ಶಿರಸಿ ಕುಮಟಾ ರಾಷ್ಟ್ರೀಯ ಹೆದ್ದಾರಿ ೭೬೬ ಇ ಯಲ್ಲಿ ಡಿ. ೨ರಿಂದ ವಾಹನ ಸಂಚಾರವನ್ನು ರದ್ದುಗೊಳಿಸಿ ಆದೇಶ ಮಾಡಲಾಗಿದೆ.
ಶಿರಸಿ: ಶಿರಸಿಯಿಂದ ಅಂಕೋಲಾ, ಕಾರವಾರಕ್ಕೆ ತೆರಳಲು ದೇವನಳ್ಳಿ, ವಡ್ಡಿ ಘಟ್ಟದ ಮೂಲಕ ಸಾರಿಗೆ ಬಸ್ಸಿನ ವ್ಯವಸ್ಥೆ ಕಲ್ಪಿಸುವಂತೆ ಶಾಸಕ ಭೀಮಣ್ಣ ನಾಯ್ಕ ಅವರಲ್ಲಿ ಮತ್ತಿಘಟ್ಟ ಭಾಗದ ನಾಗರಿಕರು ಶನಿವಾರ ಮನವಿ ಸಲ್ಲಿಸಿ, ಆಗ್ರಹಿಸಿದರು.ಶಿರಸಿ ಕುಮಟಾ ರಾಷ್ಟ್ರೀಯ ಹೆದ್ದಾರಿ ೭೬೬ ಇ ಯಲ್ಲಿ ಡಿ. ೨ರಿಂದ ವಾಹನ ಸಂಚಾರವನ್ನು ರದ್ದುಗೊಳಿಸಿ ಆದೇಶ ಮಾಡಲಾಗಿದೆ. ಹಾಗೆಯೇ ಬದಲಿ ಮಾರ್ಗವಾಗಿ ಶಿರಸಿ ಸಿದ್ದಾಪುರ ಕುಮಟಾ ಶಿರಸಿ ಯಲ್ಲಾಪುರ ಕಾರವಾರವನ್ನೂ ಸೂಚಿಸಲಾಗಿದೆ. ಆದರೆ ಶಿರಸಿ, ಯಲ್ಲಾಪುರ, ಕಾರವಾರ ರಸ್ತೆಯು ಸುಮಾರು ೧೬೦ ಕಿಮೀನಷ್ಟು ದೀರ್ಘವಾಗಿದೆ. ಇದಕ್ಕೆ ಬದಲಾಗಿ ಶಿರಸಿ ದೇವನಳ್ಳಿ ವಡ್ಡಿ, ಹೊಸಕಂಬಿ ಅಗಸೂರ ಮಾರ್ಗವಾಗಿ ಅಂಕೋಲಾ, ಯಾಣ ಕಾರವಾರಕ್ಕೆ ಪ್ರಯಾಣ ಮಾಡಿದರೆ ಸುಮಾರು ೫೦ ಕಿಮೀ ದೂರ ಕಡಿಮೆಯಾಗುತ್ತದೆ ಎಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
ಈಗಾಗಲೇ ರಾಜ್ಯ ಹೆದ್ದಾರಿ ೧೪೩ರಲ್ಲಿ ಶಿರಸಿ- ಗೋಕರ್ಣ ಬಸ್ಸು ಸಂಚಾರ ಮಾಡಲಾಗಿದೆ. ಶಿರಸಿ, ದೇವನಳ್ಳಿ, ವಡ್ಡಿ, ಹೊಸಕಂಬಿ ಅಗಸೂರ ಮಾರ್ಗವಾಗಿ, ಅಂಕೋಲಾ, ಕಾರವಾರಕ್ಕೆ ಕೆಲವು ಬಸ್ಗಳನ್ನಾದರೂ ಬಿಟ್ಟರೆ ಪ್ರಯಾಣಿಕರಿಗೆ ಅನುಕೂಲ ಆಗಲಿದೆ ಎಂದು ವಿವರಿಸಲಾಗಿದೆ.ಈ ವೇಳೆ ಜಿ.ಎಂ. ಶೆಟ್ಟಿ ಚನ್ನಗಾರ, ರಮಾನಂದ ನಾಯ್ಕ ಅಚವೆ, ಎನ್.ವಿ. ವೈದ್ಯ ಮತ್ತಿಘಟ್ಟ, ವಿ.ಆರ್. ಹೆಗಡೆ ಮತ್ತಿಘಟ್ಟ ಇತರರು ಇದ್ದರು.