ಕನ್ನಡಪ್ರಭ ವಾರ್ತೆ ಹೊಸದುರ್ಗ
ವಿಶ್ವಕರ್ಮ ಸಮುದಾಯದವರು ಸಂಘಟಿತರಾಗದಿದ್ದರೆ ಮುಂದಿನ ದಿನಗಳಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿಯಬೇಕಾಗುತ್ತದೆ ಎಂದು ಅಂಗವಿಕಲರ ಅಧಿನಿಯಮದ ಮಾಜಿ ಆಯುಕ್ತ ಕೆ.ಎಸ್.ರಾಜಣ್ಣ ಕಳವಳ ವ್ಯಕ್ತಪಡಿಸಿದರು. ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘ, ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಪಟ್ಟಣದ ಅಶೋಕ ರಂಗಮಂದಿರದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜನಜಾಗೃತಿ ಸಮಾವೇಶ, ವಿವಿಧ ಪ್ರಶಸ್ತಿ ಪುರಸ್ಕೃತರು, ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಸರ್ಕಾರ ವಿಶ್ವಕರ್ಮ ಜನಾಂಗದ ಹೆಸರಿನಲ್ಲಿ ಹಲವು ಯೋಜನೆ ರೂಪಿಸುತ್ತವೆ. ಆದರೆ, ಅವುಗಳನ್ನು ಅನುಷ್ಠಾನ ಮಾಡುವುದರಲ್ಲಿ ವಿಫಲವಾಗುತ್ತಿವೆ. ವಿಶ್ವಕರ್ಮ ಸಮುದಾಯದ ಬಂಧುಗಳು ಹಲವು ಕ್ಷೇತ್ರಗಳಲ್ಲಿ ಪ್ರಸಿದ್ಧಿ ಪಡೆದಿದ್ದರೂ ಸಮುದಾಯ ಇಂದಿಗೂ ಸಂಘಟನೆಯಾಗದೇ ಇರುವುದು ಬೇಸರದ ಸಂಗತಿ. ಸರ್ಕಾರ ನಮ್ಮನ್ನು ಕಡೆಗಣಿಸುತ್ತಿದ್ದು, ಅಗತ್ಯ ಸೌಲಭ್ಯ ಕಲ್ಪಿಸುತ್ತಿಲ್ಲ. ಈ ನಿಟ್ಟಿನಲ್ಲಿ ಸಮುದಾಯದವರು ಪ್ರಜ್ಞಾವಂತರಾದರೆ ಮಾತ್ರ ಸಮುದಾಯದ ಭವಿಷ್ಯ ಉಳಿಯಲು ಸಾಧ್ಯವಾಗುತ್ತದೆ ಎಂದರು.ಜನಸೇವಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸೋಮು ಮಾತನಾಡಿ, ವಿಶ್ವಕರ್ಮ ಸಮಾಜ ತನ್ನದೇಯಾದ ಇತಿಹಾಸ ಹೊಂದಿದ್ದು, ರಾಜ್ಯ ಮತ್ತು ದೇಶಕ್ಕೆ ಅಪಾರ ಕೊಡುಗೆ ನೀಡಿದೆ. ಬಂಡೆಕಲ್ಲಿಗೆ ಅದ್ಭುತ ರೂಪ ಕೊಡುವ ಸಮಾಜ ನಮ್ಮದಾಗಿದ್ದು, ಶತಮಾನಗಳಿಂದ ಪಂಚ ಕಸುಬುಗಳ ಮೂಲಕ ದೇಶದ ಸಂಸ್ಕೃತಿ ಬಿಂಬಿಸುವ ಕಾರ್ಯದಲ್ಲಿ ವಿಶ್ವಕರ್ಮ ಸಮಾಜದ ಜನರು ತೊಡಗಿದ್ದಾರೆ. ವಿಶ್ವಕರ್ಮ ಸಮಾಜದ ಜನರು ಸರ್ಕಾರದ ಸೌಲಭ್ಯಗಳನ್ನು ಪಡೆದು ಆರ್ಥಿಕ ಹಾಗೂ ಸಮಾಜಿಕವಾಗಿ ಅಭಿವೃದ್ಧಿಯಾಗಬೇಕು ಎಂದು ಸಲಹೆ ನೀಡಿದರು. ಸಮಾರಂಭದಲ್ಲಿ ಶಾಸಕ ಬಿ.ಜಿ.ಗೋವಿಂದಪ್ಪ ಅಧ್ಯಕ್ಷತೆ ವಹಿಸಿದ್ದರು. ಅರೇಮಾದೇನಹಳ್ಳಿ ಪೀಠದ ಶಿವಸುಜ್ಞಾನ ತೀರ್ಥ ಸ್ವಾಮೀಜಿ, ವಡ್ನಾಳ್ ಮಠದ ಶಂಕರಾತ್ಮನಂದಾ ಸರಸ್ವತಿ ಸ್ವಾಮೀಜಿ, ಕನಕಧಾಮದ ಈಶ್ವರಾನಂದಪುರಿ ಸ್ವಾಮೀಜಿ, ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ, ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಐರಾಣಿ ಮಠದ ಗಜದಂಡ ಸ್ವಾಮೀಜಿ, ಆಂಧ್ರಪ್ರದೇಶದ ನೊಸ್ಸಂ ವೀರಭದ್ರಯ್ಯ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು.ಈ ವೇಳೆ ತಾಲೂಕು ಘಟಕದ ಅಧ್ಯಕ್ಷ ಶಿವಕುಮಾರ್, ಪಿ.ಜಿ. ಅನಿತಾ ಲಕ್ಷ್ಮಿ, ವಿಶ್ವಕರ್ಮ ಸಮಾಜದ ಮುಖಂಡರಾದ ಬಿ. ಉಮೇಶ್, ಬಾಬು ಪತ್ತಾರ್, ಈಶ್ವರಾಚಾರ್, ಹೆಚ್. ಪರಮೇಶ್ವರಾಚಾರ್, ಸಮುದಾಯದ ಮುಖಂಡರು, ಜನಪ್ರತಿನಿಧಿಗಳು, ಮುಖಂಡರು ಇದ್ದರು.