ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಶಸ್ತಿ ಸ್ವೀಕರಿಸಲು ದುಬೈಗೆ ತೆರಳಿದ್ದ 61 ಮಂದಿ ಕನ್ನಡಿಗರ ತಂಡ ವಾಪಸ್ ಬರಲಾಗದೆ ದುಬೈನಲ್ಲೇ ಸಿಲುಕಿರುವ ಬಗ್ಗೆ ವಿಜಯೇಂದ್ರ ಮಾಹಿತಿ ಪಡೆದರು. ಆತಂಕದಲ್ಲಿರುವ ಕನ್ನಡಿಗರನ್ನು ಕರ್ನಾಟಕಕ್ಕೆ ಕರೆತರುವ ಸಂಬಂಧ ಕೇಂದ್ರ ಸರ್ಕಾರದೊಂದಿಗೆ ಮಾತನಾಡುವ ಭರವಸೆ ನೀಡಿದರು.
ಇದೇ ವೇಳೆ ಅರಸೀಕೆರೆ ಮೂಲದ ಐದು ಮಂದಿ ಮಾತನಾಡಿ ತಾವು ಕಳೆದ ಏಳು ದಿನಗಳಿಂದ ದುಬೈನಲ್ಲೇ ಇರುವುದಾಗಿ ಹೇಳಿಕೊಂಡರು. ಸದ್ಯ ಹೋಟೆಲ್ವೊಂದರಲ್ಲಿ ತಂಗಿದ್ದು, ಇವತ್ತು ರಾತ್ರಿ ಇದ್ದ ವಿಮಾನವೂ ರದ್ದಾಗಿರುವ ವಿಚಾರ ತಿಳಿಸಿ ಆತಂಕ ಹಂಚಿಕೊಂಡರು.ಇದಕ್ಕೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಪ್ರಧಾನಿ ಮೋದಿ ಅವರು ಭಾರತೀಯರನ್ನು ವಾಪಸ್ ಕರೆತರಲು ಗಮನ ಹರಿಸಿದ್ದಾರೆ. ಈ ಹಿಂದೆ ಉಕ್ರೇನ್ನಲ್ಲಿ ಇಂಥ ಸಮಸ್ಯೆಯಾದಾಗ ಕೇಂದ್ರ ಸರ್ಕಾರ ಸ್ಪಂದಿಸಿ, ಅಲ್ಲಿ ಸಿಲುಕ್ಕಿದ್ದ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ವ್ಯವಸ್ಥೆ ಮಾಡಿತ್ತು. ದೆಹಲಿಯಲ್ಲಿ ಸಂಬಂಧಿಸಿದವರೊಂದಿಗೆ ನಾನೂ ಮಾತನಾಡುವೆ. ನಿಮ್ಮನ್ನು ಸುರಕ್ಷಿತವಾಗಿ ಕರ್ನಾಟಕಕ್ಕೆ ವಾಪಸ್ ಕರೆತರಲು ಕ್ರಮ ಕೈಗೊಳ್ಳುವಂತೆ ಕೋರುತ್ತೇನೆ. ನೀವು ಯಾವುದೇ ಆತಂಕ ಪಡಬೇಡಿ ಎಂದು ಧೈರ್ಯ ತುಂಬಿದರು.