ವಿದ್ಯಾರ್ಥಿಗಳೇ ವ್ಯಾಸಂಗದ ಕಡೆ ಹೆಚ್ಚು ಗಮನ ಹರಿಸಿ: ಸಿಪಿಐ ಶ್ರೀಧರ್ ಕರೆ

KannadaprabhaNewsNetwork | Published : Jun 27, 2024 1:06 AM

ಸಾರಾಂಶ

ಮಕ್ಕಳು ಬೆಳವಣಿಗೆ ಹಂತದಲ್ಲಿ ಹೊಸ ಆಯಾಮ, ಹಾರ್ಮೋನುಗಳ ಬದಲಾವಣೆಯಿಂದಾಗಿ ಪ್ರಪಂಚದ ಬಗ್ಗೆ ಆಸಕ್ತಿ ಮತ್ತು ಕುತೂಹಲ ಹೆಚ್ಚಾಗಿ ಸಾಕಷ್ಟು ಮಾದಕ ವ್ಯಸನಕ್ಕೆ ತುತ್ತಾಗುತ್ತಾರೆ. ಹದಿಹರೆಯದವರು ಮತ್ತು ಯುವಜನರಲ್ಲಿ ಸಣ್ಣ, ಸಣ್ಣ ಅಕರ್ಷಣೆ ಮಾದಕ ಸೇವನೆ ಪ್ರಯತ್ನ ಮಾಡಿಸುತ್ತದೆ. ಪ್ರಯತ್ನ ಚಟವಾಗಿ ಬದಲಾಗಲಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ವ್ಯಾಸಂಗದ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದು ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ಕರೆ ನೀಡಿದರು.

ಜೆಪಿಎಂ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಹಲಗೂರು ಪೊಲೀಸ್ ಇಲಾಖೆಯಿಂದ ನಡೆದ ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳ ಸಾಗಣೆ ವಿರೋಧಿ ದಿನಾಚಾರಣೆ ಉದ್ಘಾಟಿಸಿ ಮಾತನಾಡಿ, ಮಾದಕ ವಸ್ತುಗಳ ವ್ಯಸನಕ್ಕೆ 16 ರಿಂದ 25 ವಯೋಮಾನದ ಯುವಕರು ಹೆಚ್ಚಾಗಿ ತುತ್ತಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಮಕ್ಕಳು ಬೆಳವಣಿಗೆ ಹಂತದಲ್ಲಿ ಹೊಸ ಆಯಾಮ, ಹಾರ್ಮೋನುಗಳ ಬದಲಾವಣೆಯಿಂದಾಗಿ ಪ್ರಪಂಚದ ಬಗ್ಗೆ ಆಸಕ್ತಿ ಮತ್ತು ಕುತೂಹಲ ಹೆಚ್ಚಾಗಿ ಸಾಕಷ್ಟು ಮಾದಕ ವ್ಯಸನಕ್ಕೆ ತುತ್ತಾಗುತ್ತಾರೆ. ಹದಿಹರೆಯದವರು ಮತ್ತು ಯುವಜನರಲ್ಲಿ ಸಣ್ಣ, ಸಣ್ಣ ಅಕರ್ಷಣೆ ಮಾದಕ ಸೇವನೆ ಪ್ರಯತ್ನ ಮಾಡಿಸುತ್ತದೆ. ಪ್ರಯತ್ನ ಚಟವಾಗಿ ಬದಲಾಗಲಿದೆ ಎಂದು ಎಚ್ಚರಿಸಿದರು.

