ಧಾರವಾಡ:
ಜನತಾ ಜನಾರ್ದನನ ಆಶೀರ್ವಾದದಿಂದ ಮತ್ತೊಮ್ಮೆ ಗೆಲುವು ಸಾಧಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಶಯ ವ್ಯಕ್ತಪಡಿಸಿದರು.ಸೋಮವಾರ ನಾಮಪತ್ರ ಸಲ್ಲಿಕೆ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಡೆದ ಸಮೀಕ್ಷೆಗಳನ್ನು ಅವಲೋಕಿಸಿದಾಗ ಗೆಲವು ನಿಶ್ಚಿತವಾಗಿದೆ. ಜೊತೆಗೆ ಈ ಹಿಂದಿನ ದಾಖಲೆಗಳನ್ನು ಮರಿದು ಗೆಲವು ಸಾಧಿಸುತ್ತೇನೆ ಎಂಬ ಅಚಲತೆ ಇದೆ. ಆದರೆ, ಒಂದು ಟಿವಿ ಚಾನಲ್ ಮಾತ್ರ ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಿದೆ. ಬಹುಷ್ಯ ಆ ಚಾನಲ್ ಕಾಂಗ್ರೆಸ್ ಸಮೀಕ್ಷೆಯನ್ನು ತೋರಿಸಿರಬೇಕು ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜೋಶಿ, ನಾನು ಸನಾತನ ಧರ್ಮದಲ್ಲಿ ನಂಬಿಕೆ ಇಟ್ಟವನು. ಮೊದಲಿನಿಂದಲೂ ಮಠ-ಮಂದಿರಗಳಿಗೆ ಭೇಟಿ ನೀಡುತ್ತೇನೆ. ಇದಕ್ಕೆ ಟೆಂಪಲ್ ರನ್ ಅನ್ನೋದಿಲ್ಲ. ದೇವರ ದರ್ಶನ ಎನ್ನುತ್ತಾರೆ. ಮದುವೆ ಕಾರ್ಯದಲ್ಲಿ ಮೊದಲು ದೇವತಾ ಕಾರ್ಯ ಮಾಡುತ್ತಾರೆ. ಅದೇ ರೀತಿ ನಾನು ನಾಮಪತ್ರ ಸಲ್ಲಿಕೆಗೆ ಮುನ್ನ ದೇವರ ದರ್ಶನ ಪಡೆದಿದ್ದೇನೆ ಎಂದರು.ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದ್ದೇನೆ. ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಸೇರಿದಂತೆ ಪ್ರಭಾಕರಕೋರೆ, ವಿಜಯ ಸಂಕೇಶ್ವರ, ಸಿ.ಟಿ. ರವಿ ಸಹ ಸಾಥ್ ನೀಡಿದ್ದಾರೆ. ಜತೆಗೆ ಸ್ಥಳೀಯ ನಾಯಕರು ಅದ್ಧೂರಿಯಾಗಿ ಮೆರವಣಿಗೆ ಮಾಡಿದ್ದು ನನ್ನ ಗೆಲುವಿನ ಬಗ್ಗೆ ಪ್ರಶ್ನೆಯೇ ಇಲ್ಲ ಎಂದರು.
ಒಕ್ಕಲಿಗರ ಸಭೆಯಲ್ಲಿ ಡಿ.ಕೆ. ಶಿವಕುಮಾರ ಮುಖ್ಯಮಂತ್ರಿ ಕನಸು ವ್ಯಕ್ತಪಡಿಸಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಈ ಹಿಂದೆಯೂ ಅವರು ಈ ರೀತಿ ಆಸೆ ವ್ಯಕ್ತಪಡಿಸಿದ್ದರು. ಈ ಚುನಾವಣೆ ನಂತರ ಸರ್ಕಾರ ಪತನವಾಗುತ್ತದೆ. ಅವರ ಆಂತರಿಕ ಕಚ್ಚಾಟದಿಂದಲೇ ಸರ್ಕಾರ ಬೀಳುತ್ತದೆ. ಅವರವರ ನಡುವೆ ಸಮನ್ವಯ ಕೊರತೆಯಿದೆ. ಹೀಗಾಗಿ ಅವರು ಮುಖ್ಯಮಂತ್ರಿ ಆಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಜೋಶಿ ಹೇಳಿದರು.