ಉದ್ಘಾಟನೆ ಭಾಗ್ಯ ಕಾಣದ ವಿಜಯನಗರ ಜಿಲ್ಲಾಸ್ಪತ್ರೆ ಕಟ್ಟಡ

KannadaprabhaNewsNetwork |  
Published : Nov 21, 2025, 02:15 AM IST
20ಎಚ್‌ಪಿಟಿ1- ಹೊಸಪೇಟೆಯಲ್ಲಿ ನಿರ್ಮಾಣಗೊಂಡಿರುವ ವಿಜಯನಗರ ಜಿಲ್ಲಾಸ್ಪತ್ರೆ ನೂತನ ಕಟ್ಟಡದ ಹೊರ ನೋಟ. | Kannada Prabha

ಸಾರಾಂಶ

ವಿಜಯನಗರ ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಾಣಗೊಂಡಿದ್ದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ.

ಕೃಷ್ಣ ಲಮಾಣಿ

ಹೊಸಪೇಟೆ: ವಿಜಯನಗರ ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಾಣಗೊಂಡಿದ್ದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಇದರಿಂದ ಜಿಲ್ಲೆ ಜನರು ಕೊಪ್ಪಳ, ಬಳ್ಳಾರಿ, ದಾವಣಗೆರೆ, ಹಾವೇರಿ ಜಿಲ್ಲೆಗಳಿಗೆ ಚಿಕಿತ್ಸೆಗಾಗಿ ಅಲೆದಾಡುವ ಸ್ಥಿತಿ ಇದೆ.

ಬರೋಬ್ಬರಿ ₹124 ಕೋಟಿ ವೆಚ್ಚದಲ್ಲಿ ಬೆಂಗಳೂರು ಮೂಲದ ಗುತ್ತಿಗೆ ಕಂಪನಿ ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಾಣ ಮಾಡಿದೆ. ಹೀಗಿದ್ದರೂ ರಾಜ್ಯ ಸರ್ಕಾರ ಮಾತ್ರ ಇದುವರೆಗೆ ಉದ್ಘಾಟನೆ ಮಾಡಿಲ್ಲ. ಇದರಿಂದ ಸೌಲಭ್ಯ ಇದ್ದರೂ ಜಿಲ್ಲೆ ಜನರು ಚಿಕಿತ್ಸೆಗಾಗಿ ಪರ ಜಿಲ್ಲೆಗಳತ್ತ ತಿರುಗಾಡುತ್ತಾರೆ.

ಸುಸಜ್ಜಿತ ಕಟ್ಟಡ:

ನಗರದ ಹೊರವಲಯದ ಬೈಪಾಸ್‌ ರಸ್ತೆ ಬಳಿ ಐದು ಎಕರೆ ವಿಶಾಲ ಜಾಗದಲ್ಲಿ ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ ಕಟ್ಟಡ ಈಗ ಹೈಟೆಕ್‌ ಮಾದರಿಯಲ್ಲಿ ನಿರ್ಮಾಣಗೊಂಡಿದ್ದರೂ ಚಿಕಿತ್ಸೆಗಾಗಿ ಜಿಲ್ಲೆಯಿಂದ ಜಿಲ್ಲೆಗೆ ವಿಜಯನಗರ ಜಿಲ್ಲೆ ಜನರು ತಿರುಗಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಈ ಆಸ್ಪತ್ರೆ ಕಟ್ಟಡದಲ್ಲಿ 300 ಬೆಡ್‌ ನಿರ್ಮಾಣ ಮಾಡಲಾಗಿದೆ. ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಾಣಗೊಂಡಿದ್ದರೂ ಸಂಬಂಧಿಸಿದ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಮತ್ತು ಸರ್ಕಾರದ ನಿರ್ಲಕ್ಷ್ಯದಿಂದ ಈ ಕಟ್ಟಡ ಉದ್ಘಾಟನೆ ಭಾಗ್ಯ ಕಂಡಿಲ್ಲ ಎಂಬುದು ಜಿಲ್ಲೆ ಜನರ ಆರೋಪವಾಗಿದೆ.

ಕಟ್ಟಡದಲ್ಲಿ ಏನೇನಿದೆ?