ಒಂದು ಬಾರಿ ಮಾದಕ ವಸ್ತುಗಳ ದುಶ್ಚಟಕ್ಕೆ ಸಿಲುಕಿದರೆ ಮಾದಕ ಜಗತ್ತು ತನ್ನ ಭ್ರಮಲೋಕಕ್ಕೆ ಸೆಳೆದುಕೊಳ್ಳತ್ತದೆ. ಸಣ್ಣದಾಗಿ ಆರಂಭವಾದ ಚಟ ಹಂತ ಹಂತವಾಗಿ ದೊಡ್ಡದಾಗುತ್ತದೆ. ಕೆಲಸವಿಲ್ಲದ ಯುವಕರು ಹಣ ಹೊಂದಿಸಲು ಸಾಧ್ಯವಾಗದೇ, ದುಶ್ಚಚಟವನ್ನು ಬಿಡಲು ಸಾಧ್ಯವಾಗದೇ, ಕಳ್ಳತನ ಮತ್ತು ದರೋಡೆಗಳಂತಹ ಸಾಮಾಜಘಾತುಕ ಕೃತ್ಯಗಳಿಗೆ ಇಳಿಯುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಯುವಕರುಮೋಸದ ಜಾಲಕ್ಕೆ ಸಿಲುಕುವ ಮುನ್ನ ಜಾಗೃತರಾಗಿರಬೇಕು. ಸುತ್ತಮುತ್ತಲಿನ ಸಮಾಜಕ್ಕೂ ಈ ದುಷ್ಕೃತ್ಯದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸ್ವಾಮಿ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ದೇವೇಗೌಡ, ಪ್ರಾಂಶುಪಾಲೆ ಮೀನಾಕ್ಷಿ, ಉಪನ್ಯಾಸಕರಾದ ಸೋಹೇಲ್ ಅಹಮದ್, ಜಯಂತಿ, ಲಾವಣ್ಯ, ಶಿವಮಣಿ, ರಾಜು, ಎಎಸ್ಐ ಸಿದ್ದರಾಜು, ರಫೀಕ್ ನಢಾಪ್ ಸೇರಿದಂತೆ ಹಲವರು ಭಾಗವಹಿಸಿದ್ದರು.ಮಾದಕ ವಸ್ತುಗಳಿಗೆ ಮಾರು ಹೋಗಬಾರದು: ಎಸ್.ಡಿ.ಬೆನ್ನೂರ

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣವಿದ್ಯಾರ್ಥಿಗಳು ಮಾದಕ ದ್ರವ್ಯ ವಸ್ತುಗಳಿಗೆ ಮಾರು ಹೋಗದೆ ವಿದ್ಯಾಭ್ಯಾಸದತ್ತ ಹೆಚ್ಚು ಗಮನ ಹರಿಸಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ ಕರೆ ನೀಡಿದರು.

ತಾಲೂಕಿನ ಎಂ.ಶೆಟ್ಟಿಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ಆವರಣದಲ್ಲಿ ಇಕೋ ಕ್ಲಬ್ ಮತ್ತು ವಿಜ್ಞಾನ ಸಂಘ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಆಯುಷ್ಮಾನ್ ಆರೋಗ್ಯ ಮಂದಿರ ಆಶ್ರಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಸಪ್ತಾಹದಲ್ಲಿ ಮಾತನಾಡಿದರು.ಗಾಂಜಾ, ಕೋಕೆನ್, ಬ್ರೌನ್ ಶುಗರ್, ಅಫೀಮು, ತಂಬಾಕುಗಳಂತಹ ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ದೂರವಿರಬೇಕು. ಇವುಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ ಜೊತೆಗೆ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂದು ಎಚ್ಚರಿಸಿದರು.

ದೇಶದ ಯುವ ಜನತೆ ಮಾದಕ ವ್ಯಸನ ಎಂಬ ಜಾಲದಲ್ಲಿ ಸಿಕ್ಕಿ ನರಳುತ್ತಿದ್ದಾರೆ. ಚಟಗಳು ಮೊದಲು ಸಂತೋಷ್ ನೀಡಿದರೂ ನಂತರ ಮನಸ್ಸಿನ ನೆಮ್ಮದಿ ಹಾಗೂ ಆರೋಗ್ಯವನ್ನು ಹಾಳು ಮಾಡುತ್ತದೆ. ಇದರಿಂದ ನಿಮ್ಮ ಸುಂದರ ಜೀವನ ಹಾಳು ಮಾಡಿಕೊಳ್ಳುವದು ಬೇಡ ಎಂದರು.ಈ ವೇಳೆ ಮುಖ್ಯ ಶಿಕ್ಷಕ ಎನ್.ಗೋಪಾಲಕೃಷ್ಣ, ಆರೋಗ್ಯ ನಿರೀಕ್ಷಣಾಧಿಕಾರಿ ಎಸ್ ಪಿ ಪಣಿಂದ್ರ, ಸಹಶಿಕ್ಷಕ ಆನಂದ ಎಚ್. ಎನ್. ದೊಡ್ಡರಸಯ್ಯ, ಸುವರ್ಣ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಪ್ರೇಮಾ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.

Share this article