ವೇಣೂರು ಬಾಹುಬಲಿ ಮಹಾಮಜ್ಜನ: ಅಧಿಕಾರಿಗಳೊಂದಿಗೆ ಶಾಸಕ ಪೂಂಜ ಸಭೆ

KannadaprabhaNewsNetwork |  
Published : Feb 02, 2024, 01:01 AM IST
ಬಾಹುಬಲಿ ಸಭೆ | Kannada Prabha

ಸಾರಾಂಶ

ಫೆ.22ರಿಂದ ಮಾ.1ರ ವರೆಗೆ ನಡೆಯಲಿರುವ ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ ಕಾರ್ಯಕ್ರಮದ ಯಶಸ್ವಿಗೆ ಸರ್ಕಾರದ ಅಧಿಕಾರಿಗಳೊಂದಿಗೆ ಬುಧವಾರ ವೇಣೂರು ಬಾಹುಬಲಿ ಸಭಾಭವನದಲ್ಲಿ ಸಮಾಲೋಚನೆ ಹಾಗೂ ಪ್ರಗತಿ‌ ಪರಿಶೀಲನೆ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ವೇಣೂರು ಬಾಹುಬಲಿ ಮಹಾಮಜ್ಜನಕ್ಕಾಗಿ ಅಟ್ಟೊಳಿಗೆ ಸಿದ್ಧತೆ ಪೂರ್ಣಹಂತದಲ್ಲಿದೆ. ಯಾವುದೇ ಹಂತದಲ್ಲೂ ತೊಂದರೆಯಾಗದಂತೆ ಇಲಾಖಾಧಿಕಾರಿಗಳು ರೂಪುರೇಷೆ ನಡೆಸಬೇಕು. ಸಾಂಸ್ಕೃತಿಕ ನಗರಿ ಮೈಸೂರು ದಸರಾ ಉತ್ಸವದ ಮಾದರಿಯಲ್ಲಿ ವೇಣೂರು ಪೇಟೆಯುದ್ದಕ್ಕೂ ವಿದ್ಯುತ್ ದೀಪಾಲಂಕಾರ ನಡೆಸಲಾಗುವುದು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಫೆ.22ರಿಂದ ಮಾ.1ರ ವರೆಗೆ ನಡೆಯಲಿರುವ ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ ಕಾರ್ಯಕ್ರಮದ ಯಶಸ್ವಿಗೆ ಸರ್ಕಾರದ ಅಧಿಕಾರಿಗಳೊಂದಿಗೆ ಬುಧವಾರ ವೇಣೂರು ಬಾಹುಬಲಿ ಸಭಾಭವನದಲ್ಲಿ ನಡೆದ ಸಮಾಲೋಚನೆ ಹಾಗೂ ಪ್ರಗತಿ‌ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬಾಹುಬಲಿಯ ಮಹಾಮಜ್ಜನಕ್ಕಾಗಿ ಸಕಲ ತಯಾರಿಗಳು ಭರದಿಂದ ಸಾಗಿದ್ದು, ಹಲವಾರು ಸಿದ್ಧತೆಗಳ ಬಗ್ಗೆ ಶಾಸಕರು ಪರಿವೀಕ್ಷಣೆ ನಡೆಸಿ ಅಗತ್ಯ ತಿದ್ದುಪಡಿಗಳ ಬಗ್ಗೆ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿದರು. 12 ವರ್ಷಗಳ ಬಳಿಕ ನಡೆಯುವ ಮಹಾಮಜ್ಜನಕ್ಕೆ ಸಕಲ ಸಿದ್ದತೆಗಳು ನಡೆಯುತ್ತಿದೆ. ಅಟ್ಟೊಳಿಗೆಯ ಎಲ್ಲ ಭಾಗಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸಿ ಪ್ರತಿಹಂತದಲ್ಲೂ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳ ಬಗ್ಗೆ ತಿಳಿಸಿದರು. ಅಟ್ಟೊಳಿಗೆಯನ್ನು ಪರೀಕ್ಷಿಸಿ ಲೋಕೋಪಯೋಗಿ ಇಲಾಖೆಯಿಂದ ಪ್ರಮಾಣಪತ್ರ ನೀಡಬೇಕೆಂದು ಶಾಸಕರು ಹೇಳಿದರು. ಬಾಹುಬಲಿ ಬೆಟ್ಟದ ಸುತ್ತಲೂ ರಸ್ತೆ ಡಾಂಬರೀಕರಣಕ್ಕೆ ಸ್ಥಳದಲ್ಲೇ ಸೂಚನೆ ನೀಡಿದರು.ರಸ್ತೆ ಡಾಂಬರೀಕರಣ, ಕುಡಿಯುವ ನೀರು, ಸ್ವಚ್ಛತೆ, ಪಾರ್ಕಿಂಗ್, ವಸತಿ, ಭದ್ರತೆ, ನಗರಲಂಕಾರ, ವಿದ್ಯುತ್ ದೀಪಾಲಂಕಾರ, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ, ಆರೋಗ್ಯ, ಸ್ವಾಗತ ದ್ವಾರ ಹಾಗೂ ಇತರ ವ್ಯವಸ್ಥೆಯ ಬಗ್ಗೆ ಶೀಘ್ರವಾಗಿ ಸಂಬಂಧಿಸಿದ ಇಲಾಖೆಯವರು ಕೂಡಲೇ ಕ್ರಮ ಕೈಗೊಳ್ಳಬೇಕೆಂದರು. ಹೆಚ್ಚಾಗಿ ಜನಸಂದಣಿ ಸೇರುವ ಸ್ಥಳಗಳಲ್ಲಿ ಹಾಗೂ ಹಿರಿಯ ನಾಗರಿಕರು ಕೂರುವ ಜಾಗದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನು ತಿಳಿಸಿದರು.