೬೦ ವರ್ಷಗಳಿಂದ ಗಣೇಶನ ಮೂರ್ತಿ ತಯಾರಿಸುತ್ತಿರುವ ಭಂಡಾರಿ ಕುಟುಂಬ
ಪ್ರಸಾದ್ ನಗರೆ
ಕನ್ನಡಪ್ರಭ ವಾರ್ತೆ ಹೊನ್ನಾವರತಾಲೂಕಿನ ಸುಬ್ರಹ್ಮಣ್ಯ ದೇವಾಲಯದ ಸಮೀಪವಿರುವ ಕೃಷ್ಣ ಭಂಡಾರಿ ಮನೆಯಲ್ಲಿಯೇ ತರಹೇವಾರಿ ಮಣ್ಣಿನ ಗಣಪತಿ ಮೂರ್ತಿಯನ್ನು ನಿರ್ಮಿಸುತ್ತಾರೆ. ಇವರು ನಿರ್ಮಿಸುವ ಗಣಪನ ಮೂರ್ತಿಗೆ ಬೇಡಿಕೆಯೂ ಹೆಚ್ಚಿದೆ.
ಮೇ ತಿಂಗಳ ಕೊನೆವಾರದಿಂದ ಗಣಪತಿಯನ್ನು ನಿರ್ಮಿಸಲು ಪ್ರಾರಂಭಿಸುತ್ತಾರೆ. ವಿವಿಧ ಪ್ರಕಾರದಲ್ಲಿ ಮಾಡುವ ಗಣೇಶನ ಮೂರ್ತಿಗೆ ₹೨ ಸಾವಿರದಿಂದ ಪ್ರಾರಂಭಿಸಿ ಹತ್ತು ಸಾವಿರದವರೆಗೂ ಹಣವನ್ನು ತೆಗೆದುಕೊಳ್ಳುತ್ತಾರೆ. ಆದರೆ ಪ್ರತಿ ಗಣೇಶನ ಮೂರ್ತಿಗೆ ಇಷ್ಟೇ ಕೊಡಬೇಕು ಎಂದು ಶರತ್ತನ್ನು ಹಾಕುವುದಿಲ್ಲ. ಗಣೇಶನನ್ನು ಮಾಡಿಸುವವರು ಈಗಿನ ದಿನದ ಖರ್ಚು ವೆಚ್ಚಗಳನ್ನು ಗಮನಿಸಿಕೊಟ್ಟರೆ ಒಳಿತು ಎನ್ನುತ್ತಾರೆ.
ತರಹೇವಾರಿ ಮೂರ್ತಿಗಳು:ಇನ್ನು ಇವರು ವಿಭಿನ್ನ ಶೈಲಿಯ ಗಣಪತಿ ಮೂರ್ತಿಯನ್ನು ಮಾಡುತ್ತಾರೆ. ಈ ವರ್ಷವೂ ದಾಸವಾಳ ಹೂವಿನ ಮೇಲೆ, ಗರುಡ ಪಕ್ಷಿಯ ಮೇಲೆ, ವಡೆಯ ದಳ್ಳೆಯ ಮೇಲೆ, ಅಶ್ವತ್ಥ ಎಲೆಯ ಮೇಲೆ, ಯಕ್ಷಗಾನ ಶೈಲಿಯಲ್ಲಿ, ಸಿಂಹಾಸನ ಮೇಲೆ ಹೀಗೆ ಹಲವು ಭಂಗಿಗಳಲ್ಲಿ ವಿರಾಜಮಾನವಾಗಿರುವ ಗಣೇಶನ ಮೂರ್ತಿ ತಯಾರಿಸಿದ್ದಾರೆ.ಗಣಪತಿ ತಯಾರಿಕೆಗೆ ಮಣ್ಣು ತರುವುದು ದೊಡ್ಡ ಸಮಸ್ಯೆ. ಮೊದಲು ಕುಮಟಾ ವಾಲಗಳ್ಳಿಯಿಂದ ತರುತ್ತಿದ್ದರು. ಈಗ ಅಲ್ಲಿ ಸರಿಯಾದ ಮಣ್ಣು ಸಿಗುವುದಿಲ್ಲ. ಈಗ ಸಿದ್ದಾಪುರದ ಹೆಗ್ಗರಣಿಯ ಕುಂಬಾರಕುಳಿಯಿಂದ ಮಣ್ಣು ತರುತ್ತೇವೆ. ಅಲ್ಲಿಂದ ಲೋಡ್ ಮಾಡಿ ತರುವುದು ಸವಾಲು. ಒಂದು ಲೋಡ್ ಮಣ್ಣಿಗೆ ₹೨೨,೫೦೦ ಆಗಿದೆ. ಅಲ್ಲದೆ ಹಗಲು ರಾತ್ರಿ ಗಣಪತಿ ಮೂರ್ತಿಯನ್ನು ತಯಾರಿಸಲು ಕೆಲಸ ಮಾಡಬೇಕು. ಆದರೂ ಈ ಕೆಲಸದಲ್ಲಿ ಖುಷಿ ಇದೆ. ನನ್ನ ಮಕ್ಕಳು ನನಗೆ ಈ ಕೆಲಸದಲ್ಲಿ ಹೆಗಲಾಗಿ ನಿಂತಿದ್ದಾರೆ ಎನ್ನುತ್ತಾರೆ ಮೂರ್ತಿ ತಯಾರಕ ಕೃಷ್ಣ ಭಂಡಾರಿ.