ಲೋಕಾಯುಕ್ತ ಅಧಿಕಾರಿ ಚಂದ್ರಶೇಖರ್ ವಿರುದ್ದ ಕ್ರಮ ಕೈಗೊಳ್ಳಲಿ ಕನ್ನಡಪ್ರಭ ವಾರ್ತೆ ತಿಪಟೂರು
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ಬಗ್ಗೆ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಅತ್ಯಂತ ಕೀಳು ಭಾಷೆಯಲ್ಲಿ ಮಾತನಾಡಿರುವುದು ಖಡನೀಯ ಅದನ್ನು ನಾನು ಪ್ರಭಲವಾಗಿ ಖಂಡಿಸುತ್ತೇನೆ. ಒಬ್ಬ ಜನಪ್ರತಿನಿಧಿ ಅದರಲ್ಲೂ ಕೇಂದ್ರ ಸಚಿವರ ವಿರುದ್ದ ಈ ರೀತಿಯ ಕೀಳು ಮಟ್ಟದ ಪದ ಬಳಕೆ ಪ್ರಯೋಗ ಮಾಡಿರುವುದು ಅವರ ಹುದ್ದೆಯ ಘನತೆಗೆ ತಕ್ಕುದಲ್ಲ ಎಂದು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ನಗರದ ತಮ್ಮ ಗೃಹ ಕಛೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಡಿಜಿಪಿ ಚಂದ್ರಶೇಖರ್ ಮೇಲೆ ಅಧಿಕಾರ ದುರ್ಬಳಕೆ, ಭ್ರಷ್ಟಾಚಾರ, ಬೆದರಿಕೆ, ಹಣ ವಸೂಲಿ ಸೇರಿದಂತೆ ಅನೇಕ ಗುರುತರ ಆಪಾದನೆಗಳಿದ್ದು ಈ ಕೂಡಲೇ ಅವರನ್ನು ಸಸ್ಪೆಂಡ್ ಮಾಡಿ ತನಿಖೆಗೆ ಒಳಪಡಿಸಬೇಕು. ರಾಷ್ಟ್ರಪತಿಗಳ ಪ್ರತಿನಿಧಿಯಾದ ರಾಜ್ಯಪಾಲರ ರಾಜಭವನದ ತನಿಖೆಗೆ ಅವರು ಆದೇಶ ನೀಡಿದ್ದಾರೆ ಎಂದರೆ ಸಂವಿಧಾನಕ್ಕೆ ಅವರು ನೀಡುವ ಗೌರವ ಎಂಥದ್ದು ಎಂದು ತಿಳಿಯುತ್ತದೆ. ರಾಜ್ಯದೆಲ್ಲೆಡೆ ಅವರ ವಿರುದ್ದ ಜೆಡಿಎಸ್ ಪಕ್ಷ ಹೋರಾಟ ಮಾಡುತ್ತಿದ್ದು, ಕುಮಾರಸ್ವಾಮಿಯವರು ಅವರ ವಿರುದ್ದ ಕೇಂದ್ರ ಗೃಹಮಂತ್ರಿ ಅಮಿತ್ಷಾರವರಿಗೆ ದೂರು ನೀಡಿದ್ದಾರೆ. ಈ ಕೂಡಲೇ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು. ರಾಜ್ಯಪಾಲರು ನೇರವಾಗಿ ತಮಗೆ ಬೇಕಾದ ಮಾಹಿತಿಯನ್ನು ಪಡೆಯದಂತೆ ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ. ರಾಜ್ಯದ ಒಬ್ಬ ಸಾಮಾನ್ಯ ಪ್ರಜೆಗೆ ತನಗೆ ಬೇಕಾದ ಮಾಹಿತಿ ಪಡೆಯಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ರಾಜ್ಯದ ಪ್ರಥಮ ಪ್ರಜೆಯಾದ ರಾಜ್ಯಪಾಲರು ಮಾಹಿತಿ ಪಡೆದುಕೊಳ್ಳಲು ಸಂಪುಟದ ಅನುಮತಿ ಬೇಕು ಎಂದ ಸರ್ಕಾರದ ತೀರ್ಮಾನ ಸಂವಿಧಾನ ವಿರೋಧಿಯಾಗಿದ್ದು ರಾಜ್ಯ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ. ಇದು ಒಕ್ಕೂಟ ವ್ಯವಸ್ಥೆಗೆ ಮಾಡಿದ ಅವಮಾನ ಎಂದರು. ಸಿದ್ದರಾಮಯ್ಯನವರು ತಮಗೆ ನೀಡಿದ ಮೂಡಾ ಸೈಟ್ಗಳನ್ನು ವಾಪಸ್ ನೀಡಿದ್ದಾರೆ. ಅಂದರೆ ಅವರು ತಪ್ಪು ಮಾಡಿರುವುದನ್ನು ಒಪ್ಪಿಕೊಂಡ ಹಾಗೆ ಆಗಿದೆ. ಆದ್ದರಿಂದ ಅವರ ವಿರುದ್ದ ತನಿಖೆಯನ್ನು ನಿಷ್ಪಕ್ಷವಾಗಿ ಕೈಗೊಳ್ಳಬೇಕು. ಅವರು ರಾಜೀನಾಮೆ ನೀಡುವ ಪರಿಸ್ಥಿತಿ ಬಂದೇ ಬರುತ್ತದೆ ಎಂದು ಕೆ.ಟಿ. ಶಾಂತಕುಮಾರ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಗ್ರಾಪಂ ಸದಸ್ಯರಾದ ಚಿನ್ನಸ್ವಾಮಿ ಮತ್ತು ನಟರಾಜು, ಮುಖಂಡರಾದ ಮಂಜಣ್ಣ, ಕುಮಾರ್, ಸಂತೋಷ್ ಇನ್ನಿತರರು ಇದ್ದರು.