ಗದಗ: ಕಣ್ಣು ಇದ್ದವರು ಮಾಡಲಾರದಂತಹ ಕೆಲಸವನ್ನು ಉಭಯ ಶ್ರೀಗಳು ಮಾಡಿದ್ದಾರೆ. ಶಿವನ ಆರಾಧನೆ ಮಾಡಿ ಶಿವಯೋಗಿ ಆದ ಶ್ರೀಗಳು ಸ್ವತಃ ಅಂಧರಾದರೂ ಜಗತ್ತಿಗೆ ಜ್ಞಾನದ ಜ್ಯೋತಿಯನ್ನು ಬೆಳಗಿಸಿ ವಿಭೂತಿ ಪುರುಷರಾಗಿದ್ದಾರೆ ಅವರ ಸ್ಮಾರಕವನ್ನು ಪೂರ್ಣಗೊಳಿಸಲು ರಾಜ್ಯ ಮತ್ತು ಕೇಂದ್ರದಿಂದ ಸಹಕಾರ ನೀಡಲಾಗುವುದೆಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭರವಸೆ ನೀಡಿದರು.
ತೋಂದಾರ್ಯ ಶ್ರೀಮಠದ ಸಿದ್ದರಾಮ ಸ್ವಾಮಿಗಳು ಮಾತನಾಡಿ, ಉಭಯ ಶ್ರೀಗಳು ತಮ್ಮ ಬದುಕನ್ನು ಅಂಧ- ಅನಾಥರು, ಬಡವರಿಗಾಗಿ ಸವೆಸಿ ತಮ್ಮ ಜೀವನ ಸಾರ್ಥಕ ಪಡೆದುಕೊಂಡರು. ಅಂತಹ ಮಹಾ ಪುರುಷರನ್ನು ಸಮಾಜವು ಸದಾ ಸ್ಮರಿಸುತ್ತದೆ ಎಂದರು.
ಕಾರ್ಣಿಕ ಯುಗದ ಮಹಾಪುರುಷರಾದ ಹಾನಗಲ್ ಕುಮಾರೇಶ್ವರ ದಿವ್ಯ ಚೈತನ್ಯ ಶಕ್ತಿಯಿಂದ ಪಂಚಾಕ್ಷರಿ ಗವಾಯಿಗಳರವರನ್ನು ಗುರುತಿಸಿ ಅವರನ್ನು ಗಾನಯೋಗಿಯನ್ನಾಗಿ ಮಾಡಿದ್ದಾರೆ. ಪುಟ್ಟರಾಜ ಗವಾಯಿಗಳು ಗುರುಗಳ ಮಾರ್ಗದರ್ಶನದಲ್ಲಿ ದಾರಿದೀಪವಾಗಿ ನಡೆದು ತಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಂಡಿದ್ದಾರೆ.ದೇಶದ ಅನೇಕ ಕಡೆಗಳಲ್ಲಿ ಜಾತ್ರೆ ನಡೆಯುತ್ತದೆ. ಆದರೆ, ಸಂಗೀತದ ಜಾತ್ರೆ ನಡೆಯುವುದು ಮಾತ್ರ ಗದುಗಿನಲ್ಲಿ. ಆಶ್ರಮದ ಕಲಾವಿದರು ತಮ್ಮ ಬದುಕನ್ನು ಕಟ್ಟಿಕೊಂಡು ಪ್ರತಿವರ್ಷ ಇಲ್ಲಿ ಬಂದು ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ಇಂತಹ ಅನುಭವ ಕಾಣಲು ಇಲ್ಲಿ ಮಾತ್ರ ಸಾಧ್ಯ ಎಂದರು.
ಈ ವೇಳೆ ಗುಳೇದಗುಡ್ಡ ಮುರುಘಾಮಠದ ಕಾಶೀನಾಥ ಸ್ವಾಮಿಗಳು, ಅಡ್ನೂರ ಬೃಹನ್ಮಠದ ಅಭಿನವ ಪಂಚಾಕ್ಷರಿ ಶಿವಾಚಾರ್ಯ ಸ್ವಾಮಿಗಳು, ಮೈಸೂರು ಕುಂದೂರು ಮಠದ ಡಾ. ಶರತ್ಚಂದ್ರ ಸ್ವಾಮಿಗಳು, ಮೈಸೂರು ಅರಮನೆ ಪಂಚಗವಿಮಠದ ಶ್ರೀಕಂಠ ಸ್ವಾಮಿಗಳು, ಅಂತೂರ- ಬೆಂತೂರಿನ ಕುಮಾರ ದೇವರು, ಅಡವೀಂದ್ರಮಠದ ಮಹೇಶ್ವರ ಸ್ವಾಮೀಜಿ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ನಿಂಗಪ್ಪ ಕೆಂಗಾರ, ಪರಶುರಾಮ ಕಟ್ಟಿಮನಿ, ವಿಶಾಲ ಪವಾರ, ಅರುಣ ಕಟ್ಟಿಮನಿ, ಮಂಜುನಾಥ ಎಸ್.ಪಿ., ರಮೇಶ ಬಸ್ಮಿ, ಮುರಳೀಧರ ದೇಶಪಾಂಡೆ ಸೇರಿದಂತೆ ಮುಂತಾದವರು ಇದ್ದರು.