ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ
ಮುಂಗಾರು ಆರಂಭದಲ್ಲಿ ಸುರಿದ ಅಲ್ಪ ಮಳೆ ನಂಬಿ ಬಿತ್ತನೆ ಮಾಡಿದ್ದ ಹೆಸರು ಬೆಳೆಗೆ ಈಗ ಮಳೆ ಕೊರತೆಯ ಜತೆಗೆ ಹಳದಿ ನಂಜಾಣು ರೋಗ ಕಂಟಕವಾಗಿ ಪರಿಣಮಿಸಿದ್ದು, ರೈತರಲ್ಲಿ ತೀವ್ರ ಆತಂಕ ಮನೆ ಮಾಡಿದೆ.
ಪಟ್ಟಣ ಸೇರಿದಂತೆ ತಾಲೂಕಿನ ದೋಟಿಹಾಳ, ಹನುಮಸಾಗರ, ಹನುಮನಾಳ, ತಾವರಗೇರಾ ವ್ಯಾಪ್ತಿಯ ಹಲವಾರು ಗ್ರಾಮಗಳಲ್ಲಿ ಬೆಳೆದಿರುವ ಹೆಸರು ಬೆಳೆ ಈಗ ಹಳದಿ ರೋಗದ ದಾಳಿಗೆ ತುತ್ತಾಗುತ್ತಿದೆ. ಆರಂಭದಲ್ಲಿ ಕೆಲವೇ ಗಿಡಗಳಲ್ಲಿ ಕಾಣಿಸಿಕೊಂಡಿದ್ದ ರೋಗ, ಬಿಳಿನೊಣಗಳ ಮೂಲಕ ಕ್ಷಿಪ್ರವಾಗಿ ಹರಡಿ ಹೊಲದಿಂದ ಹೊಲಕ್ಕೆ ವ್ಯಾಪಿಸುತ್ತಿದೆ. ಎಲೆಗಳ ಮೇಲೆ ಹಳದಿ ಮಚ್ಚೆ ಕಾಣಿಸಿಕೊಂಡ ಬಳಿಕ ಸಂಪೂರ್ಣ ಗಿಡವೇ ಹಳದಿ ಬಣ್ಣಕ್ಕೆ ತಿರುಗಿ ಬೆಳವಣಿಗೆ ಕುಂಠಿತವಾಗುತ್ತದೆ.ಮಳೆ ಕೊರತೆ ಗಾಯದ ಮೇಲೆ ಬರೆ: ಮುಂಗಾರು ಆರಂಭದಲ್ಲಿ ಸುರಿದ ಮಳೆಯೇ ರೈತರಲ್ಲಿ ಹೊಸ ಭರವಸೆ ಮೂಡಿಸಿತ್ತು. ಆದರೆ ನಂತರದ ದಿನಗಳಲ್ಲಿ ಮಳೆ ಬಾರದ ಕಾರಣ ಹೊಲಗಳಲ್ಲಿ ತೇವಾಂಶ ಸಂಪೂರ್ಣ ಕಡಿಮೆಯಾಗಿದೆ. ಮಣ್ಣಿನಲ್ಲಿ ಬಿರುಕು ಮೂಡಿದ್ದು, ಗಿಡಗಳು ನೀರಿನ ಕೊರತೆಯಿಂದ ಬಾಡುತ್ತಿವೆ. ಇಂತಹ ದುರ್ಬಲ ಪರಿಸ್ಥಿತಿಯಲ್ಲೇ ವೈರಸ್ ದಾಳಿ ನಡೆಸಿರುವುದರಿಂದ ಬೆಳೆ ಸಂಪೂರ್ಣ ನಾಶವಾಗುವ ಭೀತಿ ಎದುರಾಗಿದೆ.
