ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಸರ್ವ ಲೋಕ ಸೇವಾ ಫೌಂಡೇಶನ್ ಅಧ್ಯಕ್ಷ ವೀರೇಶ ಬಸಯ್ಯ ಹಿರೇಮಠ ಅವರು ಬಡ ರೋಗಿಗಳಿಗೆ ಸಹಾಯ ಮಾಡುತ್ತಿರುವ ಸೇವೆಗೆ ಶ್ರೀಗಳು ಮಹಾ ಶಿವರಾತ್ರಿಯ ಪ್ರಯುಕ್ತ ಒಂದು ಸುಸಜ್ಜಿತ ಹಾಸಿಗೆಯುಳ್ಳ ಬೆಡ್ ಹಸ್ತಾಂತರಿಸಿ ಮಾತನಾಡಿದ ಅವರು, ಸದಾ ಸಮಾಜ, ಬಡವರ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದಾರೆ. ಬಡ ರೋಗಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಸರ್ವ ಲೋಕಾ ಸೇವಾ ಫೌಂಡೇಶನ್ ವೀಲ್ಚೇರ್, ಬೆಡ್, ಅಪಘಾತದಲ್ಲಿ ಗಾಯಗೊಂಡವರಿಗೆ ಹ್ಯಾಂಡ್ ಸ್ಟಿಕ್ ಸೇರಿದಂತೆ ಅನೇಕ ಕೆಲಸ ಕಾರ್ಯ ಮಾಡುತ್ತಿದ್ದಾರೆ. ಅವರ ಈ ಸೇವೆಗೆ ಶ್ರೀಮಠದಿಂದ ಸಣ್ಣ ಉಡುಗೊರೆ ನೀಡಲಾಗಿದೆ. ಅವರು ಇನ್ನಷ್ಟು ಹೆಚ್ಚಿನ ಬಡ ಜನರಿಗೆ ಅನುಕೂಲ ಮಾಡಿಕೊಡುವ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.
ಸರ್ವ ಲೋಕ ಸೇವಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ವೀರೇಶ ಬಸಯ್ಯ ಹಿರೇಮಠ ಮಾತನಾಡಿ, ನಾವು ಮಾಡುವ ಕೆಲಸಕ್ಕೆ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಮಾರ್ಗದರ್ಶನ. ಆಶೀರ್ವಾದ ಇದೆ. ಶ್ರೀಗಳು ನೀಡಿರುವ ಈ ದೊಡ್ಡ ಕೊಡುಗೆ ನನಗೆ ಮತ್ತಷ್ಟು ಸೇವೆ ಮಾಡುವ ಶಕ್ತಿ ಬಂದಿದೆ ಎಂದು ತಿಳಿಸಿದರು.