಹುಡುಕುತ್ತಿರಬೇಕು ಅದು ಸಿಗುವವರೆಗೂ ನಮ್ಮ ಪ್ರಯತ್ನ ಬಿಡಬಾರದು. ದೇವರಾಜ ಅರಸು ಕಂಡ ಕನಸು ಹಾಸ್ಟೆಲ್‌ಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಓದಲು ಕಾರಣವಾಯಿತು ಎಂದರು. ಜಿಲ್ಲಾಧಿಕಾರಿ ಅಕ್ರಂ ಪಾಷ ಮಾತನಾಡಿ, ವಿದ್ಯಾಭ್ಯಾಸ ಮಾಡುವಾಗ ನಿಮ್ಮಲ್ಲಿರುವ ಕೀಳರಿಮೆ ಮೊದಲು ತೆಗೆದು ಹಾಕಬೇಕು. ಉತ್ತಮ ಶಿಕ್ಷಣ ಪಡೆಯುವುದರಿಂದ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬೆಳೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಾಹಿತಿ ಪಡೆಯಲು ತುಂಬಾ ಸುಲಭವಾಗಿದೆ. ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಕೋಚಿಂಗ್ ಸೆಂಟರ್ ಮೊಬೈಲ್ ಮೂಲಕ ಯಾವ ಪಠ್ಯಪುಸ್ತಕಗಳನ್ನಾದರೂ ಓದಬಹುದು. ಯಾವ ಸಮಯದಲ್ಲಿ ಎಷ್ಟು ಬರೆಯಬೇಕು ಎಂಬ ಮಾಹಿತಿ ಪಡೆಯಬಹುದು. ಹಿಂದಿನ ದಿನಗಳಲ್ಲಿ ಇದು ಸುಲಭ ಮಾರ್ಗವಾಗಿರಲಿಲ್ಲ ಎಂದರು. ಸಮಯ ವ್ಯರ್ಥ ಮಾಡಬೇಡಿ

ವಿದ್ಯಾರ್ಥಿಗಳಿಗೆ ಒಂದು ಗುರಿ ಇರಬೇಕು. ಅದನ್ನು ಸಾಧಿಸುವ ಕನಸನ್ನು ಕಾಣಬೇಕು. ಒಳ್ಳೆಯ ಮಾರ್ಗವನ್ನು ಅನುಸರಿಸುವುದರಿಂದ ಅದನ್ನು ಸಾಧಿಸಬಹುದು. ನಿಮ್ಮ ಅಮೂಲ್ಯವಾದ ಸಮಯ ಮೊಬೈಲ್‌ಗಳಿಂದ ವ್ಯರ್ಥಮಾಡಬಾರದು. ಮೊಬೈಲ್‌ನ್ನು ಹೇಗೆ, ಯಾವಾಗ ಬಳಸಬೇಕು ಎಂದು ತಿಳಿಯಬೇಕು ಎಂದು ಹೇಳಿದರು.ಜಿಲ್ಲಾಡಳಿತದಿಂದ ಐವತ್ತು ವಿದ್ಯಾರ್ಥಿಗಳಿಗೆ ಕೋಚಿಂಗ್‌ಗಾಗಿ ಪ್ರೋತ್ಸಾಹ ಹಣ ನೀಡಲಾಗಿದೆ. ೧೦೦ ಅಭ್ಯರ್ಥಿಗಳಿಗೆ ಪ್ರತ್ಯೇಕ ಸ್ಟಡಿ ಕ್ಯೂಬಿಕಲ್ಸ್, ೨೦೦೦ಕ್ಕೂ ಹೆಚ್ಚ್ಟು ಅತ್ಯುಪಯುಕ್ತ ಪುಸ್ತಕಗಳುಳ್ಳ ಗ್ರಂಥಾಲಯ, ಕಂಪ್ಯೂಟರ್ ಪ್ರಿಂಟರ್ ಹಾಗೂ ಇಂಟರ್‌ನೆಟ್ ವ್ಯವಸ್ಥೆ, ೨೪/೭ ಯು.ಪಿ.ಎಸ್, ಶುದ್ಧ ಕುಡಿಯುವ ನೀರು, ಪ್ರತ್ಯೇಕ ಶೌಚಾಲಯಗಳು, ಫ್ಯಾನ್ ಹಾಗೂ ಇನ್ನಿತರೆ ಎಲ್ಲಾ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಹಾಗೂ ಪ್ರತಿ ದಿನ ಜಿಲ್ಲೆಯ ಹಿರಿಯ ಅಧಿಕಾರಿಗಳು ಮತ್ತು ವಿವಿಧ ವಿಷಯಗಳ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಚರ್ಚೆ ಮಾಡಲಾಗುತ್ತದೆ ಎಂದು ಹೇಳಿದರು. ಮಾದಕ ವಸ್ತು ಬಳಬೇಡಿ

ಕೆ.ಜಿ.ಎಫ್ ಎಸ್ಪಿ ಶಾಂತರಾಜು ಮಾತನಾಡಿ, ತಂಬಾಕು, ಗುಟ್ಕಾ ಮತ್ತು ಗಾಂಜಾ ಮುಂತಾದ ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ದೂರವಿರಬೇಕು. ಅವುಗಳ ವ್ಯಸನಕ್ಕೆ ಒಳಗಾಗದೇ ಉತ್ತಮ ಶಿಕ್ಷಣವನ್ನು ಪಡೆದು ಜೀವನವನ್ನು ರೂಪಿಸಿಕೊಳ್ಳಬೇಕು, ಶಾಲಾ-ಕಾಲೇಜು ಆವರಣದಲ್ಲಿ ಮಾರಾಟ ಮಾಡಿದರೆ ಅಂತಹವರ ವಿರುದ್ಧ ೧೯೩೦ ಸಂಖ್ಯೆ ಕರೆ ಮಾಡಿ ದೂರು ನೀಡಬಹುದು ಎಂದು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸೋಮಶೇಖರ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಮುರಳಿ, ಇಂಡಿಯಾ ಫಾರ್ ಐಎಎಸ್ ಸಂಸ್ಥಾಪಕ ಶ್ರೀನಿವಾಸ್, ಸಂಪನ್ಮೂಲ ವ್ಯಕ್ತಿಗಳಾದ ಅಭಿಷೇಕ್, ಚೇತನ್.ಎನ್.ಜಿ ಇದ್ದರು.

Share this article