ಗಲ್ಲಿ ಗಲ್ಲಿಗಳಲ್ಲಿ ವಿವಿಧ ರೂಪದ ಗಣಪನ ಆರಾಧನೆ

KannadaprabhaNewsNetwork | Published : Sep 9, 2024 1:48 AM

ಈ ಬಾರಿಯ ವಿಶೇಷ ಎಂದರೆ ಪಟ್ಟಣದ ರಂಗಾರಸ್ತೆ ವೃತ್ತದಲ್ಲಿ ಶ್ರೀ ರಾಮಜನ್ಮಭೂಮಿ ಗಣೇಶ ಪ್ರತಿಷ್ಠಾಪಿಸಿದ್ದು ಅಯೋಧ್ಯೆ ಶ್ರೀರಾಮ ಮಂದಿರದ ಮುಂಭಾಗದಲ್ಲಿ ವೀರಾಜಮಾನನಾಗಿ ಕುಳಿತಿದ್ದರೆ ಮಂದಿರದ ಮೇಲೆ ಬಿಲ್ಲುಧಾರಿಯಾಗಿ ಶ್ರೀರಾಮಚಂದ್ರನ ಮೂರ್ತಿ ಇದೆ.

ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರ

ಪಟ್ಟಣ ಸೇರಿದಂತೆ ಹಳ್ಳಿಗಳ ಗಲ್ಲಿ ಗಲ್ಲಿಗಳಲ್ಲಿ ಯುವಕರು ತಮ್ಮ ಬಡಾವಣೆಯ ರಸ್ತೆಗಳನ್ನು ಶುಚಿಗೊಳಿಸಿ ಚಪ್ಪರ ಹಾಕಿ ವೇದಿಕೆ ನಿರ್ಮಿಸಿ ಹೂವುಗಳಿಂದ ಅಲಂಕಾರಿಸಿ,ವಿದ್ಯುತ್ ದೀಪಾಲಂಕಾರ ಮಾಡಿ ವಿವಿಧ ನಮೂನೆಯ ಗಣಪತಿ ಮೂರ್ತಿಗಳನ್ನು ಶನಿವಾರ ಪ್ರತಿಷ್ಠಾಪಿಸಿಸಿದರು.

ಈ ಬಾರಿಯ ವಿಶೇಷ ಎಂದರೆ ಪಟ್ಟಣದ ರಂಗಾರಸ್ತೆ ವೃತ್ತದಲ್ಲಿ ಶ್ರೀ ರಾಮಜನ್ಮಭೂಮಿ ಗಣೇಶ ಪ್ರತಿಷ್ಠಾಪಿಸಿದ್ದು ಅಯೋಧ್ಯೆ ಶ್ರೀರಾಮ ಮಂದಿರದ ಮುಂಭಾಗದಲ್ಲಿ ವೀರಾಜಮಾನನಾಗಿ ಕುಳಿತಿದ್ದರೆ ಮಂದಿರದ ಮೇಲೆ ಬಿಲ್ಲುಧಾರಿಯಾಗಿ ಶ್ರೀರಾಮಚಂದ್ರನ ಮೂರ್ತಿ ಇದೆ.

ಈಶ್ವರನ ಅ‍ವತಾರದ ಗಣಪ

ಪ್ರತಿವರ್ಷ ವೈಶಿಷ್ಟಮಯವಾಗಿ ಗಣೇಶಮೂರ್ತಿಗಳನ್ನು ಸ್ಥಾಪಿಸಿ ಗಣೇಶೋತ್ಸವ ಆಚರಿಸುವ ರಾಮಕೃಷ್ಣರಸ್ತೆಯ ಶ್ರೀ ವಿನಾಯಕ ಬಳಗದವರು ಈ ಬಾರಿ ಈಶ್ವರನ ಅವತಾರದ ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ ನಂದಿಯ ಮೇಲೆ ಕುಳಿತು ರುದ್ರದೇವನಂತೆ ವಿನಾಯಕ ಕಂಗೊಳಿಸುತ್ತಾನೆ. ಕೆ.ಇ.ಬಿ ಆವರಣದಲ್ಲಿರುವ ಗಣಪತಿ ದೇವಾಲಯದಲ್ಲಿ ನಂದಿ ಮೇಲೆ ಆಸನವಾಗಿರುವ ಶ್ವೇತ ವರ್ಣದ ಗಣೇಶಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಬಸ್ಟಾಂಡ್ ಬಳಿ ಮಹಾತ್ಮಾಗಾಂಧಿ ಆಟೋಸ್ಟಾಂಡ್ ನಲ್ಲಿ ಹಸಿರು ಬಣ್ಣದ ಗಣಪತಿಯನ್ನು ಸ್ಥಾಪಿಸಿದ್ದರೆ ಮುಳಬಾಗಿಲು ವೃತ್ತದ ಹನುಮಾನ್ ಆಟೋಸ್ಟಾಂಡ್ ಚಪ್ಪರದಲ್ಲಿ ನಂದಿಮೇಲೆ ಕುಳಿತ ಹಸಿರು ವರ್ಣದ ಗಣಪನಿಗೆ ಹಳದಿ ಬಣ್ಣದ ಪಂಚೆ ಉಡಿಸಿ ಪೂಜಿಸಿದ್ದಾರೆ.

