ರಾಮಮಂದಿರ ನಿರ್ಮಾಣದಲ್ಲಿ ವಿಶ್ವ ಕರ್ಮರ ಕುಸುರಿ ಅಪಾರ

KannadaprabhaNewsNetwork |  
Published : Sep 18, 2025, 01:10 AM IST
ಚಿತ್ರದುರ್ಗಮೂರನೇ ಪುಟದ ಲೀಡ್    | Kannada Prabha

ಸಾರಾಂಶ

ಚಿತ್ರದುರ್ಗದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ವಿಶ್ವಕರ್ಮ ಜಯಂತಿಯನ್ನು ವಿಶ್ವಕರ್ಮ ಮಹಾ ಸಂಸ್ಥಾನದ ಶಂಕರಾತ್ಮಾನಂದ ಸರಸ್ವತಿ ಮಹಾಸ್ವಾಮೀಜಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಅಯೋಧ್ಯೆ ರಾಮಮಂದಿರ ನಿರ್ಮಾಣದಲ್ಲಿ ವಿಶ್ವಕರ್ಮಕ ಕುಸುರಿ ಅಪಾರವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಬುಧವಾರ ನಗರದ ವಿಶ್ವಕರ್ಮ ಕಾಳಿಕಾಂಬ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಯೋಧ್ಯೆ ರಾಮಮಂದಿರದ ರಾಮಲಲ್ಲಾ ಮೂರ್ತಿ ಕೆತ್ತಿದ ಅರುಣ್ ಯೋಗಿರಾಜ್ ಸೇರಿದಂತೆ ಇಂದು ರಾಜ್ಯ ಶಿಲ್ಪಕಲಾಕಾರರು ವಿಶ್ವದಾದ್ಯಂತ ತಮ್ಮ ಛಾಪು ಮೂಡಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ವಿನಯ್ ಕಾಳಚಾರ್ ಅಮೇರಿಕದ ವಾಷಿಂಗ್ಟ್‍ನ್‍ನಲ್ಲಿ 20 ಅಡಿ ಎತ್ತರ ಕನ್ನಡ ಭುವನೇಶ್ವರಿ ಶಿಲ್ಪಕಲಾ ಮೂರ್ತಿ ಕೆತ್ತನೆ ಮಾಡಿ ಕನ್ನಡದ ಸೊಬಗನ್ನು ಬಿಂಬಿಸಿದ್ದಾರೆ ಎಂದರು.

ಹೊಯ್ಸಳರ ಕಾಲದ ಬೇಲೂರು, ಹಳೇಬಿಡು, ವಿಜಯನಗರ ಸಾಮ್ರಾಜ್ಯದ ಹಂಪಿ ದೇವಾಲಯಗಳು ವಿಶ್ವ ಪಾರಂಪರಿಕ ತಾಣಗಳೆಂದು ಗುರುತಿಸಲಾಗಿದೆ. ಇಂತಹ ಅದ್ಭುತ ದೇವಾಲಯಗಳನ್ನು ನಿರ್ಮಿಸಿ ನಾಡಿನ ವಾಸ್ತುಶಿಲ್ಪಕ್ಕೆ ವಿಶ್ವಕರ್ಮರು ಅಪಾರ ಕೊಡುಗೆ ನೀಡಿದ್ದಾರೆ. ಸಾವಿರಾರು ವರ್ಷಗಳ ವಾಸ್ತುಶಿಲ್ಪ ಕಲೆಯನ್ನು ಇಂದಿಗೂ ವಿಶ್ವಕರ್ಮರು ಜೀವಂತ ಇರಿಸಿದ್ದಾರೆ. ಪ್ರಸ್ತುತ ವಿಶ್ವಕರ್ಮ ಸಮುದಾಯದವರು ಆಧುನಿಕ ಶಿಕ್ಷಣದ ಜೊತೆಗೆ ಮೂಲ ಕುಲ ಕಸುಬುಗಳನ್ನು ಸಹ ಕಾಪಾಡಿ ಮುಂದಿನ ಜನಾಂಗಕ್ಕೆ ಕೊಡುಗೆಯಾಗಿ ನೀಡಬೇಕು ಎಂದರು.

ವಿಶ್ವಕರ್ಮ ಎಂದರೆ ಕೇವಲ ಜಾತಿ ಸೂಚಕವಲ್ಲ, ನಾನಾ ಕುಲವೃತ್ತಿಗಳನ್ನು ಪರಂಪರಾಗತವಾಗಿ ಮಾಡುತ್ತ ಬಂದಿರುವ ಹಲವು ಜಾತಿಗಳ ಗುಂಪಾಗಿದೆ. ಮಾನವ ಕುಲಕ್ಕೆ ಅಗತ್ಯವಾದ ಮನೆಯಿಂದ ಹಿಡಿದು, ಮರದ ವಸ್ತುಗಳು, ಲೋಹದ ವಸ್ತುಗಳು, ಕಲ್ಲಿನ ದೇವರ ಮೂರ್ತಿಗಳನ್ನು ಸಹ ನಿರ್ಮಿಸಿ ನಮ್ಮೆಲ್ಲರ ಜೀವನಕ್ಕೆ ಅರ್ಥ ಕಲ್ಪಿಸಿದ ಕಾಯಕ ಜೀವಿಗಳೆಲ್ಲರು ವಿಶ್ವಕರ್ಮ ಸಮುದಾಯಕ್ಕೆ ಸೇರುತ್ತಾರೆ ಎಂದು ಕೆ.ಎಸ್.ನವೀನ್ ಹೇಳಿದರು.

