ಕಾಂಗ್ರೆಸ್‌ ದುರಾಡಳಿತಕ್ಕೆ ವಿನಯ ಸಾವು ಸಾಕ್ಷಿ

KannadaprabhaNewsNetwork | Published : Apr 6, 2025 1:47 AM

ಸಾರಾಂಶ

ಕೊಡಗು ಸಮಸ್ಯೆ ಹಾಗೂ ಪರಿಹಾರ ಎಂಬ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಅಡ್ಮಿನ್ ಇದ್ದ ಒಂದೇ ಕಾರಣಕ್ಕೆ ಪೋಸ್ಟ್ ಮಾಡಿದವರನ್ನು ಬಿಟ್ಟು ವಿನಯ ಸೋಮಯ್ಯ ಅವರನ್ನು ಪೊಲೀಸರು ಬಂಧಿಸಿ, ಎಫ್‌ಐಆರ್‌ ದಾಖಲಿಸಿದ್ದಾರೆ. ಅಲ್ಲಿನ ಪೊಲೀಸರು ಸಹ ಕಾಂಗ್ರೆಸ್ ಶಾಸಕರ ಒತ್ತಡ ಎಂದು ಒಪ್ಪಿಕೊಂಡಿರುವ ಹೇಳಿಕೆ ಬಂದಿದೆ.

ಕುಕನೂರು:

ರಾಜ್ಯದಲ್ಲಿ ಪೊಲೀಸ್ ಇಲಾಖೆ ತನ್ನ ಕರ್ತವ್ಯ ಮರೆತಿದ್ದು ಸರ್ಕಾರ ದುರಾಡಳಿತ ನಡೆಸುತ್ತಿದೆ. ಇದಕ್ಕೆ ಬಿಜೆಪಿ ಕಾರ್ಯಕರ್ತ ವಿನಯ ಸೋಮಯ್ಯ ಸಾವು ಸಾಕ್ಷಿಯಾಗಿದೆ. ಅವರ ಆತ್ಮಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಮಾಜಿ ಸಚಿವ ಹಾಲಪ್ಪ ಆಚಾರ ಒತ್ತಾಯಿಸಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊಡಗು ಸಮಸ್ಯೆ ಹಾಗೂ ಪರಿಹಾರ ಎಂಬ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಅಡ್ಮಿನ್ ಇದ್ದ ಒಂದೇ ಕಾರಣಕ್ಕೆ ಪೋಸ್ಟ್ ಮಾಡಿದವರನ್ನು ಬಿಟ್ಟು ವಿನಯ ಸೋಮಯ್ಯ ಅವರನ್ನು ಪೊಲೀಸರು ಬಂಧಿಸಿ, ಎಫ್‌ಐಆರ್‌ ದಾಖಲಿಸಿದ್ದಾರೆ. ಅಲ್ಲಿನ ಪೊಲೀಸರು ಸಹ ಕಾಂಗ್ರೆಸ್ ಶಾಸಕರ ಒತ್ತಡ ಎಂದು ಒಪ್ಪಿಕೊಂಡಿರುವ ಹೇಳಿಕೆ ಬಂದಿದೆ. ಮುಖಂಡರು ಹಾಗೂ ಶಾಸಕ ಪೊನ್ನಣ್ಣ ನವರ ಕಿರುಕುಳವೇ ವಿನಯ ಸಾವಿಗೆ ಕಾರಣ ಆಗಿದೆ. ರಾಜಕೀಯ ದ್ವೇಷದಿಂದ ಅವರ ಸಾವಾಗಿದೆ ಎಂದರು.

ಸರ್ಕಾರ ಕೂಡಲೇ ಆರೋಪಿಗಳನ್ನು ಬಂಧಿಸಿ ಶಿಕ್ಷೆ ವಿಧಿಸಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಮಾಯಕರ ರಕ್ಷಣೆಗೆ ನಿಲ್ಲಬೇಕು. ಗೃಹ ಸಚಿವರು ಮೃತರ ಪ್ರಕರಣ ತನಿಖೆಗೆ ಒಳಪಡಿಸಿ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು. ಪೊಲೀಸ್ ಇಲಾಖೆ ಸಹ ವಿನಯ್ ಡೆತ್‌ನೋಟ್‌ನಲ್ಲಿ ಬರೆದಿದ್ದ ನಾಲ್ವರ ಹೆಸರು ಬಿಟ್ಟು ಒಬ್ಬರ ಹೆಸರು ಮಾತ್ರ ತೆಗೆದುಕೊಂಡು ಸರ್ಕಾರದ ಪರ ಕೆಲಸ ಮಾಡಿದೆ. ಅವರು ಸಹ ಕಾಂಗ್ರೆಸ್ ಕೈಗೊಂಬೆಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾದಗಿರಿ ಜಿಲ್ಲೆಯ ಪಿಎಸ್ಐ ಆತ್ಮಹತ್ಯೆ ಪ್ರಕರಣಕ್ಕೆ ಈ ವರೆಗೂ ನ್ಯಾಯ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಹಾಲಪ್ಪ ಆಚಾರ್‌, ಕೊಪ್ಪಳ ವಿಶ್ವವಿದ್ಯಾಲಯವನ್ನು ಹೋರಾಟ ಮಾಡಿ ಜಿಲ್ಲೆಗೆ ತಂದಿದ್ದೇನೆ. ಗ್ಯಾರಂಟಿ ಯೋಜನೆ ನೆಪದಲ್ಲಿ ವಿವಿ ಮುಚ್ಚಬಾರದು. ಅನುದಾನದ ಕೊರತೆ ಹೇಳುವುದು ಸರಿಯಲ್ಲ. ಇದರಿಂದ ಶೈಕ್ಷಣಿಕ ಹಿನ್ನಡೆ ಆಗಲಿದೆ ಎಂದರು.

ವಕ್ಫ್‌ ಮಸೂದೆ ಜಾರಿಯಿಂದ ಭೂ ಕಬಳಿಕೆಗೆ ತಡೆ ಬೀಳಲಿದೆ ಎಂದ ಅವರು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಶಿಸ್ತಿನ ಸಲುವಾಗಿ ಬಿಜೆಪಿ ಉಚ್ಚಾಟಿಸಿದೆ. ಅವರು ಸಹ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ಎಂದರು.

ಈ ವೇಳೆ ಯಲಬುರ್ಗಾ ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ, ಸಿ.ಎಚ್. ಪೊಪಾ, ಶರಣಪ್ಪ ಬಣ್ಣದಬಾವಿ, ವೀರಣ್ಣ ಹುಬ್ಬಳ್ಳಿ, ಬಸವನಗೌಡ ತೊಂಡಿಹಾಳ, ಶಂಭು ಜೋಳದ, ಶಿವಕುಮಾರ ನಾಗಲಾಪುರಮಠ, ಕರಬಸಯ್ಯ ಬಿನ್ನಾಳ, ಪಪಂ ಸದಸ್ಯರಾದ ಬಾಲರಾಜ ಗಾಳಿ, ಮಲ್ಲಿಕಾರ್ಜುನ ಚೌಧರಿ, ಸಿದ್ಲಿಂಗಯ್ಯ ಉಳ್ಳಾಗಡ್ಡಿ, ಕನಕಪ್ಪ ಬ್ಯಾಡರ, ವೀರೇಶ ಸಬರದ, ಬಸವರಾಜ ಹಾಳಕೇರಿ, ಮಹಾಂತೇಶ ಹೂಗಾರ ಇದ್ದರು.

Share this article