ಚಾಮರಾಜನಗರದಲ್ಲಿ ದೊಡ್ಡರಾಯಪೇಟೆ ಗ್ರಾಮದ ಶಂಕರಪ್ಪ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ಹೊಂಡರಬಾಳು ಗ್ರಾಮದ ಸರ್ವೆ 167ರಲ್ಲಿ ದೊಡ್ಡರಾಯಪೇಟೆ ಗ್ರಾಮದ ಸುಮಾರು 86 ಮಂದಿ ದಲಿತರಿಗೆ ಸಾಗುವಳಿ ನೀಡಿರುವ ಜಮೀನು ಗುರುತಿಸಿಕೊಡಿ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದರೆ ತಹಸೀಲ್ದಾರ್ ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘಿಸಿದ್ದಾರೆ ಎಂದು ದೊಡ್ಡರಾಯಪೇಟೆ ಗ್ರಾಮದ ಶಂಕರಪ್ಪ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೊಂಡರಬಾಳು ಗ್ರಾಮದ ಸರ್ವೇ ನಂ.167 ರಲ್ಲಿ ದೊಡ್ಡರಾಯಪೇಟೆ ಗ್ರಾಮದ ಹರಿಜನ ಮತದ ರಂಗಯ್ಯ ಬಿನ್ ಮುದ್ದಯ್ಯ(ಮಾದಯ್ಯ) ರವರಿಗೆ ದರಖಾಸ್ತು ಮೂಲಕ 4 ಎಕರೆ ಜಮೀನು ಜೆ.ಎಂ.ಎಚ್ 109 53.54 ರಲ್ಲಿ ಮಂಜೂರಾಗಿದೆ ಎಂದರು.ಇದರ ನಕಲು ಸಾಗುವಳಿ ಪತ್ರಗಳ ಜೆರಾಕ್ಸ್ ಪ್ರತಿಯನ್ನು ದೃಢೀಕರಿಸಿ ನೀಡಲು ಮೇ 25,2024 ರಂದು ಮಾಹಿತಿ ಹಕ್ಕು ಕಾಯಿದೆ 2005 6(1) ಹಾಗೂ 7(1) ಕಾಯಿದೆಯಡಿ ಮಾಹಿತಿ ಕೇಳಲಾಗಿತ್ತು. ತಹಸೀಲ್ದಾರ್ ಹಾಗೂ ಮಾಹಿತಿ ಅಧಿಕಾರಿ ಸರ್ವೇ ನಂ.167 ರಲ್ಲಿ ಮಂಜೂರಾಗಿರುವ ಕಡತವು ಅಭಿಲೇಖಾಲಯದಲ್ಲಿ ಲಭ್ಯವಿರುವುದಿಲ್ಲ. ಆದ್ದರಿಂದ ಸಾಗುವಳಿ ನಕಲು ನೀಡಲು ರಹವಿರುವುದಿಲ್ಲ ಎಂದು ಹಿಂಬರಹವನ್ನು ಜೂ.20-2024 ರಂದು ನೀಡಿದ್ದಾರೆ, ಇದೇ ಸಮಸ್ಯೆ ಸುಮಾರು 25ಕ್ಕೂ ಹೆಚ್ಚು ಮಂದಿಗೆ ಆಗಿದೆ ಎಂದರು.ಮಂಜೂರಾಗಿರುವ ಆದೇಶದ ಪ್ರತಿ ಹಾಗೂ ಆರ್.ಟಿ.ಸಿ ನಮ್ಮ ಹತ್ತಿರ ಲಭ್ಯವಿದ್ದು, ಇದನ್ನು ಮೇಲ್ಮನವಿ ಪ್ರಾಧೀಕಾರಿಗಳು ಹಾಗೂ ಕೊಳ್ಳೇಗಾಲ ಉಪವಿಭಾಗ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯಿದೆ 19(1) ರಡಿ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಸಂಬಂಧ ಉಪ ವಿಭಾಗ ಅಧಿಕಾರಿಗಳು ಈ ಪ್ರಕರಣದ ವಿಚಾರಣೆ ನಡಸಿ ಮೇಲ್ಮನವಿದಾರರ ಮನವಿಯನ್ನು ಮತ್ತೊಮ್ಮೆ ಪರಿಶೀಲಿಸಿ ಮಾಹಿತಿ ನೀಡಲು ತಹಶೀಲ್ದಾರ್ಗೆ ಸೂಚಿಸಿ ತಮ್ಮ ಬಹಿರಂಗ ಘನ ನ್ಯಾಯಾಲದಲ್ಲಿ ಆದೇಶಿಸಿ ಘೋಷಿಸಿದರು.