ಇದೇ ವೇಳೆ ಶಾಸಕ ಭೀಮಣ್ಣ ನಾಯ್ಕ ಅವರಲ್ಲಿ ತಾಳಗುಪ್ಪ ರೈಲ್ವೆ ಸ್ಟೇಶನ್ಗೆ ವಿಶೇಷ ಟ್ರೇನ್ ಬಸ್ ಬಿಡುವಂತೆ ಒತ್ತಾಯ ಕೇಳಿ ಬಂತು. ಶಿರಸಿಯಿಂದ ತಾಳಗುಪ್ಪ ರೈಲ್ವೆ ಸಮಯಕ್ಕೆ ಹೋಗಲು ಬಸ್ಸು ಹಾಗೂ ಮರುದಿನ ಟ್ರೇನ್ ಬಂದ ಬಳಿಕ ಶಿರಸಿ ತನಕ ತೆರಳಲು ಬಸ್ ಸೌಲಭ್ಯ ಬೇಕಾಗಿದೆ. ಈಗಿನ ಸಾರಿಗೆಯಲ್ಲಿ ಟ್ರೇನ್ ಸೌಲಭ್ಯ ಪಡೆಯಲು ಅನಾನುಕೂಲತೆ ಉಂಟಾಗುತ್ತಿವೆ ಎಂದೂ ಗಮನಕ್ಕೆ ತರಲಾಯಿತು. ಇದಕ್ಕೆ ಸ್ಪಂದಿಸಿದ ಭೀಮಣ್ಣ, ಈವೆರಡೂ ಮಾರ್ಗ ಸೌಲಭ್ಯ ಅಗತ್ಯವಿದ್ದು, ಈ ಕುರಿತು ಸಾರಿಗೆ ಡಿಸಿ ಅವರ ಜತೆ ಮಾತನಾಡುವುದಾಗಿ ಭರವಸೆ ನೀಡಿದರು.
೩ರಿಂದ ಕಿರವತ್ತಿಯಲ್ಲಿ ಹತ್ತಿ ಮಾರಾಟದ ಟೆಂಡರ್
ಯಲ್ಲಾಪುರ: ತಾಲೂಕಿನ ಕಿರವತ್ತಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪ- ಮಾರುಕಟ್ಟೆಯಲ್ಲಿ ಡಿ. ೩ರಿಂದ ವಾರದ ಪ್ರತಿ ಮಂಗಳವಾರ ದಿನ ಹತ್ತಿ ಟೆಂಡರ್ ಮಾರಾಟ ವ್ಯವಹಾರ ಮಾಡಲು ಉದ್ದೇಶಿಸಲಾಗಿದೆ.ಟೆಂಡರ್ ಪದ್ಧತಿಯಲ್ಲಿ ಹತ್ತಿ ಮಾರಾಟವಾಗುತ್ತಿದ್ದು, ದಲಾಲರು ವಿದ್ಯುನ್ಮಾನ ತೂಕದ ಯಂತ್ರವನ್ನು ಉಪಯೋಗಿಸುತ್ತಿದ್ದಾರೆ. ರೈತರು ಹತ್ತಿಯನ್ನು ಟೆಂಡರಿಗೆ ಇಡಲು ಮತ್ತು ವ್ಯಾಪಾರದ ಪೂರ್ವದಲ್ಲಿ ತೂಕಕ್ಕೆ ಅನುಕೂಲವಾಗುವಂತೆ ಮಾಡಲು ಪ್ರತಿ ಮಂಗಳವಾರ ನಡೆಯುವ ಟೆಂಡರಿಗೆ ಮುಂಚಿತವಾಗಿ ಪ್ರತಿ ಸೋಮವಾರ ಸಂಜೆಯೊಳಗೆ ತಮ್ಮ ಹುಟ್ಟುವಳಿಯನ್ನು ತಂದು ದಲಾಲರ ಅಂಗಡಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಸಮಿತಿ ಆಡಳಿತಾಧಿಕಾರಿಗಳು ಹಾಗೂ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.