ಕಾಂಗ್ರೆಸ್ ನಿಂತ ನೀರಲ್ಲ. ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಬೇಕು.
ಕನ್ನಡಪ್ರಭ ವಾರ್ತೆ ಲೋಕಾಪುರ
ಬಾಗಲಕೋಟೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗೆ ವೀಣಾ ಕಾಶಪ್ಪನವರು ಅರ್ಜಿ ಸಲ್ಲಿಸಿದ್ದರು. ಆದರೆ, ಅವರಿಗೆ ಟಿಕೆಟ್ ಸಿಗಲಿಲ್ಲ. ನನ್ನ ಮಗಳು ಸಂಯುಕ್ತಾ ಪಾಟೀಲಗೆ ಟಿಕೆಟ್ ಸಿಕ್ಕಿದೆ. ವೀಣಾ ಪರ ಎಲ್ಲರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಟಿಕೆಟ್ ಸಿಗಲಿಲ್ಲ ಎನ್ನುವ ಒಂದೇ ಕಾರಣಕ್ಕೆ ಪಕ್ಷದಿಂದ ದೂರ ಉಳಿಯುವುದು ಸಮಂಜಸವಲ್ಲ ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಸಮೀಪದ ಲಕ್ಷಾನಟ್ಟಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದೊಳಗೆ ಅಸಮಾಧಾನ ಇದ್ದರೆ ಹಿರಿಯರ ಜೊತೆ ಕುಳಿತು ಮಾತನಾಡಿ. ನಿಮ್ಮ ಅಸಮಾಧಾನ ಬಗೆಹರಿಸುವ ಕೆಲಸ ಪಕ್ಷದ ಹೈಕಮಾಂಡ್ ಮಾಡುತ್ತೆ. ಕಾಂಗ್ರೆಸ್ ನಿಂತ ನೀರಲ್ಲ. ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಬೇಕು. ಪಕ್ಷ ಒಬ್ಬರಿಗೆ ಒಂದು ಅವಕಾಶ ಕೊಟ್ಟು ನೋಡುತ್ತೆ. ಈ ಸಾರಿ ನನ್ನ ಮಗಳಿಗೆ ಅವಕಾಶ ನೀಡಿದೆ. ಅವಳು ಗೆದ್ದರೆ ಮಾತ್ರ ಮುಂದುವರಿಯುತ್ತಾಳೆ, ಇಲ್ಲದಿದ್ದರೆ ಬದಲಾವಣೆ ಆಗುತ್ತದೆ. ಅದರಲ್ಲಿ ಎರಡು ಮಾತೇ ಇಲ್ಲ ಎಂದು ತಿಳಿಸಿದರು.
ಗೆಲ್ಲುವ ಕುದುರೆಗೆ ಟಿಕೆಟ್ ನೀಡಲಾಗುತ್ತದೆ. ಟಿಕೆಟ್ ಕೊಡುವುದು, ಬಿಡುವುದು ಹೈಕಮಾಂಡ್ಗೆ ಬಿಟ್ಟಿದ್ದು. ಎಲ್ಲ ಕಾರ್ಯಕರ್ತರು ಕಾಂಗ್ರೆಸ್ ಗೆಲುವಿಗೆ ಶ್ರಮಿಸಬೇಕು. ಪಕ್ಷ ನನ್ನಿಂದಲೇ ನಡೆಯುತ್ತದೆ ಎಂದು ಭಾವಿಸಬಾರದು. ಕಾಂಗ್ರೆಸ್ನಲ್ಲಿ ಒಬ್ಬ ಪ್ರಧಾನಿಗೆ ಟಿಕೆಟ್ ಸಿಗದಿರುವ ಉದಾಹರಣೆ ಇದೆ. ಪಕ್ಷದ ನಿರ್ಣಯಕ್ಕೆ ಎಲ್ಲರೂ ಬದ್ಧರಾಗಬೇಕು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ವೀಣಾ ಕಾಶಪ್ಪನವರಿಗೆ ಒಳ್ಳೆಯ ಭವಿಷ್ಯವಿದೆ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ ನೇರವಾಗಿ ಹೇಳಿದ್ದಾರೆ. ಪಕ್ಷದ ಜೊತೆಗೆ ಕೆಲಸ ಮಾಡಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಕೈಜೋಡಿಸಿ ಎಂದು ಹೇಳಿದರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ಲೋಕಣ್ಣ ಕೊಪ್ಪದ, ಕಾಶಿನಾಥ ಹುಡೇದ, ಭೀಮನಗೌಡ ಪಾಟೀಲ, ಬೀರಪ್ಪ ಮಾಯಣ್ಣವರ, ಗೋವಿಂದಪ್ಪ ಕೌಲಗಿ, ಮಹಾದೇವಿ ಹೊಸಟ್ಟಿ, ಗೋಪಾಲಗೌಡ ಪಾಟೀಲ, ವೆಂಕಣ್ಣ ಕೊಪ್ಪದ, ಮಲ್ಲಪ್ಪ ಜೈನರ, ಯಲ್ಲಪ್ಪ ನಾಯ್ಕ, ಬಸನಗೌಡ ಪಾಟೀಲ, ಲೋಕಣ್ಣ ಕನಕಪ್ಪನವರ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಇದ್ದರು. ------------
ಕೋಟ್..
ಪಕ್ಷದೊಳಗೆ ಅಸಮಾಧಾನ ಇದ್ದರೆ ಹಿರಿಯರ ಜೊತೆ ಕುಳಿತು ಮಾತನಾಡಿ. ಗೆಲ್ಲುವ ಕುದುರೆಗೆ ಟಿಕೆಟ್ ನೀಡಲಾಗುತ್ತದೆ. ಟಿಕೆಟ್ ಕೊಡವುದು, ಬಿಡುವುದು ಹೈಕಮಾಂಡ್ಗೆ ಬಿಟ್ಟಿದ್ದು. ಎಲ್ಲ ಕಾರ್ಯಕರ್ತರು ಕಾಂಗ್ರೆಸ್ ಗೆಲುವಿಗೆ ಶ್ರಮಿಸಬೇಕು. ಪಕ್ಷ ನನ್ನಿಂದಲೇ ನಡೆಯುತ್ತದೆ ಎಂದು ಭಾವಿಸಬಾರದು. ಕಾಂಗ್ರೆಸ್ನಲ್ಲಿ ಒಬ್ಬ ಪ್ರಧಾನಿಗೆ ಟಿಕೆಟ್ ಸಿಗದಿರುವ ಉದಾಹರಣೆ ಇದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.