ಈ ಕಟ್ಟಡದಲ್ಲಿ ಒಪಿಡಿ ವಿಭಾಗ, ಹೆರಿಗೆ ವಾರ್ಡ್‌ಗಳು, ಕ್ಯಾನ್ಸರ್‌ ರೋಗಿಗಳ ವಾರ್ಡ್‌, ಇಎನ್‌ಟಿ ವಿಭಾಗ, ಹೃದಯ ಸಂಬಂಧಿ ಚಿಕಿತ್ಸಾ ವಿಭಾಗ, ರಕ್ತ ಭಂಡಾರ, ಔಷಧಾಲಯ ಸೇರಿದಂತೆ ಒಟ್ಟು 17 ವಿಭಾಗಗಳನ್ನು ನಿರ್ಮಾಣ ಮಾಡಲಾಗಿದೆ. ಸುಸಜ್ಜಿತ ಹಾಗ ವ್ಯವಸ್ಥಿತವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ ಕಟ್ಟಡದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಕೂಡ ಮಾಡಲಾಗಿದೆ. ಜಿಲ್ಲಾಸ್ಪತ್ರೆ ಕಟ್ಟಡದಲ್ಲಿ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ವಿಶ್ರಮಿಸಲು ವ್ಯವಸ್ಥೆ ಕೂಡ ಮಾಡಲಾಗಿದೆ. ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸ್ವತಃ ಆಗಮಿಸಿ ಈ ಕಟ್ಟಡ ಪರಿಶೀಲಿಸಿದ್ದಾರೆ. ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ಕೂಡ ಕಟ್ಟಡ ಪರಿಶೀಲಿಸಿದ್ದಾರೆ. ಶಾಸಕ ಎಚ್‌.ಆರ್‌. ಗವಿಯಪ್ಪನವರು ಕೂಡ ಜಿಲ್ಲಾಸ್ಪತ್ರೆ ರಸ್ತೆ ನಿರ್ಮಾಣ ಮತ್ತು ಕಂಪೌಂಡ್‌ ನಿರ್ಮಾಣಕ್ಕೂ ವಿಶೇಷ ಆಸಕ್ತಿ ವಹಿಸಿ ಅನುದಾನ ಕೂಡ ಒದಗಿಸಿದ್ದಾರೆ. ಇನ್ನು ಕೆಕೆಆರ್‌ಡಿಬಿಯಿಂದ ವಿಶೇಷ ಅನುದಾನ ಕೂಡ ಕೊಡಿಸಿದ್ದಾರೆ. ಕಟ್ಟಡ ಮಾತ್ರ ಉದ್ಘಾಟನೆ ಭಾಗ್ಯ ಕಂಡಿಲ್ಲ.

ಜಿಲ್ಲೆಯ ಆರು ತಾಲೂಕಿನ ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಾಣಗೊಂಡಿದ್ದರೂ ಉದ್ಘಾಟನೆ ಮಾತ್ರ ಮಾಡಿಸುತ್ತಿಲ್ಲ. ಜಿಲ್ಲೆ ಜನರು ಅಪಘಾತ ಸೇರಿದಂತೆ ಗಂಭೀರ ಕಾಯಿಲೆಗಳಿಗಾಗಿ ಕೊಪ್ಪಳ, ಬಳ್ಳಾರಿ, ದಾವಣಗೆರೆ, ಹಾವೇರಿ, ಹುಬ್ಬಳ್ಳಿಗೆ ತೆರಳುವ ಸ್ಥಿತಿ ನಿರ್ಮಾಣಗೊಂಡಿದೆ. ಹೀಗಿದ್ದರೂ ಜಿಲ್ಲೆ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರದೇ ಸುಮ್ಮನಾಗುತ್ತಿದ್ದಾರೆ.

433 ಸಿಬ್ಬಂದಿ ಅಗತ್ಯ:

ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಾಣಗೊಂಡಿದೆ. ಅದಕ್ಕೆ ತಕ್ಕಂತೆ ವೈದ್ಯಕೀಯ ಸಲಕರಣೆಗಳು ಹಾಗೂ ಸಿಬ್ಬಂದಿ ನೇಮಕ ಮಾಡಬೇಕಿದೆ. ಜಿಲ್ಲಾಸ್ಪತ್ರೆಯಲ್ಲಿ 80 ನುರಿತ ವೈದ್ಯರು, 232 ಸ್ಟಾಪ್‌ ನರ್ಸ್‌, 39 ಸಹಾಯಕ ಸಿಬ್ಬಂದಿ, ನಾಲ್ವರು ಆಡಳಿತ ಸಿಬ್ಬಂದಿ, 70 ಜನ ತಂತ್ರಜ್ಞ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಒಟ್ಟು 433 ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕಿದೆ. ಈ ಕುರಿತು ಜಿಲ್ಲಾಡಳಿತ ಕೂಡ ಸರ್ಕಾರಕ್ಕೆ ಪತ್ರ ಬರೆದಿದೆ. ಆದರೆ, ₹120 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಂಡಿದ್ದರೂ ಉದ್ಘಾಟನೆ ಮಾಡಲು ಸರ್ಕಾರ ಹಿಂದೇಟು ಹಾಕುತ್ತಿದೆ.

ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಾಣಗೊಂಡಿದೆ. ಆದರೆ ವೈದ್ಯರು ಸೇರಿದಂತೆ ಸಿಬ್ಬಂದಿ ನಿಯೋಜನೆ ಮತ್ತು ವೈದ್ಯಕೀಯ ಸಲಕರಣೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ.

ಜಿಲ್ಲೆ ಜನರು ಆಸ್ಪತ್ರೆಗಾಗಿ ಬೇರೆ ಜಿಲ್ಲೆಗಳಿಗೆ ಅಲೆದಾಡುವ ಸ್ಥಿತಿ ಇದೆ. ಸರ್ಕಾರ ಮೊದಲು ಜಿಲ್ಲಾಸ್ಪತ್ರೆ ಕಟ್ಟಡ ಉದ್ಘಾಟನೆ ಮಾಡಬೇಕು. ಈ ಕಾರ್ಯವನ್ನು ಬೇಗನೇ ಮಾಡಬೇಕಿದೆ ಎನ್ನುತ್ತಾರೆ ಅಲೆಮಾರಿ ಸಮಾಜದ ಮುಖಂಡ ಸಣ್ಣಮಾರೆಪ್ಪ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಷ್ಟ್ರಧ್ವಜ ತಯಾರಿಸ್ತಿ ದ್ದ ಕೈಗಳಲ್ಲೀಗ ಕೆಲಸವಿಲ್ಲ!
ಬೇಡ್ತಿಗಾಗಿ ಪಶ್ಚಿಮ ಘಟ್ಟ- ಬಯಲುಸೀಮೆ ಜಲ ಸಂಘರ್ಷ!