ಸಾಲದ ಹಣವೂ ಮರಳದ ಆತಂಕ: ಬೀಜ, ಗೊಬ್ಬರ, ಉಳುಮೆ, ಬಿತ್ತನೆ, ಕಳೆ ತೆಗೆಯುವುದು, ಔಷಧ ಸಿಂಪಡಣೆ ಸೇರಿದಂತೆ ಪ್ರತಿ ಎಕರೆಗೆ ಸಾವಿರಾರು ಹೂಡಿಕೆ ಮಾಡಲಾಗಿದೆ. ಉತ್ತಮ ಬೆಲೆ ಮತ್ತು ಉತ್ತಮ ಇಳುವರಿ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಅನೇಕ ರೈತರು ಸಾಲ ಮಾಡಿ ಕೃಷಿ ಕೈಗೊಂಡಿದ್ದಾರೆ. ಆದರೆ ಈಗ ಮಳೆ ಕೊರತೆ ಮತ್ತು ಹಳದಿ ರೋಗದ ಹೊಡೆತದಿಂದ ಇಳುವರಿ ಕುಸಿಯುವ ಲಕ್ಷಣ ಸ್ಪಷ್ಟವಾಗಿದ್ದು, ಸೂಕ್ತ ಪರಿಹಾರ ಒದಗಿಸುವ ಕೆಲಸ ಸರ್ಕಾರ ಮಾಡಬೇಕಿದೆ.
ವೈರಸ್ ವೇಗದ ಹರಡುವಿಕೆ: ಕೃಷಿ ತಜ್ಞರ ಪ್ರಕಾರ ಹಳದಿ ರೋಗವು ವೈರಸ್ನಿಂದ ಉಂಟಾಗುತ್ತದೆ. ಬಿಳಿನೊಣದಂತಹ ರಸ ಹೀರುವ ಕೀಟ ಈ ವೈರಸ್ ಅನ್ನು ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಹರಡಿಸುತ್ತವೆ. ಆರಂಭಿಕ ಹಂತದಲ್ಲೇ ನಿಯಂತ್ರಣ ಕ್ರಮ ಕೈಗೊಳ್ಳದಿದ್ದರೆ ಇಡೀ ಹೊಲವೇ ಸೋಂಕಿಗೆ ಒಳಗಾಗುವ ಅಪಾಯವಿದೆ.
ಕ್ರೋಟಾನ್ (ಸೀಮೆಎಣ್ಣೆ ಗಿಡ), ಯುಪೊರ್ಬಿಯಾ (ಬೀದಿ ಸೊಪ್ಪು), ಮ್ಯಾಲ್ವ್ಯಾಸ್ಟಮ್ (ಸಣ್ಣ ಬಿಂದಿಗೆ ಗಿಡ), ಪೈಲಾಂತಸ್ (ಮದ್ರಾಸ್ ನೆಲ್ಲಿ) ಹಾಗೂ ಅಕ್ಕಾಲೀಪಾ (ಮುಳ್ಳು ಹೊನೆ ಗೊನೆ) ಗಳನ್ನು ಹೊಲದಿಂದ ತೆಗೆದು ಸುಟ್ಟು ಹಾಕಬೇಕು.
ಕುಷ್ಟಗಿ ತಾಲೂಕಿನಲ್ಲಿ 3680 ಹೆಕ್ಟೇರ್ ಹೆಸರು ಬೆಳೆ ಬಿತ್ತನೆ ಮಾಡಲಾಗಿದ್ದು, ಹಳದಿ ರೋಗ ಕಂಡು ಬಂದ ಕೂಡಲೇ ಸೋಂಕಿತ ಗಿಡ ತೆಗೆದು ನಾಶಪಡಿಸಬೇಕು. ಬಿಳಿನೊಣ ನಿಯಂತ್ರಣಕ್ಕೆ ಶಿಫಾರಸು ಮಾಡಿದ ಔಷಧ ಸಿಂಪಡಿಸಿದರೆ ರೋಗದ ಹರಡುವಿಕೆ ತಡೆಯಬಹುದು. ರೈತರು ಕೃಷಿ ಅಧಿಕಾರಿಗಳ ಸಲಹೆ ಪಡೆದು ಕ್ರಮ ಕೈಗೊಳ್ಳಬೇಕು ಎಂದು ರಾಜಶೇಖರಗೌಡ ಕುಷ್ಟಗಿ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ತಿಳಿಸಿದ್ದಾರೆ.