ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಸಮೀಪದ ಕುಂದೂರು ಗ್ರಾಮದಲ್ಲಿ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಸಂಭ್ರಮದಿಂದ ನೆರವೇರಿತು.ರಥೋತ್ಸವದ ನಿಮಿತ್ತ ಗ್ರಾಮದಲ್ಲಿ ನಿತ್ಯವೂ ಒಂದಷ್ಟು ರಥ ನಿರ್ಮಾಣ, ರಂಗಕುಣಿತ ಪ್ರದರ್ಶನ ಜರುಗಿತು. ಅಂತಿಮವಾಗಿ ರಥೋತ್ಸವದ ಬುಧವಾರ ರಥದ ಗಾಲಿಯನ್ನು ಒಂದೆಡೆ ಸೇರಿಸಿ ಸಿದ್ಧತೆ ಮಾಡಿಕೊಂಡರು.
ಹೊಸ ಮರದ ಪಟ್ಟಿಗಳನ್ನು ತಯಾರಿಸಿಕೊಂಡು ಸುಂದರ ರಥವನ್ನು ನಿರ್ಮಿಸಿದರು. ರಥಕ್ಕೆ ಬಣ್ಣ ಬಣ್ಣದ ರೇಷ್ಮೆ ಸೀರೆಗಳಿಂದ ಅಲಂಕರಿಸಿದರು. ವಿವಿಧ ವರ್ಣದ ಬಾವುಟಗಳಿಂದ ಶೃಂಗರಿಸಿದರು. ವಿವಿಧ ಪರಿಮಳ ಪುಷ್ಪಗಳಿಂದ ರಥವನ್ನು ಅಲಂಕರಿಸಲಾಯಿತು.ನಂತರ ಕಳಸಪೂಜೆ, ಮಾರುತಿ ಪೂಜೆ, ಬಲಿ ಪೂಜೆ, ಸಮರ್ಪಣೆ ಮಾಡಿ ಧೂಪಧಾರತಿ ಬೆಳಗಲಾಯಿತು. ಗ್ರಾಮದ ಸುತ್ತ ದೇವರ ಮೆರವಣಿಗೆ ಮಾಡಿ ರಥದ ಸುತ್ತ ಮಂಗಳವಾದ್ಯದೊಂದಿಗೆ ಪ್ರದಕ್ಷಿಣೆ ಹಾಕಿಸಲಾಯಿತು.
ಅರ್ಚಕ ಕುಂದೂರು ಜಗದೀಶ್ ವೀರಭದ್ರನ ಕುಣಿತದೊಂದಿಗೆ ದೇವರಿಗೆ ಅಗ್ರಪೂಜೆ ಅರ್ಪಿಸಿದ ನಂತರ ಗ್ರಾಮ ಮುಖಂಡರು ರಥಕ್ಕೆ ಪೂಜೆ ಸಲ್ಲಿಸಿದರು. ಗ್ರಾಮದ ರಥ ದ ಬೀದಿಯಿಂದ ಊರ ಹೊರವಲಯದಲ್ಲಿನ ವೀರಭದ್ರೇಶ್ವರಸ್ವಾಮಿ ದೇವಾಲಯದವರೆಗೆ ಬುಧವಾರ ಸಂಜೆ ಗೋಧೂಳಿ ಮುಹೂರ್ತದಲ್ಲಿ ರಥವನ್ನು ಎಳೆಯಲಾಯಿತು.ಹೊಲ ಗದ್ದೆಗಳೆನ್ನದೆ ಹಳ್ಳ ಗುಂಡಿಗಳಲ್ಲಿ ರಥ ಸಾಗಿತು. ಭಕ್ತರು ಹೊಲ ಗದ್ದೆಗಳಲ್ಲಿ ಯಾವುದೇ ಅಡೆತಡೆ ಇಲ್ಲದೆ ಸಾಗುತ್ತಿದ್ದ ರಥವನ್ನು ಕಂಡು ಭಕ್ತರು ವೀರಭದ್ರೇಶ್ವರಸ್ವಾಮಿ ಉಘೇ ಉಘೇ ಎಂದು ಭಕ್ತಿ ಪರವಶರಾಗಿ ಉದ್ಘೋಷ ಕೂಗಿದರು.
ಹೊಲಗದ್ದೆಗಳಲ್ಲಿ ಕೆಲಹೊತ್ತುರಥ ನಿಂತು ಸಾಗುತ್ತಿದ್ದ ನೋಟ ಕಂಡು ಹಲವರು ಉಬ್ಬೇರಿಸಿದರು. ಭಕ್ತರು ಹಣ್ಣು ಧವನ ಎಸೆದು ಕೃತಾರ್ಥರಾದರು. ರಥದ ಬಳಿ ಹಲವು ಕುರಿಗಾಹಿಗಳು ಕುರಿಮಂದಿಗಳನ್ನು ತಂದು ರೋಗ ರುಜಿನಗಳು ಬಾರದಂತೆ ತೀರ್ಥ ಪ್ರೋಕ್ಷಣೆ ಮಾಡಿಸಿಕೊಂಡರು.ಗ್ರಾಮದಿಂದ ಗುಡಿಗೆ ಸಾಗಿದ ಮಹಾರಥಕ್ಕೆ ಭಕ್ತರು ಅಂತಿಮವಾಗಿ ಪೂಜಿಸಿದರು. ರಥೋತ್ಸವ ಮುಗಿದ ನಂತರ ರಥ ಬಂಡಿಯನ್ನು ಕಳಚಲಾಯಿತು. ಭಕ್ತರಿಗೆ ಮಹಾರಥದಲ್ಲಿ ಹೂವಿನ ಪ್ರಸಾದ ವಿತರಿಸಲಾಯಿತು. ಈ ವೇಳೆ ಭಕ್ತರಿಗೆ ಅನ್ನದಾಸೋಹ, ನೀರುಮಜ್ಜಿಗೆ ಪಾನಕವನ್ನು ಗ್ರಾಮಸ್ಥರು, ಭಕ್ತರು ವಿತರಿಸಿದರು.
ಜಾತ್ರಾ ಸಂಭ್ರಮದಲ್ಲಿ ಕುಂದೂರು, ಬೆಡದಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಯ ಗ್ರಾಮಸ್ಥರು, ಮುಖಂಡರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.