ಶಿವಮೊಗ್ಗ: ತ್ರಿಮತಸ್ಥ ವಿಪ್ರ ಸಮಾಜದ ಯುವ ಜನರಿಗಾಗಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ವತಿಯಿಂದ ಜುಲೈ 6ರಂದು ನಗರದ ಬಿ.ಎಚ್.ರಸ್ತೆಯ ಶ್ರೀ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ವಿಪ್ರ ಯುವ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಸಿ. ನಟರಾಜ್ ಭಾಗವತ್ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬ್ರಾಹ್ಮಣ ಸಮಾಜದ ಯುವಜನರಲ್ಲಿ ಸಮಾಜಮುಖಿ ಚಟುವಟಿಕೆಗಳನ್ನು ಪ್ರೇರಣೆ ಒದಗಿಸುವ ಉದ್ದೇಶದೊಂದಿಗೆ ವಿಪ್ರ ಯುವ ಮಹೋತ್ಸವ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 11 ಗಂಟೆಗೆ ಶ್ರೀಕ್ಷೇತ್ರ ಕೂಡಲಿ, ಶೃಂಗೇರಿ ಮಠದ ಅಭಿನವ ವಿದ್ಯಾಶಂಕರ ಭಾರತೀ ಶ್ರೀಗಳು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.ವಿಪ್ರ ಸಮಾಜದ ಯುವ ಜನಾಂಗವು ತಮ್ಮ ಭಾವನೆ ಮತ್ತು ಚಿಂತನೆಗಳನ್ನು ಪರಸ್ಪರ ಹಂಚಿಕೊಳ್ಳುವ ಹಾಗೂ ಪ್ರದರ್ಶಿಸಿಸುವ ವೇದಿಕೆಯು ಇದಾಗಿದ್ದು, ವಿಪ್ರ ಯುವ ಸಮಾವೇಶ ಮತ್ತು ಸ್ಪರ್ಧೆಗಳನ್ನು ಹೊರತುಪಡಿಸಿಯೂ ಸಮಾಜದ ಎಲ್ಲಾ ಯುವಜನತೆ ಇಲ್ಲಿ ಪಾಲ್ಗೊಳ್ಳಬೇಕೆನ್ನುವುದು ಮಹಾಸಭಾ ಉದ್ದೇಶವಾಗಿದೆ ಎಂದರು.
ವಿಪ್ರ ಯುವ ಮಹೋತ್ಸವದಲ್ಲಿ ಸಾಮಾನ್ಯ ರಸಪ್ರಶ್ನೆ, ಚರ್ಚಾಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಜನಪದ ಗೀತೆ, ಸಮೂಹ ಗಾಯನ, ಹಾಗೂ ಭಗವದ್ಗೀತೆಯ 12ನೇ ಅಧ್ಯಾಯದ ಕಂಠಪಾಠ ಸ್ಪರ್ಧೆಗಳು ನಡೆಯಲಿವೆ. ವಿಶೇಷ ಆಕರ್ಷಣೆಯಾಗಿ ಥಟ್ ಅಂತ ಹೇಳಿ ಮಾದರಿಯಲ್ಲಿ ತಡೆರಹಿತ ಪ್ರಶ್ನೋತ್ತರವು ನಡೆಯಲಿದೆ. ಈ ಸ್ಪರ್ಧೆಯ ಪ್ರತಿ ವಿಭಾಗಕ್ಕೂ ಪ್ರಥಮ ಬಹುಮಾನವಾಗಿ 3000, 2ನೇ ಬಹುಮಾನವಾಗಿ 2000 ಹಾಗೂ ಮೂರನೇಯ ಬಹುಮಾನವಾಗಿ 1000 ರು.ಗಳು ಇರುತ್ತವೆ ಎಂದು ತಿಳಿಸಿದರು.12 ರಿಂದ 25 ವರ್ಷದ ವಯೋಮಿತಿಯೊಳಗಿನ ವಿಪ್ರ ಸಮಾಜದ ಯುವಜನರಿಗೆ ಇಲ್ಲಿ ಭಾಗವಹಿಸಲು ಅವಕಾಶವಿದ್ದು, ಆಸಕ್ತರು ನೋಂದಣಿ ಶುಲ್ಕ 50 ರು. ಸಂದಾಯ ಮಾಡಿ, ಜು.4 ರೊಳಗೆ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು. ಸ್ಪರ್ಧಾ ಕಾರ್ಯಕ್ರಮಗಳ ನಂತರ ಅಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಉಡುಪಿಯ ಉದ್ಯಾವರದ ಪ್ರೊ.ಪವನ್ಕಿರಣಕೆರೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಯುವ ಮುಹೋತ್ಸವವು ಬೆಳಗ್ಗೆ 9.30 ರಿಂದ ಸಂಜೆ 5 ರವರೆಗೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಬಿ.ಕೆ.ವೆಂಕಟೇಶ್ಮೂರ್ತಿ ಮೊ. 944969912, ಸವಿತಾಮಾಧವ್ ಮೊ. 9902699882 ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಡಿ.ಎಂ.ಕುಲಕರ್ಣಿ, ಕೇಶವಮೂರ್ತಿ, ಶ್ರೀನಿವಾಸ್ ಪುರಾಣಿಕ್, ವೆಂಕಟೇಶ್ಮೂರ್ತಿ ಮೊದಲಾದವರಿದ್ದರು.