ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಪರಿಶುದ್ಧ ಮನಸ್ಸಿನಿಂದ ಕಟ್ಟಿದ್ದು ವೀರೇಶ್ವರ ಪುಣ್ಯಾಶ್ರಮ: ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು

KannadaprabhaNewsNetwork | Published : Jun 18, 2025 11:48 PM

ಗದಗ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಲಿಂ. ಪಂ. ಪಂಚಾಕ್ಷರಿ ಗವಾಯಿಗಳವರ 81ನೇ ಹಾಗೂ ಪದ್ಮಭೂಷಣ ಲಿಂ. ಡಾ. ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಸ್ಮರಣೋತ್ಸವ ಹಾಗೂ ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಇತ್ತೀಚೆಗೆ ಧರ್ಮೋತ್ತೇಜಕ ಮಹಾಸಭೆ ನಡೆಯಿತು.

ಗದಗ: ಹಾನಗಲ್ ಕುಮಾರೇಶ್ವರ ಶ್ರೀಗಳ ತಪಸ್ಸಿನ ಫಲವಾಗಿ ಲಿಂ. ಪಂ. ಪಂಚಾಕ್ಷರಿ ಗವಾಯಿಗಳು ಹಾಗೂ ಲಿಂ. ಪಂ. ಪುಟ್ಟರಾಜ ಕವಿ ಗವಾಯಿಗಳವರು ಭುಲೋಕಕ್ಕೆ ಬಂದಿದ್ದಾರೆ ಎಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಹೇಳಿದರು.

ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಲಿಂ. ಪಂ. ಪಂಚಾಕ್ಷರಿ ಗವಾಯಿಗಳವರ 81ನೇ ಹಾಗೂ ಪದ್ಮಭೂಷಣ ಲಿಂ. ಡಾ. ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಸ್ಮರಣೋತ್ಸವ ಹಾಗೂ ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಇತ್ತೀಚೆಗೆ ಜರುಗಿದ ಧರ್ಮೋತ್ತೇಜಕ ಮಹಾಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ವೀರೇಶ್ವರ ಪುಣ್ಯಾಶ್ರಮ ಹಣ ಮಾಡುವ ಸಂಸ್ಥೆಯಲ್ಲ, ಸೇವೆ ಮಾಡುವ ಸಂಸ್ಥೆಯಾಗಿದೆ. ಲೋಕದ ಕಲ್ಯಾಣಕ್ಕಾಗಿ ಸೇವಾ ಕಾರ್ಯ ಮಾಡುವ ಸಂಸ್ಥೆಯಾಗಿದೆ. ಈ ಪುಣ್ಯಾಶ್ರಮದಿಂದ ಸಂಗೀತಗಾರರು, ಕಲಾವಿದರು, ಸಾಹಿತಿಗಳು, ನಾಟಕಕಾರರು, ಕೀರ್ತನಕಾರರು, ಪ್ರವಚನಕಾರರಾಗಿ ಸಾವಿರಾರು ಕಲಾವಿದರು ದೇಶದ ತುಂಬೆಲ್ಲ ತಮ್ಮ ಪ್ರತಿಭೆ ಅನಾವರಣಗೊಳಿಸಿ ಪುಣ್ಯಾಶ್ರಮ ಕೀರ್ತಿ ಹೆಚ್ಚಿಸಿದ್ದಾರೆ. ಪರಿಶುದ್ಧ ಮನಸ್ಸಿನಿಂದ ಕಟ್ಟಿದ ಪುಣ್ಯಾಶ್ರಮ ಉತ್ತರೋತ್ತರವಾಗಿ ಬೆಳೆಯಲಿ ಎಂದರು.

ಉಪ್ಪಿನ ಬೆಟಗೇರಿಯ ಮೂರುಸಾವಿರಮಠದ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ಮಾತನಾಡಿ, ಪುಟ್ಟರಾಜ ಗವಾಯಿಗಳನ್ನು ನೋಡಿದರೆ ಪರಮಾತ್ಮನನ್ನು ನೋಡಿದಂತೆ ಅವರ ಆಶೀರ್ವಾದ ಪಡೆದವರ ಜನ್ಮ ಸಾರ್ಥಕವಾದಂತೆ ಎಂದರು.

ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಬಳಗಾನೂರ ಶ್ರೀಮಠದ ಶಿವಶಾಂತವೀರ ಶರಣರು, ಅಡ್ನೂರ ಬ್ರಹನ್ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯರು, ಮುದ್ದೇಬಿಹಾಳದ ಡಾ. ಲಾಲಲಿಂಗೇಶ್ವರ ಶರಣರು, ಅಫಜಲಪುರದ ವಿರೂಪಾಕ್ಷಿ ದೇವರು, ಲಿಂಗಸೂರಿನ ಶಿವಶರಣೆ ನಂದೀಶ್ವರಿ ಅಮ್ಮನವರು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಎಸ್ಪಿ ಬಿ.ಎಸ್. ನೇಮಗೌಡ, ಡಿಡಿಪಿಐ ಆರ್.ಎಸ್. ಬುರಡಿ, ಡಾ. ಪುರುಷೋತ್ತಮಗೌಡ್ರ, ದತ್ತಪ್ಪ ಸಾಗನೂರ, ಡಾ. ಸಂಗಮೇಶ ಕೊಳ್ಳಿ, ಎಂ.ಕೆ. ಪಟ್ಟಣಶೆಟ್ಟಿ, ಬಾಬುರಾವ್ ಕೋಬಾಳ, ಬಸಯ್ಯ ಗುತ್ತೇದಾರ, ನಾಡಗೌಡ್ರ ಚನ್ನೂರ ಉಪಸ್ಥಿತರಿದ್ದರು.

ಗದುಗಿನ ಕುಮಾರೇಶ್ವರ ಕೃಪಾಪೋಷಿತ ಪಂ. ಪಂಚಾಕ್ಷರ ಗವಾಯಿಗಳವರ ಸಂಗೀತ ಪಾಠಶಾಲೆಯ ವಿಧ್ಯಾರ್ಥಿಗಳಿಂದ ಪ್ರಾರ್ಥನೆ ಜರುಗಿತು. ಡಾ. ಕಲ್ಲಯ್ಯಜ್ಜನವರು ಅಭಾರ ಮನ್ನಣೆ ಮಾಡಿದರು. ಅಡ್ನೂರಿನ ಎಂ. ಕಲ್ಲಿನಾಥ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.