ಸಿಎಂ ಹೇಳಿಕೆಗೆ ವಿಹಿಂಪ, ಬಜರಂಗದಳ ಖಂಡನೆ<bha>;</bha> ಮನವಿ

KannadaprabhaNewsNetwork | Published : Dec 10, 2023 1:30 AM

ಸಾರಾಂಶ

ಅಲ್ಪಸಂಖ್ಯಾತರಲ್ಲಿ ಆರು ಧರ್ಮೀಯರಿದ್ದು, ಅವರನ್ನೆಲ್ಲಾ ಸಮಾನವಾಗಿ ನೋಡಬೇಕಾದ ಕರ್ತವ್ಯ ಮುಖ್ಯಮಂತ್ರಿಗಳದ್ದಾಗಿದೆ. ಮುಸ್ಲಿಂ ಒಂದು ಸಮುದಾಯಕ್ಕೆ ಮಾತ್ರ ಅನುದಾನ ಹೆಚ್ಚು ಕೊಡುತ್ತೇವೆ ಎಂದು ನೀಡಿರುವ ಹೇಳಿಕೆ ಸಾಮರಸ್ಯಕ್ಕೆ ಧಕ್ಕೆ ತರುವಂತಹದ್ದಾಗಿದೆ. ಸಂವಿಧಾನಕ್ಕೆ ವಿರುದ್ಧವಾಗಿ ರಾಜ್ಯದ ಖಜಾನೆಯನ್ನು ಆಗಾಧ ಪ್ರಮಾಣದಲ್ಲಿ ಖರ್ಚು ಮಾಡುತ್ತಿರುವ ಸಿದ್ದರಾಮಯ್ಯ ಸರ್ಕಾರವನ್ನು ತಕ್ಷಣ ವಜಾಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದ ಸಿದ್ದರಾಮಯ್ಯಕನ್ನಡಪ್ರಭ ವಾರ್ತೆ ಸಾಗರ

ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹತ್ತು ಸಾವಿರ ಕೋಟಿ ರುಪಾಯಿ ಕೊಡುತ್ತೇನೆ ಎಂದು ನೀಡಿರುವ ಹೇಳಿಕೆಯನ್ನು ಖಂಡಿಸಿ, ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಮುಖ್ಯಮಂತ್ರಿಗಳು ಶಂಕಿತ ಐಸಿಸ್ ಬೆಂಬಲಿಗನೊಂದಿಗೆ ವೇದಿಕೆ ಹಂಚಿಕೊಂಡಿರುವ ಪ್ರಕರಣವನ್ನು ಉನ್ನತಮಟ್ಟದ ತನಿಖೆಗೆ ವಹಿಸುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಉಪವಿಭಾಗಾಧಿಕಾರಿ ಕಚೇರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಹುಬ್ಬಳ್ಳಿಯಲ್ಲಿ ಡಿ. ೪ರಂದು ನಡೆದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಮುಸ್ಲಿಂ ಸಮುದಾಯಕ್ಕೆ ನಾಲ್ಕು ಸಾವಿರ ಕೋಟಿ ರು. ಅನುದಾನ ನೀಡಿದ್ದು, ಮುಂದಿನ ವರ್ಷ ೧೦ ಸಾವಿರ ಕೋಟಿ ರು. ಅನುದಾನ ಖಂಡಿತವಾಗಿಯೂ ಕೊಡುವುದಾಗಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಸಂವಿಧಾನ ವಿರೋಧಿಯಾಗಿದ್ದು, ಮುಸ್ಲಿಮರಿಗೆ ಪ್ರತ್ಯೇಕ ಅನುದಾನ ಕೊಡಲು ಅವಕಾಶ ಇರುವುದಿಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ.

ಅಲ್ಪಸಂಖ್ಯಾತರಲ್ಲಿ ಆರು ಧರ್ಮೀಯರಿದ್ದು, ಅವರನ್ನೆಲ್ಲಾ ಸಮಾನವಾಗಿ ನೋಡಬೇಕಾದ ಕರ್ತವ್ಯ ಮುಖ್ಯಮಂತ್ರಿಗಳದ್ದಾಗಿದೆ. ಮುಸ್ಲಿಂ ಒಂದು ಸಮುದಾಯಕ್ಕೆ ಮಾತ್ರ ಅನುದಾನ ಹೆಚ್ಚು ಕೊಡುತ್ತೇವೆ ಎಂದು ನೀಡಿರುವ ಹೇಳಿಕೆ ಸಾಮರಸ್ಯಕ್ಕೆ ಧಕ್ಕೆ ತರುವಂತಹದ್ದಾಗಿದೆ. ಸಂವಿಧಾನಕ್ಕೆ ವಿರುದ್ಧವಾಗಿ ರಾಜ್ಯದ ಖಜಾನೆಯನ್ನು ಆಗಾಧ ಪ್ರಮಾಣದಲ್ಲಿ ಖರ್ಚು ಮಾಡುತ್ತಿರುವ ಸಿದ್ದರಾಮಯ್ಯ ಸರ್ಕಾರವನ್ನು ತಕ್ಷಣ ವಜಾಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರ ಜೊತೆ ವೇದಿಕೆ ಹಂಚಿಕೊಂಡ ತನ್ವೀರ್ ಪೀರಾ ಎಂಬ ಮುಸ್ಲಿಂ ಮೌಲ್ವಿಗೆ ಶಂಕಿತ ಭಯೋತ್ಪಾದಕ ಸಂಘಟನೆಗಳ ಜೊತೆ ನಂಟು ಇದೆ ಎನ್ನುವ ಚರ್ಚೆ ನಡೆಯುತ್ತಿದೆ. ವಿಧಾನಸಭಾ ಸದಸ್ಯರಾದ ಬಸವನಗೌಡ ಯತ್ನಾಳ್ ಕೆಲವು ದಾಖಲೆ ಸಹಿತ ತನ್ವೀರ್‌ ಪೀರಾ ಅವರ ಚಟುವಟಿಕೆ ತಿಳಿಸಿದ್ದಾರೆ. ಈ ಪ್ರಕರಣವನ್ನು ಉನ್ನತಮಟ್ಟದ ತನಿಖೆಗೆ ಒಳಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಪ್ರತಿಮಾ ಜೋಗಿ, ಸಂತೋಷ್ ಶಿವಾಜಿ, ಕೆ.ವಿ. ಪ್ರವೀಣ್, ಮಂಜುಗೌಡ, ದೀಪು ಗೌಡ, ಮುರಳಿ, ಅಜಿತ್ ಇನ್ನಿತರರು ಹಾಜರಿದ್ದರು.

- - -

೯ಕೆ.ಎಸ್.ಎ.ಜಿ.೩

Share this article