ಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕಿನ ಶಣವಿನ ಕುಪ್ಪೆ ಗ್ರಾಮದಲ್ಲಿ ಶ್ರೀ ವೀರಾಂಜನೇಯ ದೇವಸ್ಥಾನ ಸಮಿತಿ, ಶ್ರೀ ವೀರಭದ್ರೇಶ್ವರ ಟ್ರಸ್ಟ್ ಸುಕ್ಷೇತ್ರ ಧರ್ಮಸ್ಥಳ, ಭಕ್ತಾದಿಗಳು ಮತ್ತು ಮುಜರಾಯಿ ಇಲಾಖೆ ಸಹಕಾರದೊಂದಿಗೆ ನೂತನವಾಗಿ ನಿರ್ಮಿಸಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಭಾರತದಲ್ಲಿ ಇನ್ನು ಬಡತನ, ಊಟಕ್ಕೆ ತೊಂದರೆ ಇರಬಹುದು, ಮನೆಕಟ್ಟಲು ತೊಂದರೆ ಇರಬಹುದು. ಆದರೆ ಭಕ್ತಿಗೆ ಯಾವತ್ತೂ ಕೊರತೆ ಇಲ್ಲ ಎಂದರು.
ಒಮ್ಮೆ ಆಂಜನೇಯನಿಗೆ ಸಮುದ್ರ ದಾಟಲು ಸಮಸ್ಯೆ ಎದುರಾಗುತ್ತದೆ. ಈ ವೇಳೆ ಹನುಮ ಸೈನ್ಯ ನಾವು ನಿಮ್ಮೊಂದಿಗಿದ್ದೇವೆ. ನಮ್ಮ ಶಕ್ತಿ ಸ್ವರೂಪಿಯಾಗಿ ನೀವು ಸಮುದ್ರ ದಾಟಬೇಕೆಂದಾಗ ಆಂಜನೇಯ ಸಮುದ್ರ ದಾಟುತ್ತಾನೆ. ಅಂದರೆ, ಎಲ್ಲಿ ಜನಶಕ್ತಿ, ಜನ ಸಮುದಾಯ ಒಂದಾಗಿರುತ್ತೋ ಅವರಿಗೆ ಅಸಾಧ್ಯವಾದುದು ಯಾವುದು ಇರುವುದಿಲ್ಲ ಎಂಬುದಕ್ಕೆ ಆಂಜನೇಯ ಸಮುದ್ರ ದಾಟಿದ್ದೆ ಉದಾಹರಣೆ. ಈ ಕಲಿಯುಗದಲ್ಲಿ ಮಹತ್ವವಾದುದು ಸಂಘ ಶಕ್ತಿ. ಸಾಂಘಿಕವಾಗಿ ಮನುಷ್ಯ ಯಾವುದೇ ಕೆಲಸ ಮಾಡಿದರು ಯಶಸ್ವಿಯಾಗುತ್ತಾನೆ ಎಂಬುದು ಈ ಪ್ರಸಂಗದಿಂದ ತಿಳಿಯುತ್ತದೆ. ಅಂತಹ ವೀರಾಂಜನೇಯ ದೇವಸ್ಥಾನ ಜಿರ್ಣೋದ್ಧಾರ ಮಾಡಿ ಉದ್ಘಾಟಿಸಲಾಗಿದೆ ಎಂದರು.ಭಕ್ತಿ ಭಾವನೆ ರಕ್ತಗತವಾಗಿದೆ: ಭಾರತೀಯರಲ್ಲಿ ಭಕ್ತಿಭಾವನೆ ರಕ್ತಗತವಾಗಿ ಬಂದಿದೆ. ಭಗವಂತನಲ್ಲಿ ನಂಬಿಕೆ, ವಿಶ್ವಾಸ, ನಿಷ್ಠೆ ಭಾರತೀಯರಲ್ಲಿ ಬಂದಿದೆ. ಭಗವಂತನ ಬಿಟ್ಟು ಭಕ್ತರಿರಲು ಸಾಧ್ಯವಿಲ್ಲ. ಹಾಗೆಯೇ ಭಕ್ತರನ್ನು ಬಿಟ್ಟು ಭಗವಂತ ಇರಲು ಸಾಧ್ಯವಿಲ್ಲ. ಭಗವಂತನಲ್ಲಿ ನಂಬಿಕೆ, ವಿಶ್ವಾಸ ಇರಬೇಕು. ಭಗವಂತನ ಅಸ್ತಿತ್ವದ ಬಗ್ಗೆ ಮನುಷ್ಯನಿಗೆ ಸಂಶಯ ಇರಬಾರದು. ಭಗವಂತ ಜಗತ್ತನೆಲ್ಲಾ ವ್ಯಾಪಿಸಿದ್ದಾನೆ. ಅದರ ಬಗ್ಗೆ ನಂಬಿಕೆ, ವಿಶ್ವಾಸ ಇಟ್ಟುಕೊಳ್ಳುವುದು ಅಗತ್ಯವಾಗಿದೆ ಎಂದರು.
ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಜತೆಗೆ ಇನ್ನೊಂದು ದೇವಸ್ಥಾನ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿದ್ದು, ಅದರ ಸಂಪೂರ್ಣ ಖರ್ಚನ್ನು ಭರಿಸುವುದಾಗಿ ಭರವಸೆ ನೀಡಿದರು. ಶಾಸಕ ಎ. ಮಂಜು ಮಾತನಾಡಿ, ದೇವಸ್ಥಾನವನ್ನು 7 ತಿಂಗಳೊಳಗೆ ಪೂರ್ಣಗೊಳಿಸಿರುವುದು ಸಂತೋಷದ ವಿಷಯ. ದೇವಸ್ಥಾನ ಮತ್ತು ಶಾಲೆ ಉರಿಗೊಂದು ಕಿರೀಟವಿದ್ದಂತೆ. ಹಾಗಾಗಿ ದೇವಸ್ಥಾನ ನಿರ್ಮಿಸಿ ಹಾಗೆ ಬಿಡದೆ ನಿತ್ಯ ದೀಪ ಹಚ್ಚಬೇಕು ಎಂದು ಹೇಳಿದರು.
ಇದಕ್ಕೂ ಮುನ್ನ ಅಂದರೆ ಮಂಗಳವಾರ ಮಹಿಳಾ ಸ್ವ ಸಹಾಯ ಸಂಘದ ಮಹಿಳೆಯರಿಂದ ಗಂಗಪೂಜೆ, ವೀರಗಾಸೆ, ಮಂಗಳವಾದ್ಯದೊಂದಿಗೆ ಗೋಮಾತೆ ನೂತನ ವಿಗ್ರಹ, ಶಿಖರ ಕಳಸದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವ, ಸಂಜೆ ದೇವಸ್ಥಾನದ ಪ್ರವೇಶ, ಗಣಪತಿಪೂಜೆಯೊಂದಿಗೆ ಪುಣ್ಯಾಹ, ನಾಂದಿ, ನವಗ್ರಹ, ಮೃತ್ಯುಂಜಯ, ಏಕಾದಶಿ ರುದ್ರ ಅಷ್ಟದಿಕ್ವಾಲಕ, ಅಷ್ಟಲಕ್ಷ್ಮಿ, ಲಕ್ಷ್ಮೀನಾರಾಯಣ, ಉಮಾಮಹೇಶ್ವರಿ, ಹೋಮ ಹವನಾದಿ, ಪ್ರಾಣಪ್ರತಿಷ್ಠಾಪನೆ ಪೂಜಾ ಕೈಂಕರ್ಯ ನಡೆದವು.