ತಹಸೀಲ್ದಾರ್ ಗೋವಿಂದರಾಜ್ ಮಾತನಾಡಿ, ಜಿಲ್ಲಾಡಳಿತದಿಂದ ವರ್ಷಕ್ಕೆ 36ಕ್ಕೂ ಹೆಚ್ಚು ಜಯಂತಿಗಳನ್ನು ಆಚರಿಸಲಾಗುತ್ತದೆ. ಜಯಂತಿಗಳನ್ನು ವಿಜೃಂಭಣೆಯಿಂದ ಆಚರಿಸುವುದರ ಜೊತೆಗೆ ಮಹನೀಯರ ತತ್ವ-ಆದರ್ಶಗಳನ್ನು ಪಾಲನೆ ಮಾಡಬೇಕು. ವಿಶ್ವಕರ್ಮ ಸಮುದಾಯ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಬರಬೇಕು ಎಂದರು.

ಚನ್ನಗಿರಿ ತಾಲೂಕಿನ ವಡ್ಡನಹಾಳ್ ಗ್ರಾಮದ ಶ್ರೀಮದ್ ಜಗದ್ಗುರು ವಿಶ್ವಕರ್ಮ ಮಹಾ ಸಂಸ್ಥಾನದ ಶಂಕರಾತ್ಮಾನಂದ ಸರಸ್ವತಿ ಮಹಾಸ್ವಾಮೀಜಿ ಮಾತನಾಡಿ, ಸೆ.22ರಿಂದ ಅ.7 ರವರೆಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ವಿಶ್ವಕರ್ಮ ಸಮಾಜವು ಬೆಂಬಲವಾಗಿ ನಿಲ್ಲಬೇಕು. ಸಮೀಕ್ಷೆಯಲ್ಲಿ ರಾಷ್ಟ್ರೀಯತೆ ಕಾಲಂನಲ್ಲಿ ಭಾರತೀಯರೆಂದು, ಧರ್ಮ ಕಾಲಂನಲ್ಲಿ ಹಿಂದೂ, ಜಾತಿ ವಿಶ್ವಕರ್ಮ, ಪ್ರವರ್ಗ-2ಎ ಎಂದು ನಮೂದಿಸಲು ಕರೆ ನೀಡಿದರು.

ನಗರದ ಮುರುಘಾ ಮಠದ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಕಾಯಕವನ್ನು ನಿಷ್ಠೆಯಿಂದ ಮಾಡುವ ವಿಶ್ವಕರ್ಮ ಸಮುದಾಯ ಕೆಲಸದಲ್ಲಿಯೇ ದೇವರನ್ನು ಕಾಣುತ್ತದೆ. ಇಂತಹ ವರ್ಗಗಳಿಗೆ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು 2ಎ ಅಡಿ ಮೀಸಲಾತಿ ನೀಡಿ ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ನಾಂದಿ ಹಾಡಿದರು ಎಂದರು.

ವಿಶ್ವಕರ್ಮ ಜಯಂತಿ ಅಂಗವಾಗಿ ಚಿತ್ರದುರ್ಗ ನಗರದ ಬುರುಜನಹಟ್ಟಿಯ ಕೋಟೆ ಆಂಜನೇಯ ದೇವಸ್ಥಾನ ಬಳಿ ವಿಶ್ವಕರ್ಮ ಭಾವಚಿತ್ರ ಮೆರವಣಿಗೆಗೆ ಉಪವಿಭಾಗಾಧಿಕಾರಿ ಮಹೆಬೂಬ್ ಜಿಲಾನಿ ಖುರೇಷಿ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಕೆ.ಪಿ.ರವೀಂದ್ರನಾಥಾಚಾರ್ ಉಪನ್ಯಾಸ ನೀಡಿದರು. ಉಮೇಶ್ ಪತ್ತಾರ ಮತ್ತು ತಂಡ ಗೀತಗಾಯನ ನಡೆಸಿಕೊಟ್ಟರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉಮೇಶ್ ಈಶ್ವರ್ ನಾಯ್ಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಕೆ.ಟಿ.ಸುರೇಶಾಚಾರ್ಯ, ವಿಶ್ವಕರ್ಮ ಕಾಳಿಕಾಂಬ ಕಲ್ಯಾಣ ಮಂಟಪ ಟ್ರಸ್ಟ್ ಎ.ಶಂಕರಾಚಾರ್ ಸೇರಿದಂತೆ ಮತ್ತಿರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5-6 ತಿಂಗಳಿಂದ ನೀರು ಪೋಲು: ಕ್ರಮಕೈಗೊಳ್ಳದ ಅಧಿಕಾರಿಗಳು
ತಮ್ಮ ಮೇಲಿನ ಆರೋಪ ಸುಳ್ಳು, ಆಧಾರ ರಹಿತ : ಮುನೀಶ್‌ ಮೌದ್ಗಿಲ್‌