ಅಭಿಷೇಕ ಮಾಡುವ ಅವಧಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಆ ವೇಳೆಯಲ್ಲಿ ಭಕ್ತರು ಅನುಭವಿಸುವ ಸಣ್ಣಪುಟ್ಟ ಸಮಸ್ಯೆಗಳನ್ನೂ ವಿವರಿಸಿದರು. ಯಾವುದೇ ಹಂತದಲ್ಲೂ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕೆಂದು ಇಲಾಖೆಗೆ ತಿಳಿಸಿದರು. ಕಾರ್ಯಕ್ರಮದ ಯಶಸ್ವಿಗೆ ಮೆಸ್ಕಾಂ‌ ಇಲಾಖೆ ಸಂಪೂರ್ಣ ವಿದ್ಯುತ್ ನೀಡಬೇಕೆಂದರು.ಆರೋಗ್ಯ ಇಲಾಖೆ ಮುಖ್ಯವಾಗಿ ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು. ತುರ್ತು ಸಂದರ್ಭದಲ್ಲಿ ಹೆಲ್ತ್ ಪರಿಕರಗಳು ಇರಬೇಕು. ಆಂಬುಲೆನ್ಸ್ ಮುಖ್ಯವಾಗಿ ಬೇಕಾಗಿದ್ದು ಅದರ ವ್ಯವಸ್ಥೆ ಮಾಡಬೇಕೆಂದರು. ಟ್ರಾಫಿಕ್‌ಗೆ ಸಂಭಂಧಿಸಿದಂತೆ ಇಲ್ಲಿಗೆ ಬರುವರು ಹೆಚ್ಚಿನವರು ಶ್ರೀ ಕ್ಷೇತ್ರ ಧರ್ಮಸ್ಥಳದ ದರ್ಶನ ಮಾಡುವವರು ಇರುತ್ತಾರೆ. ಬದಲಿ ರಸ್ತೆ ಇರುವುದರಿಂದ ರೂಟ್ ಮ್ಯಾಪ್‌ ಮಾಡಿ ಟ್ರಾಫಿಕ್ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಇಲಾಖೆಗೆ ತಿಳಿಸಿದರು.ಮಸ್ತಕಾಭಿಷೇಕದ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಪರೀಕ್ಷೆ ಇರುವುದರಿಂದ ಹೆಚ್ಚುವರಿ ಬಸ್‌ ವ್ಯವಸ್ಥೆ ಬೇಕಾಗುತ್ತದೆ. ಒಂದೆರೆಡು ಹೆಚ್ಚುವರಿ ಬಸ್‌ಗಳನ್ನು ಹಾಕುವ ಬಗ್ಗೆ ಶಾಸಕರು ತಿಳಿಸಿದರು.ರಸ್ತೆ ಬದಿಯಲ್ಲಿ ಬ್ಯಾನರ್ ಅಳವಡಿಸುವವರು ಪಂಚಾಯಿತಿಯಿಂದ ಪರ್ಮಿಷನ್ ತೆಗೆದುಕೊಂಡು ಬ್ಯಾನರ್ ಹಾಕಬೇಕೆಂದು ಪಂಚಾಯಿತಿ ಅಧ್ಯಕ್ಷ ನೇಮಯ್ಯ ಕುಲಾಲ್ ತಿಳಿಸಿದರು.ಲಕ್ಷಾಂತರ ಜನರು ಸೇರುವ ಕಾರ್ಯಕ್ರಮವಾಗಿರುವುದರಿಂದ ಭದ್ರತೆ ದೃಷ್ಟಿಯಿಂದ ಸಿಸಿ ಕ್ಯಾಮರ ಹಾಗೂ ನೆಟ್ ವರ್ಕ್ ಸಮಸ್ಯೆಯಿರುವುದರಿಂದ ಮೊಬೈಲ್ ಟವರ್ ನ‌‌ ಅವಶ್ಯಕತೆ ಇದೆಯೆಂದು ಪಡ್ಯಾರಬೆಟ್ಟುವಿನ ವಿಕಾಸ್ ಜೈನ್ ತಿಳಿಸಿದರು.

ವೇದಿಕೆಯಲ್ಲಿ ಬೆಳ್ತಂಗಡಿ ತಹಸೀಲ್ದಾರ್ ಪೃಥ್ವಿ ಸಾನಿಕಮ್, ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಮಸ್ತಕಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿ.ಪ್ರವೀಣ್ ಕುಮಾರ್ ಇಂದ್ರ, ವೇಣೂರು ಗ್ರಾಮ‌ ಪಂಚಾಯಿತಿ ಅಧ್ಯಕ್ಷ ನೇಮಯ್ಯ ಕುಲಾಲ್ ಉಪಸ್ಥಿತರಿದ್ದರು.ಮಸ್ತಕಾಭಿಷೇಕದ ಸಮನ್ವಯಾಧಿಕಾರಿ ಡಾ.ಜಯಕೀರ್ತಿ ಜೈನ್ ಸ್ವಾಗತಿಸಿದರು. ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ ಈಗಾಗಲೇ ನಡೆದಿರುವ ಹಲವಾರು ಪ್ರಗತಿಯ ಕೆಲಸವನ್ನು ತಿಳಿಸಿದರು. ಶಿಕ್ಷಕ ಮಹಾವೀರ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