ತಹಸೀಲ್ದಾರ್ ಹಾಗೂ ಮಾಹಿತಿ ಅಧಿಕಾರಿ ಸುಮಾರು 5ವರೆ ತಿಂಗಳಾದರೂ ಮಾಹಿತಿ ನೀಡದೇ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿ ನನಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ದೂರಿದರು. ಜಿಲ್ಲಾಧಿಕಾರಿ ಅವರಿಗೆ ಉಪ ವಿಭಾಗ ಅಧಿಕಾರಿಗಳು ಆದೇಶವನ್ನು ಉಲ್ಲಂಘನೆ ಮಾಡಿರುವ ಬಗ್ಗೆ 19(1)ರಡಿ ಮಾಹಿತಿ ಹಕ್ಕು ಕಾಯಿದೆ ಸಂಬಧಪಟ್ಟ ದಾಖಲೆಯನ್ನು ಲಗತ್ತಿಸಿ ಜಿಲ್ಲಾಧಿಕಾರಿಗಳಿಗೂ ಅರ್ಜಿ ನೀಡಲಾಗಿತ್ತು. ಈ ಸಂಬಂಧ ಮಾನ್ಯ ಜಿಲ್ಲಾಧಿಕಾರಿಗಳು ಅರ್ಜಿದಾರರು ಕೋರಿರುವ ಮಾಹಿತಿಯನ್ನು ನೀಡಲು ತಕ್ಷಣ ಪತ್ರ ತಲುಪಿದ 3 ದಿನದೊಳಗೆ ಅರ್ಜಿದಾರರಿಗೆ ಸೂಕ್ತ ಮಾಹಿತಿ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಸೂಚಿಸಿದ್ದರೂ ತಹಸೀಲ್ದಾರ್ ಮಾಹಿತಿ ನೀಡದೇ ಜಿಲ್ಲಾಧಿಕಾರಿ ಆದೇಶವನ್ನು ಸಹ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದರು. ತಕ್ಷಣ ಕ್ರಮಕೈಗೊಂಡು ನಾವು ಸಾಗುವಳಿ ಮಾಡಲು ಜಾಗ ಗುರುತಿಸಿಕೊಡದಿದ್ದರೆ ಧರಣಿ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಪರಿಸರವಾದಿ ಪುಣಜನೂರು ದೊರೆಸ್ವಾಮಿ ಮಾತನಾಡಿ, ಹೊಂಡರಬಾಳು ಗ್ರಾಮದ ಸರ್ವೇ ನಂ.167ರಲ್ಲಿ 1953-54 ನೇ ಸಾಲಿನಲ್ಲಿ ದೊಡ್ಡರಾಯಪೇಟೆ ಗ್ರಾಮದ 82 ಮಂದಿಗೆ ಸಾಗುವಳಿ ಚೀಟಿ ವಿತರಣೆಯಾಗಿದ್ದು, ಸಾಗುವಳಿ ಚೀಟಿವಿದ್ದು, ಖಾತೆಯಾಗಿದ್ದರೂ ಜಮೀನು ಗುರುತಿಸಿಕೊಟ್ಟಿಲ್ಲ. ಇದು ದಲಿತರಿಗೆ ಮಾಡಿದ ಅನ್ಯಾಯವಾಗಿದೆ. ತಹಸೀಲ್ದಾರ್ ಕಡತ ಇಲ್ಲ ಮಾಹಿತಿ ಕೊಡಲು ಬರುವುದಿಲ್ಲ ಎಂದು ಹಿಂಬರಹ ಕೊಟ್ಟಿರುವುದು ಅಕ್ಷಮ್ಯ ಅಪರಾಧ. ಮಾಹಿತಿ ಹಕ್ಕು ಉಲ್ಲಂಘನೆ ಮಾಡಿರುವ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕಾಗುತ್ತದೆ. ದಲಿತರ ಭೂಮಿ ಹಕ್ಕು ವಂಚನೆ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಸವರಾಜು, ಮಹದೇವಯ್ಯ, ಎನ್.ಲೋಕೇಶ್, ಗಿರೀಶ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.