ವಲ್ಲಭಾಯಿ ರಸ್ತೆಯ ವಿನೋಭಾರಸ್ತೆ ತಿರುವಿನಲ್ಲಿ ಅಲ್ಲಿನ ಯುವಕರು ಶ್ರೀ ವೇಣುಗೋಪಾಲನ ರೂಪದ ಗಣೇಶನನ್ನು ಪ್ರತಿಷ್ಠಾಪಿಸಿದ್ದು ಹಸಿರು ಮೈ ಬಣ್ಣದ ಗಣೇಶ ತಲೆಗೆ ಪೇಟ ಸುತ್ತಿಕೊಂಡು ಎರಡು ಕೈಗಳಲ್ಲಿ ಕೊಳಲನ್ನು ನುಡಿಸುತ್ತ ಮೂರನೆ ಕೈಯಲ್ಲಿ ಶಂಖ ಹಿಡಿದಿದ್ದು ನಾಲ್ಕನೆ ಕೈಯಲ್ಲಿ ನವಿಲಿನ ಮೇಲೆ ಕೈ ಇಟ್ಟಿದ್ದು ಪಕ್ಕದಲ್ಲೆ ಹಸು ಇದೆ.

ಬೃಹತ್‌ ಗಣಪನ ಪ್ರತಿಷ್ಠಾಪನೆ

ರಂಗಾರಸ್ತೆ ಕೊನೆಯ ಅಂಚಿನಲ್ಲಿ ಪ್ರೌಢಾವಸ್ಥೆ ಹುಡುಗರು ಹಬ್ಬದ ಸಂಜೆ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದಾರೆ, ದಯಾನಂದ ರಸ್ತೆ ಕೊನೆ ಸ್ವಾಗತ ಕಮಾನು ಬಳಿ ಅಲ್ಲಿನ ಯುವಕರು ಹಸಿರು ಬಣ್ಣದ ಪಂಚೆಯುಟ್ಟ ಬೃಹತ್ ಗಾತ್ರದ ಗಣೇಶನನ್ನು ಸ್ಥಾಪಿಸಿದ್ದಾರೆ,ನರಸಿಂಹ ಪಾಳ್ಯದಲ್ಲಿ ಉಗ್ರನರಸಿಂಹ ದೇವಸ್ಥಾನದಲ್ಲಿ ಸಿಂಹದ ಮೇಲೆ ಕುಳಿತ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ.

ಸಂತೇಮೈದಾನದಲ್ಲಿ ಸ್ಥಳೀಯವಾಗಿ ಯುವಕರ ಬಳಗ ಪ್ರತ್ಯೇಕವಾಗಿ ಎರಡು ಕಡೆ ಗಣೇಶನನ್ನು ಸ್ಥಾಪಿಸಿದ್ದು ಕುದುರೆ ವಾಹನದ ಗಣೇಶ ಹಾಗು ಆನೆಯ ಸೊಂಡಲಿನ ಮೇಲೆ ಕುಳಿತ ಬೃಹತ್ ಗಣೇಶನನ್ನು ಪೂಜಿಸಿದ್ದಾರೆ. ಕೋಲಾರ ನ್ಯೂವೃತ್ತದಲ್ಲಿ ವಿನಾಯಕ ಯುವಕರ ಸಂಘ ಹಾಗು ಫ್ರೀಡಂ ಬಾಯ್ಸ್ ಜಂಟಿಯಾಗಿ 11 ವರ್ಷದ ಗಣೇಶೋತ್ಸವದಲ್ಲಿ ಸಿದ್ದಿ-ಬುದ್ದಿ ಸಮೇತ ಬೃಹದಾಕಾರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಅಂಬೇಡ್ಕರ್ ಪಾಳ್ಯದ ಯುವಕರ ತಂಡ ಕೆಂಪು ಬಣ್ಣದ ಪಂಚೆ ಉಡಿಸಿದ ಬೃಹತ್ ಗಣೇಶನನ್ನು ಪೂಜಿಸಿದ್ದಾರೆ.